ಬೆಂಗಳೂರು: ಭಾರತೀಯ ಸೈನ್ಯವನ್ನು ದೇಶದ ಗಡಿಪ್ರದೇಶದ ಉದ್ದಕ್ಕೂ ಯಾವುದೇ ಹಾಗೂ ಎಲ್ಲಾ ಸಾಧ್ಯತೆಗಳಿಗೂ ಸಿದ್ಧವಾಗಿರುವಂತೆ ಅರುಣಾಚಲ ಪ್ರದೇಶದ ರಾಜ್ಯಪಾಲ ಬ್ರಿಗೇಡಿಯರ್ (ನಿವೃತ್ತ) ಬಿ.ಡಿ.ಮಿಶ್ರಾ ಹುರಿದುಂಬಿಸಿದರು.
ಛಾಂಗ್ಲಾಂಗ್ ಜಿಲ್ಲೆಯ ರಜಪೂತ್ ರೆಜಿಮೆಂಟ್ನ 14ನೇ ಬೆಟಾಲಿಯನ್ನ ಕಾರ್ಯಾಚರಣೆಯ ಕೇಂದ್ರದಲ್ಲಿ ನಡೆದ ಸೈನಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಬ್ರಿಗೇಡಿಯರ್ ಮಿಶ್ರಾ “ನಮ್ಮ ಸೈನ್ಯವು ಯಾವಾಗಲೂ ತನ್ನ ಎಚ್ಚರಿಕೆಯ ಮಟ್ಟವನ್ನು ಇಳಿಸಿಕೊಳ್ಳಬಾರದು” ಎಂದರು. ಭಾರತಕ್ಕೆ 1962ರಲ್ಲಿ ಪ್ರಬಲ ನಾಯಕತ್ವ ಇರದಿದ್ದ ಕಾರಣ ಚೀನಾ ವಿರುದ್ಧದ ಯುದ್ಧದಲ್ಲಿ ಸೋಲಬೇಕಾಯಿತೆಂದು ಅವರು ಅಭಿಪ್ರಾಯಪಟ್ಟರು.
ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದ್ದು ಭಾರತದ ಸೈನ್ಯವು ವಿಶ್ವದಲ್ಲೇ ಅತಿ ಹೆಚ್ಚು ಪ್ರಬಲವಾದ ಸೈನ್ಯಗಳಲ್ಲೊಂದಾಗಿದೆ ಎಂದರು. ಆದರೂ ನಾವು ನಮ್ಮ ಜಾಗರೂಕತೆಯ ಮಟ್ಟದಲ್ಲಿ ಸ್ವಲ್ಪವೂ ಲೋಪ ಬರದಂತೆ ನೋಡಿಕೊಳ್ಳಬೇಕಾಗಿದ್ದು ಪ್ರತಿಯೊಬ್ಬ ಸೈನಿಕನೂ ಗಡಿಗಳಲ್ಲಿ ಸಂಭವಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಕ್ಕ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ನರೇಂದ್ರ ಮೋದಿಯವರ ಸದ್ಯದ ಸರಕಾರವು ಯಾವಾಗಲೂ ಸೈನಿಕರ ಕಲ್ಯಾಣದ ಬಗ್ಗೆಯೇ ಯೋಚಿಸುವ ಸರಕಾರವಾಗಿದ್ದು ಹಿಂದಿದ್ದ ಸರಕಾರಗಳ ಸೈನ್ಯದ ಬಗೆಗಿನ ದೃಷ್ಟಿಕೋನಕ್ಕಿಂತ ವಿಭಿನ್ನವಾದ ದೃಷ್ಟಿಕೋನ ಹೊಂದಿದೆ ಎಂದೂ ಮಿಶ್ರಾ ತಿಳಿಸಿದರು.
ಸೈನಿಕರು ಶಿಸ್ತಿನಿಂದ ಕೂಡಿದ್ದು ದೇಶರಕ್ಷಣೆಗಾಗಿ ಕಠಿಣ ತರಬೇತಿ ಹೊಂದಿ ಸಾರ್ವಜನಿಕರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿರಬೇಕೆಂದು ಅವರು ಸೈನಿಕರಿಗೆ ಕರೆ ನೀಡಿದರು.
ಪಾಕೀಸ್ತಾನದ ವಿರುದ್ಧ 1965ರಲ್ಲಿ ನಡೆದ ಯುದ್ಧದಲ್ಲಿ ಇದೇ ರೆಜಿಮೆಂಟ್ನಲ್ಲಿ ಕಂಪನಿ ಕಮಾಂಡರ್ ಆಗಿ ಭಾಗವಹಿಸಿದ್ದ ಬ್ರಿಗೇಡಿಯರ್ ಮಿಶ್ರಾ ಬಟಾಲಿಯನ್ನ ಯುದ್ಧ ಕೌಶಲವನ್ನು ಹೊಗಳಿದರು.
Arunachal Governor Brigadier Mishra Lauds the Proficiency of Rajputana Regiment
ಇದನ್ನೂ ಓದಿ: ರಫೇಲ್ ಯುದ್ಧ ವಿಮಾನ ವಿಚಾರ; ಕಾಂಗ್ರೆಸ್-ಬಿಜೆಪಿ ತೀವ್ರ ವಾಕ್ಸಮರ
Discussion about this post