ಕೊಹಿಮಾ: ಭಾರತೀಯ ಸೇನೆಗೆ ತೀವ್ರ ಮುಜುಗರವಾಗುವ ಘಟನೆ ನಾಗಾಲ್ಯಾಂಡ್ನ ಮೊನ್ ಜಿಲ್ಲೆಯ ಟಿರು ಮತ್ತು ಒಟಿಂಗ್ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮುಗಿಸಿ ಪಿಕ್ಅಪ್ ವ್ಯಾನ್ ಮೂಲಕ ಹೊರಟ್ಟಿದ್ದ ಕಾರ್ಮಿಕರನ್ನು ಬಂಡುಕೋರರೆಂದು ತಪ್ಪಾಗಿ ಭಾವಿಸಿ ಅವರನ್ನು ಸುತ್ತುವರೆದ ಅಸ್ಸಾಂ ರೈಫಲ್ಸ್ನ 21 ಪ್ಯಾರಾ ವಿಶೇಷ ಪಡೆಯ ಯೋಧರು ಗುಂಡು ಹಾರಿಸಿದರು. ಇದರಿಂದ ಸ್ಥಳದಲ್ಲೇ ಆರು ಕಾರ್ಮಿಕರು ಸಾವನ್ನಪ್ಪಿದ್ದರು. ನಂತರ ನಡೆದ ಘರ್ಷಣೆಯಲ್ಲಿ ಇನ್ನೂ ಏಳು ನಾಗರಿಕರು ಸೇನೆಯ ಗುಂಡಿಗೆ ಬಲಿಯಾದರು. ಜನರ ದಾಳಿಯಿಂದ ಓರ್ವ ಯೋಧ ಸಾವನಪ್ಪಿದ್ದಾನೆ. ಒಟ್ಟು 14 ಮಂದಿ ಮೃತರಾಗಿದ್ದು, 11 ಜನರು ಗಾಯಗೊಂಡಿದ್ದಾರೆ. ಇವರನ್ನು ದಿಬ್ರೂಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕತ್ತಲಾಗುತ್ತಿದರೂ ಗಣಿ ಕಾರ್ಮಿಕರು ಊರಿಗೆ ಬಾರದ ಕಾರಣ ಟಿರು ಮತ್ತು ಒಟಿಂಗ್ ಗ್ರಾಮದ ಅನೇಕರು ತಮ್ಮ ಸಂಬಂಧಿಗಳನ್ನು ಹುಡುಕಿಕೊಂಡು ಬಂದಾಗ ಗಣಿ ಕಾರ್ಮಿಕರ ವಾಹನವನ್ನು ಸೇನೆ ಸಿಬ್ಬಂದಿ ಸುತ್ತುವರಿದಿರುವುದು ಮತ್ತು ರಕ್ತ ಕೊಡಿ ಹರಿಯುತ್ತಿತ್ತು. ಆರು ಮಂದಿ ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದ ಜನರು, ಸೈನಿಕರ ಮೇಲೆ ದಾಳಿ ಮಾಡತೊಡಗಿದರು. ಈ ಸಂದರ್ಭದಲ್ಲಿ ಸೈನಿಕರು ಗುಂಡು ಹಾರಿಸಿದ್ದರಿಂದ ಮತ್ತೆ ಏಳು ನಾಗರಿಕರು ಹತರಾದರು. ಜನರು ನಡೆಸಿದ ದಾಳಿಯಿಂದ ಗಾಯಗೊಂಡ ಓರ್ವ ಯೋಧ ಕೂಡ ಮೃತಪಟ್ಟಿದ್ದಾನೆ.
ಈ ಘಟನೆ ಸಂಬಂಧ ನಾಗಾಲ್ಯಾಂಡ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಗಣಿ ಕಾರ್ಮಿಕರು ಇದ್ದ ವಾಹನದಿಂದ ಯಾವುದೇ ಪ್ರಚೋದನಕಾರಿ ಚಟುವಟಿಕೆ ಇಲ್ಲದಿದ್ದರೂ ಸೇನಾ ಪಡೆ ಏಕಾಏಕಿ ಗುಂಡು ಹಾರಿಸಿ ನಾಗರಿಕರ ಸಾವಿಗೆ ಕಾರಣವಾಗಿದೆ ಎಂದು ಪ್ರಕರಣ ದಾಖಲಾಗಿದೆ.
ತಪ್ಪು ಭಾವಿಸಲು ಏನು ಕಾರಣ?
