ಡೆಹ್ರಾಡೂನ್: ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಮತ್ತು ಮಸ್ಸೂರಿ ಮಧ್ಯೆಯ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 72ಎಯಲ್ಲಿ 16 ಕಿ.ಮೀ. ಉದ್ದದ ಎತ್ತರಿಸಿದ ರಸ್ತೆ ಮಾರ್ಗ(ಎಲಿವೇಟೆಡ್ ಕಾರಿಡಾರ್) ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ದೆಹಲಿ-ಸಹರಣಪುರ್-ಡೆಹ್ರಾಡೂನ್ (ಎನ್ಎಚ್ 72ಎ) ಮಾರ್ಗದಲ್ಲಿ ನಿರ್ಮಾಣ ಆಗಲಿರುವ ದ್ವಿಪಥದ ಆರ್ಥಿಕ ಕಾರಿಡಾರ್ ವನ್ಯಜೀವಿ ಧಾಮದಲ್ಲಿ ನಿರ್ಮಾಣ ಆಗಲಿರುವ ಮೊದಲ ಎತ್ತರಿಸಿದ ರಸ್ತೆ ಮಾರ್ಗ ಆಗಲಿದೆ. ಡೆಹ್ರಾಡೂನ್ ಜಿಲ್ಲೆಯ ಗಣೇಶಪುರ್ ಮತ್ತು ಸಹರಣಪುರ ಜಿಲ್ಲೆಯ ಮೋಹಂದ್ಗಳನ್ನು ಸಂಪಕಿರ್ಸುವ ಇದು ಹಿಮಾಲಯ ಪರ್ವತ ಶ್ರೇಣಿಯ ಉಪಸಾಲಾಗಿರುವ ಶಿವಾಲಿಕ್ ಅರಣ್ಯ ವಲಯದಲ್ಲಿ 28 ಕಿ.ಮೀ. ಸಾಗಲಿದೆ. ಇದರಲ್ಲಿ 16 ಕಿ.ಮೀ. ಎತ್ತರಿಸಿದ ಮಾರ್ಗ ಆಗಿದೆ. ಇದರ ನಿರ್ಮಾಣದಿಂದ ವನ್ಯಜಿವಿಗಳು ಮತ್ತು ವಾಹನದ ಘರ್ಷಣೆ ತಪ್ಪಲಿದೆ. ಜತೆಗೆ ಸಂಚಾರದ ಸಮಯ ಕೂಡ ಗಣನೀಯವಾಗಿ ತಗ್ಗಲಿದೆ. 72ಎ ಎನ್ಎಚ್ನಲ್ಲಿ ಒಟ್ಟಾರೆ 120 ವಕ್ರಾಕೃತಿಯ ತಿರುವುಗಳಿದ್ದು, ಇಲ್ಲಿ ತಾಸಿಗೆ 25ರಿಂದ 30 ಕಿ.ಮೀ. ವೇಗದಲ್ಲಿಷ್ಟೆ ವಾಹನಗಳು ಚಲಿಸಲು ಸಾಧ್ಯ.
ಎಲಿವೇಟೆಡ್ ಕಾರಿಡಾರ್ ವಿಶೇಷ
ರಾಜಾಜಿ ಹುಲಿ ರಕ್ಷಿತಾರಣ್ಯದಲ್ಲಿ ಸಾಗುವ ಈ ಎತ್ತರಿಸಿದ ಮಾರ್ಗವು ಮೊದಲ ಹಂತದಲ್ಲಿ ಮೋಹಂದ್-ದಾತ್ ಕಾಳಿ ಮಂದಿರದವರೆಗೆ 12 ಕಿ.ಮೀ. ಮತ್ತು ಎರಡನೇ ಹಂತದಲ್ಲಿ ದಾತ್ ಕಾಳಿ ಮಂದಿರದಿಂದ ಆಶಾರೋಡಿಗೆ 4 ಕಿ.ಮೀ. ಮಾರ್ಗದ ನಿರ್ಮಾಣ ಆಗಲಿದೆ. ಒಟ್ಟಾರೆ ವೆಚ್ಚ 8,300 ಕೋಟಿ ರೂಪಾಯಿ ಆಗಿದ್ದು, 2024ರಲ್ಲಿ ರ್ಪೂಣಗೊಳ್ಳಲಿದೆ. ಕಾರಿಡಾರ್ ಸಂಚಾರಕ್ಕೆ ಮುಕ್ತಗೊಂಡ ನಂತರ ಈ ಮಾರ್ಗದಲ್ಲಿನ ಸಂಚಾರ ಅರಣ್ಯ ಮತ್ತು ಖಗ-ಮೃಗಳ ವೀಕ್ಷಣೆಯು ಚೇತೋಹಾರಿ ಅನುಭವ ನೀಡಲಿದೆ ಎಂದು ಕಾಮಗಾರಿಯ ಅಧಿಕಾರಿಗಳು ಹೇಳಿದ್ದಾರೆ.
ಪರಿಸರ ವಾದಿಗಳಿಂದ ದಾವೆ
ಎತ್ತರಿಸಿದ ಮಾರ್ಗ ನಿರ್ಮಾಣಕ್ಕಾಗಿ ಅಭಯಾರಣ್ಯ ಸಂರಕ್ಷಣಾ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹುಲಿ ಸಂಕ್ಷಿರತವಾದ ದಟ್ಟ ಅಡವಿಯಲ್ಲಿ ಮರಗಳ ಹನನವಾಗಲಿದೆ. ಕಾಮಗಾರಿಗಾಗಿ ಮಾನವರು, ಯಂತ್ರೋಪಕರಣಗಳ ಓಡಾಟದಿಂದ ವನ್ಯಜೀವಿ ಸಂಪತ್ತು ಅಪಾಯಕ್ಕೆ ಸಿಲುಕಲಿದೆ. ಡೆಹ್ರಾಡೂನ್ ವಿಭಾಗದಲ್ಲಿ 2 ಸಾವಿರ ಸಾಲ್ ವೃಕ್ಷಗಳು, ಉತ್ತರ ಪ್ರದೇಶದ ಭಾಗದಲ್ಲಿ 10 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ. ಇದು ಪಕ್ಷಿ ಸಂಕುಲದ ನಾಶಕ್ಕೆ ಕಾರಣವಾಗಲಿದೆ ಎಂದು ಪರಿಸರವಾದಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ಈಗ ರಾಷ್ಟ್ರೀಯ ಹಸಿರು ಪೀಠದ ಮುಂದೆ ಇದೆ.
ಇದನ್ನೂ ಓದಿ: ಆಲೂಗಡ್ಡೆ ತಳಿಗೆ ಏಕಸ್ವಾಮ್ಯ ಪಡೆದಿದ್ದ ಪೆಪ್ಸಿ ಕಂಪನಿ ವಿರುದ್ಧದ ಮೊಕದ್ದಮೆ ಗೆದ್ದ ರೈತ ಮಹಿಳೆ
Discussion about this post