ಚಿಕ್ಕಮಗಳೂರು: ಭಾರತಕ್ಕೆ ನೈಜ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ, 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ ಎಂದು ಪದ್ಮಶ್ರೀ ಪುರಸ್ಕೃತ ನಟಿ ಕಂಗನಾ ರಾಣಾವತ್ ನೀಡಿರುವ ಹೇಳಿಕೆ ಬೌದ್ಧಿಕ ದಿವಾಳಿತನದ ಹೇಳಿಕೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ಅಧ್ಯಕ್ಷ ಜಿ ಕಾರ್ತಿಕ್ ಚೆಟ್ಟಿಯಾರ್ ಹೇಳಿದ್ದಾರೆ.
ಹೇಳಿಕೆಯಲ್ಲಿ ತಿಳಿಸಿರುವ ಅವರು ಇಂತಹ ಹೇಳಿಕೆ ನೀಡುವುದರ ಮೂಲಕ ಇಡೀ ಭಾರತ ದೇಶಕ್ಕೆ ಅವರ ವ್ಯಕ್ತಿತ್ವದ ಬಗ್ಗೆ ತೋರಿಸಿಕೊಟ್ಟಿದ್ದಾರೆ. ಇಡೀ ದೇಶವು ಸ್ವಾತಂತ್ರ್ಯವನ್ನು ಗೌರವಿಸುತ್ತದೆ. ಹುತಾತ್ಮರು ವರ್ಷಗಟ್ಟಲೆ ಆಂದೋಲನಗಳನ್ನು ನಡೆಸಿದ್ದಾರೆ. ಜೊತೆಗೆ ಜೈಲಿಗೆ ಹೋಗಿ ಪ್ರತಿಭಟಿಸಿದ್ದಾರೆ. ಆದರೆ ಭಿಕ್ಷಾಟನೆಯಲ್ಲಿ ಪಡೆದ ಸ್ವಾತಂತ್ರ್ಯ ಎಂದು ಹೇಳಿಕೆ ನೀಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಕಂಗನಾ ಅವಮಾನಿಸಿರುವುದು ಖಂಡನೀಯ ಎಂದಿದ್ದಾರೆ.
ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಹಾಗೂ ಇವರಿಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ಹಿಂಪಡೆಯಬೇಕು ಹಾಗೂ ಭಾರತೀಯ ಪ್ರಜೆಗಳ ಬಳಿ ಕಂಗನಾ ಕ್ಷಮೆ ಯಾಚಿಸಬೇಕೆಂದು ಅಗ್ರಹಿಸಿದ್ದಾರೆ. ಮಹಾತ್ಮ ಗಾಂಧೀಜಿ , ನೆಹರೂ, ಸರ್ದಾರ್ ವಲ್ಲಭಾಯಿ ಪಟೇಲ್ ಅವರಿಂದ ಹಿಡಿದು ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮಂಗಲ್ ಪಾಂಡೆ, ರಾಣಿ ಲಕ್ಷ್ಮಿ ಬಾಯಿ, ಸರೋಜಿನಿ ನಾಯ್ಡು, ಕಸ್ತೂರಬಾ ಸಹಿತ ಇನ್ನೂ ಹಲವಾರು ವೀರ ಮಹಿಳೆಯರು ಸೇರಿದಂತೆ ಅನೇಕ ವ್ಯಕ್ತಿಗಳು ತಮ್ಮ ಇಡೀ ಜೀವನವನ್ನು ಸ್ವಾತಂತ್ರ್ಯಕ್ಕಾಗಿ ಅರ್ಪಿಸಿದ್ದಾರೆ. ಈ ಹೇಳಿಕೆಯಿಂದ ಕಂಗನಾ ಹೊರತುಪಡಿಸಿ ಇಡೀ ದೇಶವು ಈ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂದಿದ್ದಾರೆ.
ಈ ರೀತಿಯ ಹೇಳಿಕೆ ದೇಶವಿರೋಧಿಯಾಗಿದ್ದು, ಪ್ರತಿಯೊಬ್ಬ ಭಾರತೀಯ ಪ್ರಜೆಗೂ ನೋವುಂಟು ಮಾಡಿದೆ. ಸಂವಿಧಾನಕ್ಕೆ ಅವಮಾನ ಮಾಡುವಂತೆ ವಿವಾದಾತ್ಮಕ ಹೇಳಿಕೆ ಹಾಗೂ ತಪ್ಪು ದಾರಿಯಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಸಮಾಜಕ್ಕೆ ಇವರ ಕೊಡುಗೆ ಎನು? ಪ್ರಶಸ್ತಿಯನ್ನು ಇವರೇ ಭಿಕ್ಷೆ ಬೇಡಿ ಪಡೆದಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
Discussion about this post