ಶಿಮ್ಲಾ: ಪ್ರಜಾಪ್ರಭುತ್ವವು ಆಡಳಿತಾತ್ಮಕ ವ್ಯವಸ್ಥೆ ಮಾತ್ರವಲ್ಲ ಇದು ದೇಶದಲ್ಲಿ ಸಹಜ ಪ್ರವೃತ್ತಿಯಾಗಿ ಹರಿದುಬಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಮುಂದಿನ 25 ವರ್ಷ ಕರ್ತವ್ಯ, ಕರ್ತವ್ಯ ಎಂಬುದು ದೇಶದ ತಾರಕ ಮಂತ್ರ ಆಗಬೇಕಿದೆ. ಪ್ರತಿಯೊಂದು ಕೆಲಸ, ಜೀವನ ಶೈಲಿಯಲ್ಲಿ ಇದು ವ್ಯಕ್ತವಾಗಬೇಕು. ಇದು ದೇಶದ ಅಭಿವೃದ್ಧಿ ಮತ್ತು ವ್ಯಕ್ತಿಗತ ಪ್ರಗತಿಯಲ್ಲಿ ಕಾಣಿಸಬೇಕು. ಇದನ್ನು ಸಾಧಿಸಲು ಅವರವರ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶಿಮ್ಲಾದಲ್ಲಿ ನಡೆಯುತ್ತಿರುವ ರಾಜ್ಯಗಳ ವಿಧಾನಮಂಡಲದ ಉಭಯ ಶಾಸನಸಭೆಗಳ ಅಧ್ಯಕ್ಷರು ಮತ್ತು ಸ್ಪೀಕರ್ಗಳ 82ನೇ ಅಖಿಲ ಭಾರತ ಮಟ್ಟದ ಸಮ್ಮೇಳನದಲ್ಲಿ ಬುಧವಾರ ಮಾತನಾಡಿದ ಅವರು, ಶಾಸನಸಭೆಗಳಲ್ಲಿ ಗುಣಾತ್ಮಕ ಚರ್ಚೆಗಳು ನಡೆಯಬೇಕಿದೆ. ಇದು ಘನತೆ ಮತ್ತು ಗಂಭೀರತೆಯಿಂದ ಕೂಡಿರಬೇಕು. ಶಾಸನಸಭೆಗಳು ರಾಜಕೀಯದ ಟೀಕೆ-ಟಿಪ್ಪಣಿಗಳಿಗೆ ವೇದಿಕೆಯಾಗದೆ ವಿಷಯಾಧಾರಿತ ಚರ್ಚೆಯ ವೇದಿಕೆಯಾಗಬೇಕು. ಇಂಥ ಚರ್ಚೆಗಾಗಿಯೇ ವರ್ಷದಲ್ಲಿ ಮೂರ್ನಾಲ್ಕು ದಿನವನ್ನು ವಿಶೇಷ ಅಧಿವೇಶನಕ್ಕಾಗಿ ಮೀಸಲಿರಿಸಬಹುದು ಎಂದರು.
ಸಂಸದೀಯ ವ್ಯವಸ್ಥೆ ಬಲಗೊಳಿಸಲು ಪೋರ್ಟಲ್
ಶಾಸನಗಳ ಕುರಿತು ದೇಶದ ವಿವಿಧ ಭಾಗಗಳಲ್ಲಿ ವಿರೋಧಾಭಾಸ ಇದೆ. ಇದನ್ನು ದೂರ ಮಾಡಲು “ಒಂದು ದೇಶ ಒಂದು ಶಾಸನ’ ಅನುಸರಣೆ ಆಗಬೇಕು. ಈ ನಿಟ್ಟಿನಲ್ಲಿ ತಾಂತ್ರಿಕವಾಗಿ ಸಬಲವಾಗಿರುವ ಪೋರ್ಟಲ್ ಅಭಿವೃದ್ಧಿ ಪಡಿಸುವ ಅಗತ್ಯವಿದೆ, ಇದು ಸಂಸದೀಯ ವ್ಯವಸ್ಥೆಯನ್ನು ಬಲಗೊಳಿಸವ ಜತೆಗೆ ಪ್ರಜಾಸತ್ತಾತ್ಮಕ ಟಕಗಳ ಮಧ್ಯೆ ಸಂವಹನದ ಸೇತುವೆ ಆಗಲಿದೆ ಎಂದರು.
ಭಾರತೀಯ ಶೈಲಿಯ ಎಲ್ಲಡೆ ಇರಲಿ
ವಿವಿಧತೆಯಲ್ಲಿ ಏಕತೆ ಎಂಬುದು ಭಾರತೀಯ ಪರಂಪರೆಯಲ್ಲಿ ಸಹಸ್ರಾರು ಶತಮಾನಗಳಿಂದ ಹರಿದುಬಂದಿದೆ. ಇದನ್ನು ಜತನದಿಂದ ಕಾಯ್ದುಕೊಂಡು ಮುಂದಿನ ಜನಾಂಗಕ್ಕೆ ಕಾಪಿಡಬೇಕಿದೆ. ಸಂಸತ್ ಮತ್ತು ರಾಜ್ಯಗಳ ವಿಧಾನಮಂಡಲಗಳ ಸತ್ಸಂಪ್ರದಾಯ ಭಾರತೀಯ ಶೈಲಿಯಲ್ಲಿ ಇರಬೇಕು. “ಏಕ ಭಾರತ ಶ್ರೇಷ್ಠ ಭಾರತ’ ಎಂಬುದು ಸರ್ಕಾರಗಳ ನೀತಿಯಲ್ಲಿ ವ್ಯಕ್ತವಾಗಬೇಕು. ಮನೆ ಮನೆಯಲ್ಲೂ ಭಾರತೀಯ ಮೌಲ್ಯಗಳ ಆಚರಣೆ ನಮ್ಮೆಲ್ಲರ ಹೊಣೆ ಆಗಬೇಕು ಎಂದು ಮೋದಿ ಹೇಳಿದರು.
ಇದನ್ನೂ ಓದಿ: ಪೂರ್ವಾಂಚಲ ಎಕ್ಸ್ಪ್ರೆಸ್ವೇ ಉತ್ತರಪ್ರದೇಶದ ಸಮಗ್ರ ಅಭಿವೃದ್ಧಿಯ ಹೆದ್ದಾರಿಯಾಗಲಿದೆ: ಪ್ರಧಾನಿ ಮೋದಿ
Discussion about this post