ನಾಗಾಲ್ಯಾಂಡ್ನಲ್ಲಿ ಈಗ ಹಾರ್ನ್ಬಿಲ್ ಉತ್ಸವ ನಡೆಯುತ್ತಿದೆ. ನಿಷೇಧಿತ ನ್ಯಾಷನಲಿಸ್ಟ್ ಸೋಷಿಯಲಿಷ್ಟ್ ಕೌನ್ಸಿಲ್ ಆಫ್ ನ್ಯಾಗಾಲ್ಯಾಂಡ್(ಕೆ) (ಎನ್ಎಸ್ಸಿಎನ್-ಕೆ) ಬಂಡುಕೋರರು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ಇತ್ತು. ಇದನ್ನು ಆಧರಿಸಿ ಸೇನೆ ಬಂಡುಕೋರರ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ಮ್ಯಾನ್ಮಾರ್ ಗಡಿಗೆ ಇರುವ ಕಲ್ಲಿದ್ದಲು ಗಣಿಯಲ್ಲಿ ಕಾರ್ಮಿಕರು ಕೆಲಸ ಮುಗಿಸಿ ಪಿಕ್-ಅಪ್ ವಾಹನದಲ್ಲಿ ಹೊರಟಿದ್ದರು. ಕೆಲಸ ಆಯಾಸ ಮರೆಯಲು ಹಾಡು ಹೇಳುತ್ತ ಸಂತೋಷದಿಂದ ಕೇಕೆ ಹಾಕುತ್ತಿದ್ದರು. ಇದ್ಯಾವುದನ್ನು ವಿಚಾರಿಸಿದ ಸೇನೆ ಏಕಾಏಕಿ ವಾಹನದ ಮೇಲೆ ಗುಂಡಿನ ಮಳೆಗರಿಯಿತು.
ಸೇನೆ ವಿಷಾದ:
ಘಟನೆ ಬಗ್ಗೆ ಸೇನೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ. ಈ ಮಧ್ಯೆ, ಮೊನ್ ಜಿಲ್ಲೆಯಲ್ಲಿ ಉದ್ರಿಕ್ತ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳು ರವಾನೆ ಆಗುವುದನ್ನು ತಡೆಯಲು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಉನ್ನತ ಮಟ್ಟದ ತನಿಖೆಗೆ ಅಮಿತ್ ಶಾ ಆದೇಶ:
ಸೇನೆಯಿಂದ ಆಗಿರುವ ಅಚಾತುರ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಾಣ ಕಳೆದುಕೊಂಡ ನಾಗರಿಕ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಅವರು, ಐಜಿಪಿ ನೇತೃತ್ವದಲ್ಲಿ ಐವರು ಸದಸ್ಯರ ಎಸ್ಐಟಿ ಘಟನೆ ಬಗ್ಗೆ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.
ಸಂಸತ್ನಲ್ಲಿ ಖಂಡನೆ:
ನಾಗಾಲ್ಯಾಂಡ್ ಮೊನ್ ಜಿಲ್ಲೆಯಲ್ಲಿ ನಡೆದಿರುವ ಘಟನೆ ಹೃದಯವಿದ್ರಾವಕವಾಗಿದೆ. ನಮ್ಮದೇ ನಾಗರಿಕರ ಮೇಲೆ ಸೇನೆ ಗುಂಡು ಹಾರಿಸಿರುವುದು ಅತ್ಯಂತ ಹೇಯ ಕೃತ್ಯ. ಇದು ನಾಗಾಲ್ಯಾಂಡ್ನ ಇತಿಹಾಸದಲ್ಲೇ ಕರಾಳ ದಿನ ಎಂದು ಸಂಸತ್ನಲ್ಲಿ ವಿರೋಧ ಪಕ್ಷಗಳು ಸೇನೆಯ ಕೃತ್ಯವನ್ನು ಟೀಕಿಸಿವೆ.
ಕೇಂದ್ರ ಗೃಹ ಸಚಿವಾಲಯ ಏನು ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ನಾಗರಿಕರ ಹತ್ಯೆಯನ್ನು ದುರದೃಷ್ಟಕರ ಎಂದ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ ಸಿಂಗ್, ಮಡಿದವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಬಂದ್ಗೆ ಕರೆ:
ನಾಗರಿಕರ ಹತ್ಯೆಯನ್ನು ಖಂಡಿಸಿ ನಾಗಾ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಎಫ್) ಮತ್ತು ನಾಗಾಲ್ಯಾಂಆಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್ಪಿಎಒ) ಸೋಮವಾರ ರಾಜ್ಯದ ಬಂದ್ಗೆ ಕರೆ ನೀಡಿವೆ.
Security forces kill 13 Civilians in Nagaland
ಇದನ್ನೂ ಓದಿ: Police Encounter: ಮಹಾರಾಷ್ಟ್ರ ಪೋಲೀಸರ ಎರಡನೇ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ 26 ಮಾವೋವಾದಿಗಳ ಹತ್ಯೆ
Discussion about this post