ಭುವನೇಶ್ವರ/ಕೋಲ್ಕತ್ತ: ಬಂಗಾಳಕೊಲ್ಲಿಯಲ್ಲಿ ಎರಡು ದಿನಗಳ ಹಿಂದೆ ಎದ್ದಿರುವ ‘ಜವಾದ್’ ಚಂಡಮಾರುತ ದುರ್ಬಲಗೊಂಡಿದ್ದು, ಉತ್ತರ, ಈಶಾನ್ಯ ದಿಕ್ಕಿನತ್ತ ಮುಖ ಮಾಡಿದೆ. ಆದರೆ, ಇದರ ಪ್ರಭಾವದಿಂದ ಒಡಿಶಾದ ಬಹುತೇಕ ಕಡೆ ಮತ್ತು ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಒಡಿಶಾದ ಪುರಿ ನಗರಕ್ಕೆ ಭಾನುವಾರ ಸಂಜೆ ಅಪ್ಪಳಿಸುತ್ತದೆ ಎಂದು ಅಂದಾಜಿಸಲಾಗಿದ್ದ ಚಂಡಮಾರುತವು ಈಗ ಪುರಿಯಿಂದ 120 ಕಿ.ಮೀ. ದೂರದಲ್ಲಿ ಸಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ಸದ್ದು ಮಾಡುತ್ತಿರುವ “ಜವಾದ್’ ಚಂಡಮಾರುತದ ತೀವ್ರತೆ ಕಡಿಮೆ ಆಗಿದ್ದು, ಉತ್ತರ, ಈಶಾನ್ಯದತ್ತ ಚಲಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ವಿವಿಧೆಡೆ ಮಳೆ ಸುರಿಯುತ್ತಿದೆ.
ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಪುರಿ ಕಡಲ ಕಿನಾರೆಯಿಂದ ಜನರನ್ನು ತೆರವುಗೊಳಿಸಲಾಗಿದ್ದು, ಪಶ್ಚಿಮ ಬಂಗಾಳದಲ್ಲೂ ಸುಮಾರು18 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಒಡಿಶಾದ ಗಂಜಾಂ, ಖುರ್ದಾ, ಪುರಿ, ಕೇಂದ್ರಪಾರಾ, ಜಗತ್ಸಿಂಗ್ಪುರ್ ಜಿಲ್ಲೆಗಳಲ್ಲಿ ಅಧಿಕ ವರ್ಷಧಾರೆ ಆಗಿದೆ. ಗಂಜಾಂ ಜಿಲ್ಲೆಯ ಕಾಳಿಕೋಟೆಯಲ್ಲಿ 158 ಎಂ.ಎಂ., ನಗಯಾಡ್ 107 ಎಂ.ಎಂ. ಛತ್ರಾಪುರ್ 86 ಎಂ.ಎಂ. ಭುವನೇಶ್ವರದಲ್ಲಿ 42 ಎಂ.ಎಂ. ಮಳೆ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಕೋಲ್ಕತ, ಹೌರಾ, ಉತ್ತರ ಮತ್ತು ದಕ್ಷಿಣ 24 ಪರಗಣ, ಪೂರ್ವ ಮತ್ತು ಪಶ್ಚಿಮ ಮೇದಿನಿಪುರ್ ಜಿಲ್ಲೆಗಳಲ್ಲಿ ಸತತವಾಗಿ ಸುರಿಯುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಹೂಗ್ಲಿ ನದಿಯಲ್ಲಿ ಫೆರ್ರಿ ಸಂಚಾರವನ್ನು ನಿಲ್ಲಿಸಲಾಗಿದೆ. ಸಮುದ್ರದ ಕಿನಾರೆಯ ರೆಸಾರ್ಟ್ಗಳನ್ನು ಮುಚ್ಚಲು ಆದೇಶಿಸಲಾಗಿದೆ ಮತ್ತು ಪ್ರವಾಸಿಗರಿಗೆ ಬೀಚ್ಗಳಿಗೆ ಹೋಗದಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಆಲೂಗಡ್ಡೆ ತಳಿಗೆ ಏಕಸ್ವಾಮ್ಯ ಪಡೆದಿದ್ದ ಪೆಪ್ಸಿ ಕಂಪನಿ ವಿರುದ್ಧದ ಮೊಕದ್ದಮೆ ಗೆದ್ದ ರೈತ ಮಹಿಳೆ
(Jawad Cyclone effect heavy rainfall in Odisha)
Discussion about this post