ನವದೆಹಲಿ: ವಿವಾದಾತ್ಮಕ ಹೇಳಿಕೆಯಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ಕಂಗನಾ ರನೌತ್ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಅವರ ವಿರುದ್ಧ ಪ್ರತಿಪಕ್ಷಗಳು ಹರಿಹಾಯ್ದಿವೆ. ಖಾಸಗಿ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, “2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶಕ್ಕೆ ನಿಜವಾಗಿ ಸ್ವಾತಂತ್ರ್ಯ ದೊರಕಿತು. 1947ರ ದೊರಕಿದ್ದು ಭಿಕ್ಷೆ’ ಎಂದಿದ್ದರು.
ಇದನ್ನು ಖಂಡಿಸಿರುವ ವಿರೋಧ ಪಕ್ಷಗಳ ಮುಖಂಡರು, ನಟಿಯನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಸೋಮವಾರ ಅವರಿಗೆ ಪ್ರದಾನ ಮಾಡಲಾದ ಪದ್ಮಶ್ರೀ ಪ್ರಶಸ್ತಿಯನ್ನೂ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
“ಪದ್ಮಶ್ರೀಯಂತಹ ಪ್ರತಿಷ್ಠಿತ ಪ್ರಶಸ್ತಿ ನೀಡುವುದಕ್ಕೂ ಮುನ್ನ ಅದಕ್ಕೆ ಆಯ್ಕೆ ಆದವರ ಮಾನಸಿಕ ಆರೋಗ್ಯವನ್ನು ತಪಾಸಣೆ ಮಾಡಿಸಬೇಕು’ ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಟ್ವೀಟ್ ಮಾಡಿದ್ದಾರೆ. ಇದನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಟ್ಯಾಗ್ ಮಾಡಿದ್ದಾರೆ.
‘ನಟಿ ಕಂಗನಾ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್, ಕೆಚ್ಚೆದೆಯ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಗನಾ ರನೌತ್ ಹೈಡೋಸೇಜ್ ಮಲಾನಾ ಕ್ರೀಮ್ (ಒಂದು ವಿಧದ ಹಶೀಶ್) ಡ್ರಗ್ಸ್ ಸೇವಿಸಿ ಅಮಲಿನಿಂದ ಈ ರೀತಿ ಬಡಬಡಾಯಿಸಿರಬೇಕು ಎಂದು ಮಹಾರಾಷ್ಟ್ರದ ಸಚಿವ ಎನ್ಸಿಪಿ ಮುಖಂಡ ನವಾಬ್ ಮಲಿಕ್ ವ್ಯಂಗ್ಯವಾಡಿದ್ದಾರೆ.
ಮುಂಬೈ ಪೊಲೀಸರು ನಟಿ ಕಂಗನಾ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.”ಒಂದು ಸಾರಿ ಮಹಾತ್ಮ ಗಾಂಧಿ ಅವರ ತ್ಯಾಗವನ್ನು ಹೀಯಾಳಿಸಿದರೆ, ಮಗದೊಮ್ಮೆ ಗಾಂಧೀಜಿ ಹಂತಕ ನಾಥುರಾಂ ಗೋಡ್ಸೆಯನ್ನು ಹೊಗಳುತ್ತಾರೆ. ಈಗ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಎಲ್ಲರನ್ನೂ ಕಂಗನಾ ಅವಮಾನಿಸುವ ಹೇಳಿಕೆ ನೀಡಿದ್ದಾರೆ. ಇದನ್ನು ದೇಶದ್ರೋಹ ಎನ್ನಬೇಕೋ? ಅಥವಾ ಹುಚ್ಚುತನ ಎನ್ನಬೇಕೋ? ಎಂದು ಸಂಸದ, ಬಿಜೆಪಿಯ ಯುವ ಮುಖಂಡ ವರುಣ್ ಗಾಂಧಿ ಗುರುವಾರ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಸಂಚಾರಿ ವಿಜಯ್ ಅಭಿನಯದ ಆ್ಯಕ್ಟ್ 1978 ಸೇರಿ ಕನ್ನಡದ 4 ಸಿನಿಮಾ ಪನೋರಮಾಕ್ಕೆ
Discussion about this post