ನವದೆಹಲಿ: ಸಂಯುಕ್ತ ಪ್ರಗತಿಪರ ಮೈತ್ರಿ ಕೂಟ (ಯುಪಿಎ) ಎಲ್ಲಿದೆ ಎಂದು ಪ್ರಶ್ನೆ ಮಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಕಾಂಗ್ರೆಸ್ ಯುಪಿಎನ ಆತ್ಮವಿದ್ದಂತೆ ಕಾಂಗ್ರೆಸ್ ಇಲ್ಲದಿದ್ದರೆ ಯುಪಿಎ ಆತ್ಮವಿಲ್ಲದ ದೇಹದಂತೆ ಎಂದು ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ಟಿಎಂಸಿ ಈ ಹಿಂದೆ ಯುಪಿಎ ಭಾಗವಾಗಿತ್ತು. ಅನೇಕ ಹೋರಾಟಗಳಲ್ಲಿ ಜತೆಗೂಡಿ ಭಾಗಿಯಾಗಿದೆ. ಬಿಜೆಪಿಯನ್ನು ಎದುರಿಸಬೇಕಾದರೆ ಪ್ರತಿಪಕ್ಷಗಳು ಒಗ್ಗೂಡಿ ಸಾಗಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
2004ರಿಂದ 2014ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಟಿಎಂಸಿ ಅದರ ಭಾಗವಾಗಿತ್ತು. ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಬುಧವಾರ ಭೇಟಿಯಾಗಿದ್ದ, ಮಮತಾ ಬ್ಯಾನರ್ಜಿ, ಯುಪಿಎ ಪ್ರಸ್ತುತತೆ ಈಗ ಎಲ್ಲಿದೆ? ಯುಪಿಎ ಹೊರತಾಗಿ ಪ್ರಾದೇಶಿಕ ಪಕ್ಷಗಳು ಬಲಗೊಳ್ಳಬೇಕು ಎಂದಿದ್ದರು. ಕಾಂಗ್ರೆಸ್ ನಾಯಕತ್ವದ ಯುಪಿಎಗೆ ಪರ್ಯಾಯವಾಗಿ ಮಮತಾ ಪ್ರಾದೇಶಿಕ ಪಕ್ಷಗಳ ನಾಯಕತ್ವ ವಹಿಸಲು ಮುನ್ನುಗ್ಗುತ್ತಿದ್ದಾರೆ. ಗೋವಾ, ಮೇಘಾಲಯ, ಬಿಹಾರ, ಹರಿಯಾಣಗಳಲ್ಲಿ ಟಿಎಂಸಿ ಬಲಗೊಳಿಸಲು ಮಮತಾ ಶ್ರಮಿಸುತ್ತಿದ್ದಾರೆ.
ನಾಯಕತ್ವ ದೈವಿ ಹಕ್ಕಲ್ಲ
ಪ್ರತಿಪಕ್ಷದ ನಾಯಕತ್ವವು ದೈವಿಕ ಹಕ್ಕಿಲ್ಲ. ಪ್ರತಿಪಕ್ಷವನ್ನು ಮುನ್ನಡೆಸುವವರು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಆಗಬೇಕು ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಈ ಮಾತನ್ನು ಅವರು ರಾಹುಲ್ ಗಾಂಧಿಯನ್ನೆ ಗಮನದಲ್ಲಿಟ್ಟುಕೊಂಡು ಆಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 2024ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ: ಹಿರಿಯ ನಾಯಕ ಗುಲಾಂ ನಬಿ ಆಜಾದ್
Discussion about this post