ಕಾರ್ತಿಕ ಮಾಸವು ಸನಾತನ ಧರ್ಮೀಯರಿಗೆ ಅತ್ಯಂತ ಪವಿತ್ರವಾದ ಮಾಸಗಳಲ್ಲೊಂದು. ಕಾರ್ತಿಕ ಮಾಸವು ಮಹಾವಿಷ್ಣು ಹಾಗೂ ಮಹೇಶ್ವರ ಇಬ್ಬರನ್ನೂ ವಿಶೇಷವಾಗಿ ಪೂಜಿಸುವ ಮಾಸವಾಗಿದೆ. ಕಾರ್ತಿಕ ಮಾಸದ ಸೋಮವಾರಗಳಂದು ಮಹೇಶ್ವರನ ಪೂಜೆ ಆರಾಧನೆಗಳು ವಿಶೇಷವಾದರೆ ಕಾರ್ತಿಕ ಮಾಸದಲ್ಲೇ ಬರುವ ದೀಪಾವಳಿ ಸಮಯದಲ್ಲಿ ವಿಷ್ಣು ಹಾಗೂ ಲಕ್ಷ್ಮಿಯರನ್ನು ಪೂಜಿಸಲಾಗುತ್ತದೆ. ಆಷಾಢ ಶುದ್ಧ ಏಕಾದಶಿಯಂದು (ಶಯನೈಕಾದಶಿ) ಯೋಗನಿದ್ರೆಗೆ ಜಾರುವ ಮಹಾವಿಷ್ಣುವು ಕಾರ್ತಿಕ ಮಾಸದ ಶುದ್ಧ ದ್ವಾದಶಿಯಂದು ತನ್ನ ಯೋಗನಿದ್ರೆಯಿಂದ ಏಳುತ್ತಾನೆ, ಅದಕ್ಕಾಗಿಯೇ ಅದನ್ನು ಉತ್ಥಾನದ್ವಾದಶಿ ಎನ್ನುವುದು. ವಿಷ್ಣುವು ಯೋಗನಿದ್ರೆಯಲ್ಲಿರುವ ನಾಲ್ಕು ತಿಂಗಳ ಕಾಲ ವಿವಾಹವೇ ಮೊದಲಾದ ಶುಭಕಾರ್ಯಗಳನ್ನು ಇಂದಿಗೂ ದೇಶದ ಕೆಲಭಾಗಗಳಲ್ಲಿ ಕೈಗೊಳ್ಳುವುದಿಲ್ಲ.
ಸಮುದ್ರ ಮಥನ ಕಾಲದಲ್ಲಿ ಅಮೃತಕಳಶವು ಉದ್ಭವಿಸಿದಾಗ ಸಂತಸಗೊಂಡ ಮಹಾವಿಷ್ಣುವಿನ ಕಂಗಳಿಂದ ಹೊರಬಿದ್ದ ಆನಂದಾಶ್ರುಗಳು ಅದರಲ್ಲಿ ಬಿದ್ದಾಗ ಮಹಾಲಕ್ಷ್ಮಿಯೇ ತುಲಸೀ ಸಸ್ಯವಾಗಿ ಅವತರಿಸಿದಳೆಂಬ ನಂಬಿಕೆಯೂ ಇದೆ. ಪಾವಿತ್ರ್ಯದಲ್ಲಿ ಅವಳಿಗೆ ಯಾವ ತುಲನೆಯೂ ಇರದ ಕಾರಣ ಇವಳಿಗೆ ತುಲಸೀ ಎನ್ನುವ ಹೆಸರು ಬಂದಿತೆಂಬ ನಂಬಿಕೆ ಇದೆ. ರುಕ್ಮಿಣಿ ಹಾಗೂ ಸತ್ಯಭಾಮೆಯರಲ್ಲಿ ನಾನು ಹೆಚ್ಚು-ತಾನು ಹೆಚ್ಚು ಎನ್ನುವ ಸ್ಪರ್ಧೆ ಏರ್ಪಟ್ಟಾಗ ಕೃಷ್ಣ ತುಲಾಭಾರ ನಡೆದು ತಕ್ಕಡಿಯಲ್ಲಿ ಒಂದು ಕಡೆ ಕೃಷ್ಣನನ್ನು ಕೂಡಿಸಿ ಇನ್ನೊಂದು ಕಡೆ ಸತ್ಯಭಾಮೆ ತನ್ನ ರಾಶಿ-ರಾಶಿ ಒಡವೆಗಳನ್ನು ಹಾಕಿದರೂ ತಕ್ಕಡಿ ಮೇಲೇಳುವುದಿಲ್ಲ. ಆಗ ಲಕ್ಷ್ಮಿಯ ಅಂಶವೇ ಆದ ರುಕ್ಮಿಣಿಯು ಒಂದೇ ಒಂದು ತುಳಸೀ ದಳವನ್ನು ತಕ್ಕಡಿಗೆ ಹಾಕಿದಾಗ ಕೃಷ್ಣನಿದ್ದ ತಕ್ಕಡಿ ಮೇಲೆದ್ದು ರುಕ್ಮಿಣಿಯೇ ಗೆಲ್ಲುತ್ತಾಳೆ. ಇದು ತುಳಸಿಯ ಮಹಿಮೆ.
