ಚಿಕ್ಕಮಗಳೂರು: ಕಳೆದ 6 ವರ್ಷಗಳ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ.ಕೆ.ಪ್ರಾಣೇಶ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಹಾಗೂ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಶೂನ್ಯ. ಅವರು ನೀಡಿದ್ದ ಜನರೇಟರ್ಗಳಿಂದ ಯಾವ ಗ್ರಾಮ ಪಂಚಾಯತ್ಗಳಿಗೂ ಪ್ರಯೋಜನವಾಗದೇ ತುಕ್ಕು ಹಿಡಿಯುತ್ತಿದ್ದು, ಆಯುಧಪೂಜೆ ವೇಳೆ ಪೂಜೆ ಮಾಡಲು ಮಾತ್ರ ಉಪಯೋಗಕ್ಕೆ ಬರುತ್ತಿವೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ವ್ಯಂಗ್ಯವಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ತಮ್ಮ ಚುನಾವಣಾ ಪ್ರಚಾರದ ವೇಳೆ ಗ್ರಾಮ ಪಂಚಾಯತ್ಗಳಿಗೆ ಜನರೇಟರ್ಗಳನ್ನು ನೀಡಿರುವುದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುತ್ತಿದ್ದು, ಜಿಲ್ಲೆಯ ಗ್ರಾಮಪಂಚಾಯತ್ಗಳಿಗೆ ಅವರು ನೀಡಿರುವ ಜನರೇಟರ್ಗಳು ಯಾವುದೇ ಉಪಯೋಗಕ್ಕೆ ಬಾರದೇ ತುಕ್ಕು ಹಿಡಿಯುತ್ತಿವೆ. ಗ್ರಾಮ ಪಂಚಾಯತ್ಗಳಿಗೆ ಜನರೇಟರ್ಗಳ ಆವಶ್ಯಕತೆಯೇ ಇರಲಿಲ್ಲ. ಆದರೂ ಜನರೇಟರ್ಗಳನ್ನು ನೀಡಿ ಗ್ರಾಮ ಪಂಚಾಯತ್ಗಳ ಆರ್ಥಿಕ ಹೊರೆಯನ್ನು ಹೆಚ್ಚಿಸಿದ್ದಾರೆ ಎಂದು ಅವರು ಆರೋಪಿಸಿದರು.
ಗ್ರಾಮ ಪಂಚಾಯತ್ಗಳಿಗೆ ಜನರೇಟರ್ಗಳನ್ನು ನೀಡುವ ಬದಲಿಗೆ ಸೋಲಾರ್ ಲೈಟ್ಗಳನ್ನು ನೀಡಿದ್ದರೇ ಗ್ರಾಮಪಂಚಾಯತ್ಗಳ ಆರ್ಥಿಕ ಹೊರೆಯನ್ನಾದರೂ ಕಡಿಮೆ ಮಾಡಬಹುದಿತ್ತು. ಆದರೆ ಜನರೇಟರ್ಗಳನ್ನು ನೀಡಿರುವುದರಿಂದ ಅದರ ಡೀಸೆಲ್ ಖರ್ಚು ಗ್ರಾಮ ಪಂಚಾಯತ್ಗಳಿಗೆ ಹೊರೆಯಾಗುತ್ತಿದೆ. ಸದ್ಯ ಎಲ್ಲ ಗ್ರಾಮ ಪಂಚಾಯತ್ಗಳಲ್ಲೂ ಪ್ರಾಣೇಶ್ ನೀಡಿರುವ ಜನರೇಟರ್ಗಳು ಉಪಯೋಗಕ್ಕೆ ಬಾರದಂತಾಗಿದ್ದು, ಗ್ರಾಮ ಪಂಚಾಯತ್ಗಳಲ್ಲಿ ಈ ಜನರೇಟರ್ಗಳು ಶೋ ಕೇಸ್ ಫೀಸ್ಗಳಾಂತಾಗಿವೆ ಎಂದು ಟೀಕಿಸಿದರು.
