ಅಗರ್ತಲಾ: ಕಳೆದ ಚುನಾವಣೆಯ ವರೆಗೂ ಎಡಪಕ್ಷಗಳ ಸುಭದ್ರ “ಕೆಂಪುಕೋಟೆ’ ಆಗಿದ್ದ ತ್ರಿಪುರಾದಲ್ಲಿ ಈ ಸಾರಿಯ ನಗರ ಸ್ಥಳಿಯ ಸಂಸ್ಥೆ ಚುನಾವಣೆ ಬಿರುಗಾಳಿಯ ಪರಿವರ್ತನೆಗೆ ಕಾರಣವಾಗಿದೆ. ತ್ರಿಪುರಾದ 20 ನಗರ ಸ್ಥಳಿಯ ಸಂಸ್ಥೆಗಳ ಪೈಕಿ ನವೆಂಬರ್ 25ರಂದು 14 ನಗರ ಸ್ಥಳೀಯ ಸಂಸ್ಥೆಗಳ 222 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. (ಶೇ. 81.54 ಮತದಾನ) 217ರಲ್ಲಿ ಬಿಜೆಪಿ ಗೆಲುವು ಸಾಧಿಸಿ ಪ್ರತಿಪಕ್ಷಗಳನ್ನು ಧೂಳೀಪಟ ಮಾಡಿದೆ. ಮಾತ್ರವಲ್ಲದೆ 112 ಸ್ಥಾನಗಳನ್ನು ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡು, ಎಲ್ಲ ನಗರಗಳಲ್ಲಿ ಆಡಳಿತ ಹಿಡಿದಿದೆ. ಈ ಹಿಂದಿನ ಚುನಾವಣೆಯಲ್ಲಿ ಸಿಪಿಎಂ ಅಧಿಕಾರದಲ್ಲಿತ್ತು.
ರಾಜಧಾನಿ ಅಗರ್ತಲಾ ನಗರಪಾಲಿಕೆಯಲ್ಲಿ ಟಿಎಂಸಿ ಒಂದು ಮತ್ತು ರಾಜವಂಶಸ್ಥ ಪ್ರದ್ಯೋತ್ ಕಿಶೋರ್ ನೇತೃತ್ವದ ಪಕ್ಷದ ಒಂದು ಸ್ಥಾನ ಗೆದ್ದುಕೊಂಡಿದ್ದನ್ನು ಬಿಟ್ಟರೆ ಉಳಿದೆಲ್ಲ ಬಿಜೆಪಿ ಪಾಲಾಗಿದೆ. ಈ ಮೂಲಕ ನಗರಪಾಲಿಕೆಯಲ್ಲಿ ಪ್ರತಿಪಕ್ಷದ ಅಸ್ತಿತ್ವವೇ ಇಲ್ಲವಾಗಿದೆ. ಕೈಲಾಶ್ಹಾರ್, ಅಂಬಾಸ್ಸಾ, ಪಣಿಸಾಗರ್ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಮಾತ್ರ ಸಿಪಿಎಂ ಅಸ್ತಿತ್ವ ಉಳಿಸಿಕೊಂಡಿದೆ.
“ಬಿಜೆಪಿಗೆ ಶೇ. 98.50ರಷ್ಟು ಜಯ ತಂದುಕೊಟ್ಟಿರುವ ರಾಜ್ಯದ ಜನರು ಪ್ರತಿಪಕ್ಷಗಳ ಟೀಕೆ, ಟಿಪ್ಪಣಿಗೆ ತಕ್ಕ ಉತ್ತರ ನೀಡಿರುವುದರಿಂದ ಈ ಚುನಾವಣೆ ಐತಿಹಾಸಿಕವಾಗಿದೆ. ರಾಜ್ಯದ ಎಲ್ಲ ಸಮುದಾಯದವರು ಬಿಜೆಪಿಯ ಜತೆಗಿದ್ದಾರೆ ಎಂದು ಚುನಾವಣಾ ಫಲಿತಾಂಶ ಸಾರಿದೆ. ನಿರೀಕ್ಷೆಗೂ ಮೀರಿ ಆಶೀರ್ವದಿಸಿದ ರಾಜ್ಯ ಜನರಿಗೆ ಧನ್ಯವಾದ ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಕುಮಾರ್ ಹೇಳಿದ್ದಾರೆ.
ತ್ರಿಪುರಾ ಚುನಾವಣೆಯ ಐತಿಹಾಸಿಕ ಗೆಲುವಿಗೆ ರಾಜ್ಯದ ಜನರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಒಳ್ಳೆಯ ಆಡಳಿತವನ್ನು ಜನರು ಸದಾ ಬೆಂಬಲಿಸುತ್ತಾರೆಂಬ ಸಂದೇಶವನ್ನು ಈ ಚುನಾವಣೆ ಸಾರಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸೋಮವಾರದ ಅಧಿವೇಶನದಲ್ಲಿ ಹಾಜರಿರುವಂತೆ ಸಂಸದರಿಗೆ ವಿಪ್ ಜಾರಿ ಮಾಡಿದ ಬಿಜೆಪಿ, ಕಾಂಗ್ರೆಸ್
Discussion about this post