ಅಸುರನಾದ ಜಲಂಧರನು ಲೋಕಕಂಟಕನಾಗಿ ಅಜೇಯನಾಗಿರುತ್ತಾನೆ. ತ್ರಿಮೂರ್ತಿಗಳಿಗೂ ಅವನ ಸಂಹಾರ ಮಾಡಲು ಸಾಧ್ಯವಿರದ ಪರಿಸ್ಥಿತಿ ಏರ್ಪಡುತ್ತದೆ. ಇದಕ್ಕೆ ಕಾರಣ ಅವನ ಪತ್ನಿಯಾದ ತುಲಸೀ ದೇವಿಯ ಪಾತಿವ್ರತ್ಯದ ಪರಮಶಕ್ತಿ. ಲೋಕಕಂಟಕನಾದ ಜಲಂಧರನ್ನು ಸಂಹಾರ ಮಾಡಬೇಕೆಂದರೆ ತುಲಸಿಯ ಪಾತಿವ್ರತ್ಯದ ಭಂಗವಾಗಲೇಬೇಕೆಂಬುದನ್ನು ಮನಗಂಡ ಮಹಾವಿಷ್ಣುವು ಜಲಂಧರನ ರೂಪದಲ್ಲೇ ತುಲಸಿಯ ಬಳಿ ಹೋಗಿ ದೇವತೆಗಳೊಂದಿಗಿನ ಯುದ್ಧದಲ್ಲಿ ತಾನು ವಿಜಯಿಯಾಗಿ ಬಂದಿದ್ದೇನೆಂದು ತಿಳಿಸಿದಾಗ ಸಂತೋಷಗೊಂಡ ತುಲಸಿಯು ಅವನನ್ನು ಉಪಚರಿಸಿ ಸಮಾಗಮ ಹೊಂದಿದ ನಂತರ ಕೆಲವು ಕುರುಹುಗಳಿಂದ ಇವನು ತನ್ನ ಪತಿಯಲ್ಲವೆಂಬ ಶಂಕೆಯಿಂದ ದೂರ ನಿಲ್ಲುತ್ತಾಳೆ. ಆಗ ವಿಷ್ಣವು ನಿನ್ನ ಪತಿ ಲೋಕಕಂಟಕನಾಗಿದ್ದು ನಿನ್ನ ಪಾತಿವ್ರತ್ಯದ ಬಲದಿಂದಲೇ ಅಜೇಯನಾಗಿವುದರಿಂದ ನಾನು ಈ ರೀತಿ ಮಾಡಬೇಕಾಯಿತು, ಚಿಂತಿಸಬೇಡ, ಮುಂದೆ ನಿನಗೆ ನನ್ನ ಪತ್ನಿಯ ಸ್ಥಾನ ದೊರೆಯುತ್ತದೆಂದು ವರದಾನ ನೀಡಿದನು. ಜಲಂಧರನ ಮರಣದ ನಂತರ ತುಲಸಿಯು ಗಿಡವಾಗುತ್ತಾಳೆ ಎನ್ನುವ ಪ್ರತೀತಿ ಇದೆ. ಇದರ ಜೊತೆಗೆ ಇನ್ನೊಂದು ನಂಬಿಕೆಯಂತೆ ವೃಂದೆಯು ಪತಿಯ ಮರಣದ ನಂತರ ಚಿತೆಯನ್ನು ನಿರ್ಮಿಸಿಕೊಂಡು ಮಂಗಳದಾಯಿನಿ ಪಾರ್ವತಿಮಾತೆಯನ್ನು ಸ್ಮರಿಸುತ್ತಾ ಅಗ್ನಿಪ್ರವೇಶ ಮಾಡಿದಾಗ ಮಾತೆ ಪಾರ್ವತಿಯು ಆ ಆಗ್ನಿಕುಂಡವನ್ನು ತುಳಸಿ, ನೆಲ್ಲಿ, ಹಾಗೂ ಜಾಜಿ ಗಿಡಗಳಿಂದ ನಂದನವನವನ್ನಾಗಿ ಮಾಡಿದಳೆನ್ನುವ ನಂಬಿಕೆಯೂ ಇದೆ.
