ಚಿಕ್ಕಮಗಳೂರು : ದೇಶಾದ್ಯಂತ ರೈತರ ತೀವ್ರ ವಿರೋದಕ್ಕೆ ಕಾರಣವಾಗಿದ್ದ ವಿವಾದಾತ್ಮಕ 3 ಕೃಷಿ ಮಸೂದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಲು ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವಿಜಯೋತ್ಸವ ಆಚರಿಸಲಾಗಿದೆ.
ನಗರದ ಆಜಾದ್ ಪಾರ್ಕ್ ಮೈದಾನದ ವೃತ್ತದಲ್ಲಿ ವಿವಿಧ ಪಕ್ಷ ಸಂಘಟನೆಗಳ ಮುಖಂಡರು ವಿಜಯೋತ್ಸವ ಆಚರಿಸಿ ರೈತರ ಸಂಘಟಿತ ಹೋರಾಟಕ್ಕೆ ಸಂದ ವಿಜಯ ಎಂದು ಸಂಭ್ರಮಿಸಿದರು. ಕಳೆದ ಒಂದು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಠಕ್ಕೆ ಬಿದ್ದ ಪರಿಣಾಮ ನೂರಾರು ರೈತರು ಹುತಾತ್ಮರಾಗಿದ್ದರು. ಸರ್ಕಾರ ಈ ಮೊದಲೇ ಆಲೋಚಿಸಿದರೆ ಈ ಅನಾಹುತ ತಪ್ಪಿಸಬಹುದಿತ್ತು ಎಂದು ಮುಖಂಡರು ಅಭಿಪ್ರಾಯಿಸಿದರು.
ರೈತ ಹೋರಾಟವನ್ನು ವಿಡಂಬನಾತ್ಮಕವಾಗಿ ಟೀಕಿಸಿದ್ದ ಬಿಜೆಪಿ ಮುಖಂಡರಿಗೆ ತಕ್ಕ ಪಾಠವಾಗಿದೆ ಎಂದು ಹೇಳಿ ಇದೇ ತಿಂಗಳಲ್ಲಿ ನಡೆಸಲು ಉದ್ದೇಶಿಸಿದ್ದ ಭಾರೀ ಪ್ರತಿಭಟನೆಗೆ ಬೆದರಿ ಸರ್ಕಾರ ಕಾಯ್ದೆಗಳನ್ನು ವಾಪಾಸ್ ಪಡೆದಿದೆ. ಕೇಂದ್ರ ಸರ್ಕಾರ ಜನರ ಭಾವನೆಗಳಿಗೆ ಬೆಲೆ ನೀಡಿ ಖಾಸಗೀಕರಣ ನೀತಿಗಳು ಸೇರಿದಂತೆ ಇನ್ನಷ್ಟು ವಿವಾದಾತ್ಮಕ ತಿದ್ದುಪಡಿ ಮಸೂದೆಗಳನ್ನು ಹಿಂದೆ ಪಡೆಯಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಡಾ. ವಿಜಯ್ಕುಮಾರ್ ಹೆಚ್. ಹೆಚ್. ದೇವರಾಜ್, ಕೆ.ಟಿ .ರಾಧಾಕೃಷ್ಣ, ಗುಣಶೇಖರ್, ತೇಗೂರು ಜಗದೀಶ್ , ಗುರುಶಾಂತಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು .
ಇದನ್ನೂ ಓದಿ:
Discussion about this post