ಚಿಕ್ಕಮಗಳೂರು: ಚಿಕ್ಕಮಗಳೂರು ನಗರದಿಂದ ಪ್ರತಿನಿತ್ಯ ಶಿವಮೊಗ್ಗ ಹಾಗೂ ಯಶವಂತಪುರಕ್ಕೆ ಸಂಚರಿಸುತ್ತಿದ್ದ ಎರಡೂ ಪ್ಯಾಸೆಂಜರ್ ರೈಲುಗಳನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.
ಚಿಕ್ಕಮಗಳೂರು-ಶಿವಮೊಗ್ಗ ರೈಲು ಪ್ರತಿದಿನ ಬೆಳಗ್ಗೆ ೬.೩೦ ಕ್ಕೆ ಚಿಕ್ಕಮಗಳೂರು ನಿಲ್ದಾಣದಿಂದ ಹೊರಡುತ್ತಿತ್ತು. ಚಿಕ್ಕಮಗಳೂರು-ಯಶವಂತಪುರ ರೈಲು ಬೆಳಗ್ಗೆ ೭.೩೦ ಕ್ಕೆ ನಿಲ್ದಾಣ ಬಿಡುತ್ತಿತ್ತು. ಈ ಎರಡೂ ರೈಲು ಸಂಚಾರ ನವೆಂಬರ್ ೨೪ ರಿಂದ ರದ್ದಾಗಲಿದೆ.
ಪ್ರತಿದಿನ ಸಂಜೆ ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ರೈಲು ಇನ್ನು ಮುಂದೆ ಬೀರೂರು ರೈಲು ನಿಲ್ದಾಣದವ ವರೆಗೆ ಮಾತ್ರ ಸಂಚರಿಸಲಿದೆ ಎಂದು ಹುಬ್ಬಳ್ಳಿಯ ಪಶ್ಚಿಮ ವಲಯ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದಾರೆ.
ಈ ಎರಡೂ ರೈಲುಗಳ ಪೈಕಿ ಚಿಕ್ಕಮಗಳೂರು-ಶಿವಮೊಗ್ಗ ರೈಲಿನಲ್ಲಿ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದರು. ಕಡೂರಿಗೆ ತೆರಳಿ ಅಲ್ಲಿಂದ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳ ರೈಲು ಹಿಡಿಯಲು ಇದು ಅನುಕೂಲವಾಗಿತ್ತು. ಅಲ್ಲದೆ ನೇರವಾಗಿ ಶಿವಮೊಗ್ಗಕ್ಕೆ ಪ್ರಯಾಣಿಸುವವರಿಗೂ ಉಪಯುಕ್ತವಾಗಿತ್ತು.
ಚಿಕ್ಕಮಗಳೂರು ಯಶವಂತಪುರ ರೈಲಿಗೆ ಪ್ರಯಾಣಿಕರು ಕಡಿಮೆ ಇದ್ದರು. ಅದು ಸಾಕಷ್ಟು ನಷ್ಟದಲ್ಲೇ ಕಾರ್ಯಾಚರಿಸುತ್ತಿತ್ತು. ಶಿವಮೊಗ್ಗದ ರೈಲನ್ನು ಮುಂದಕ್ಕೆ ವಿಸ್ತರಿಸಬೇಕು, ಬೆಂಗಳೂರಿಗೆ ಪ್ಯಾಸೆಂಜರ್ ಬದಲಿಗೆ ಫಾಸ್ಟ್ ಪ್ಯಾಸೆಂಜರ್ ಅಥವಾ ಎಕ್ಸಪ್ರೆಸ್ ರೈಲುಗಳನ್ನು ಓಡಿಸಬೇಕು ಎನ್ನುವ ಒತ್ತಡ ಮೊದಲಿನಿಂದಲೂ ಇತ್ತು. ಇದೀಗ ಎರಡೂ ರೈಲು ಸಂಚಾರವನ್ನು ರದ್ದುಗೊಳಿಸಿರುವ ರೈಲ್ವೇ ಇಲಾಖೆ ಮುಂದೇನು ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ.
Discussion about this post