ವಿಷ್ಣವಿಗೆ ಪರಮಪ್ರಿಯಳಾದ ತುಲಸಿಯ ವಿವಾಹವನ್ನು ಉತ್ಥಾನದ್ವಾದಶಿಯೆಂದು ಆಚರಿಸಲಾಗುತ್ತದೆ. ವೃಂದಾವನ ಅಥವಾ ತುಲಸೀಕಟ್ಟೆಯಲ್ಲಿ ಅಂದು ನೆಲ್ಲಿಯ ಕೊಂಬೆಯೊಂದನ್ನು ನೆಟ್ಟು ಅಲಂಕರಿಸಿ ದೀಪಗಳನ್ನು ಹಚ್ಚಿ ಪೂಜೆ ಮಾಡುವ ಪದ್ಧತಿಯಿದೆ. ಅಂದು ಪೂಜಾ ಸಮಯದಲ್ಲಿ ಕೆಳಗೆ ನೀಡಲಾಗಿರುವ ಶ್ಲೋಕವನ್ನು ಪಠಿಸಲಾಗುತ್ತದೆ.
ನಮ: ತುಲಸಿ ಕಲ್ಯಾಣೀ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವೀ ನಮಃ ಸಂಪತ್ಪ್ರದಾಯಿನೀ ||
ತುಲಸಿಯ ಮಹಿಮೆ ಇಷ್ಟಕ್ಕೇ ನಿಲ್ಲುವುದಿಲ್ಲ. ತುಲಸಿಯು ಒಂದು ಪರಮ ಪವಿತ್ರ ಸಸ್ಯವಾಗಿರುವುದರ ಜೊತೆಗೆ ಒಂದು ಅತ್ಯಂತ ಪ್ರಭಾವಶಾಲಿ ಔಷಧ ಸಸ್ಯವೂ ಆಗಿದ್ದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ತುಲಸಿಯಲ್ಲಿ ಎರಡು ಮುಖ್ಯವಿಧಗಳಿದ್ದು ಒಂದು ಬಿಳಿ ತುಲಸಿಯಾದರೆ ಇನ್ನೊಂದು ಕೃಷ್ಣತುಲಸಿ. ಎರಡರಲ್ಲೂ ಒಂದೇ ಸಮನಾದ ಔಷಧೀಯ ಗುಣಗಳಿದ್ದು ಕೆಲ ಗಂಟಲಿನ ಸಮಸ್ಯೆಗಳಿಗೆ, ಬೊಜ್ಜು,ಮರೆವು, ಮಧುಮೇಹ, ರಕ್ತದ ಏರೊತ್ತಡ, ಸೋರಿಯಾಸಿಸ್, ಖಿನ್ನತೆ, ಹಾಗೂ ಅನೇಕ ಚರ್ಮರೋಗಗಳಿಗೆ ತುಲಸಿಯು ದಿವ್ಯೌಷಧವಾಗಿದೆ. ಇಂತಹ ಪವಿತ್ರಳಾದ ಮಾತೆ ತುಲಸಿಯನ್ನು ಪೂಜಿಸುವ ಉತ್ಥಾನದ್ವಾದಶಿಯ ಈ ಸುಸಂದರ್ಭದಲ್ಲಿ (ನಾಳೆ ನ.16) ಆಕೆಯು ಸರ್ವರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸೋಣ.
Tomorrow is Tulasi Vivaha Festival Utthana Dwaadashi
ಇದನ್ನೂ ಓದಿ: Diabetes: ಹಬ್ಬದ ಸಾಲಿನಲ್ಲಿ ಮಧುಮೇಹ ನಿಯಂತ್ರಣಕ್ಕೆ ಟಿಪ್ಸ್
ಇದನ್ನೂ ಓದಿ: Gopuja: ದೀಪಾವಳಿ ಹಬ್ಬದಂದು ದೇವಾಲಯಗಳಲ್ಲಿ ಗೋಪೂಜೆ ಮಾಡಿ
Discussion about this post