ಪ್ರಾಣೇಶ್ ಅವರು ಕಳೆದ ೬ ವರ್ಷಗಳಲ್ಲಿ ೨ ಕೋಟಿಯಂತೆ ೧೨ ಕೋಟಿ ಅನುದಾವನ್ನು ಸಂಪೂರ್ಣವಾಗಿ ಜನರೇಟರ್ ಖರೀದಿಗೆ ವಿನಿಯೋಗಿಸಿರುವುದು ವಿಪರ್ಯಾಸ. ತಮ್ಮ ಅನುದಾನದಲ್ಲಿ ಜನರೇಟರ್ಗಳನ್ನು ನೀಡಿರುವುದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರಾಣೇಶ್ ಇದರ ಹೊರತಾಗಿ ಬೇರೇನೂ ಸಾಧನೆ ಮಾಡಿಲ್ಲ ಎಂಬುದನ್ನು ಜಿಲ್ಲೆಯ ಜನರಿಗೆ ಸ್ಪಷ್ಟ ಪಡಿಸುತ್ತಿದ್ದಾರೆ, ಜಿಲ್ಲೆಯ ಬಯಲು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ನೀರಾವರಿ ಯೋಜನೆಗಳಿಲ್ಲದೇ ರೈತರು ಪರಿತಪಿಸುತ್ತಿದ್ದಾರೆ, ತೆಂಗಿನ ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಮಲೆನಾಡಿನಲ್ಲಿ ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇಂತಹ ಸಮಸ್ಯೆಗಳ ಬಗ್ಗೆ ಎಂ.ಕೆ.ಪ್ರಾಣೇಶ್ ನಿರ್ಲಕ್ಷಿಸುವ ಮೂಲಕ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಎಮ್ಮೆಲ್ಸಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಗ್ರಾಪಂ, ಪಪಂ, ತಾಪಂ, ಜಿಪಂನಂತಹ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡಿರುವುದಲ್ಲದೇ ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ಜಿಲ್ಲೆಯ ಕುಡಿಯುವ ನೀರು, ನೀರಾವರಿ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಎಲ್ಲ ಇಲಾಖೆಗಳಿಂದಲೂ ಅನುದಾನ ತರುವಲ್ಲಿ ಶ್ರಮಿಸಿದ್ದಾರೆ. ಕರಗಡ ನೀರಾವರಿ ಯೋಜನೆಗೆ ೧೫ ಕೋ. ರೂ. ಅನುದಾನ ಬಿಡುಗಡೆ ಮಾಡಿಸುವಲ್ಲಿ ಶ್ರಮಿಸಿದ್ದಾರೆ.
ಹಿರೇಮಗಳೂರು-ಹೊಸಕೋಟೆ ರೈಲ್ವೆ ಬ್ರಿಡ್ಜ್ಗೆ ೯ ಕೋ. ರೂ. ಅನುದಾನ ನೀಡಿದ್ದಾರೆ. ವಿಕಲಚೇತನರಿಗೆ ೮೫ ತ್ರಿಚಕ್ರ ವಾಹನ ಕೊಡಿಸಲು ಅನುದಾನ ನೀಡಿದ್ದಾರೆ. ನಗರದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರಿಗೆ ಶ್ರಮಿಸಿದ್ದಾರೆ. ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರಕ್ಕೆ ಜಾಗ ಮಂಜೂರು ಮಾಡಿಸಿದ್ದಾರೆ. ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ೧ ಕೋ. ರೂ. ಅನುದಾನ ಬಿಡುಗಡೆ ಮಾಡಿಸಿ ಸಮುದಾಯ ಭವನಗಳ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಚಿಕ್ಕಮಗಳೂರು ಎಪಿಎಂಸಿ ಪ್ರಾಂಗಣದ ಅಭಿವೃದ್ಧಿಗೆ ೫೦ ಲಕ್ಷ ರೂ. ಅನುದಾನ ಕೊಡಿಸಿದ್ದಾರೆ. ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ವಿಭಾಗಕ್ಕೆ ೨ ಯಂತ್ರಗಳನ್ನು ನೀಡಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ ಜಿಲ್ಲೆಗೆ ಸುಮಾರು ೨ ಕೋಟಿಯಷ್ಟು ಅನುದಾನ ಕೊಡಿಸಿದ್ದು, ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಕಾಲೇಜುಗಳಿಗೆ ಪೀಠೋಪಕರಣಗಳನ್ನು ಕೊಡಿಸುವಲ್ಲಿ ಶ್ರಮಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಗಾಯತ್ರಿ ಶಾಂತೇಗೌಡ ಅವರು ಈ ಹಿಂದೆ ಗ್ರಾಪಂ ಗಳಿಗೆ ನೀಡಿದ ಕೊಡುಗೆಗಳ ಹಿನ್ನೆಲೆಯಲ್ಲಿ ಈ ಬಾರಿ ಗೆಲುವು ಸಾಧಿಸುವುದು ನಿಶ್ಷಿತ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಟರಾಜ್, ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.
M.K. Pranesh’s contribution to the development of the sector is zero
Discussion about this post