ಚೆನ್ನೈ: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಹಾಗೂ ಇತರರ ಮೃತದೇಹಗಳನ್ನು ತಮಿಳುನಾಡಿನ ವೆಲ್ಲಿಂಗ್ಟನ್ನಿಂದ ಕೊಯಮತ್ತೂರಿನ ಸೋಲೂರ್ ವಾಯುನೆಲೆಗೆ ಆ್ಯಂಬುಲೆನ್ಸ್ ಮೂಲಕ ಗುರುವಾರ ಕೊಂಡೊಯ್ಯಲಾಯಿತು.
ಇದೇ ವೇಳೆ, ರಸ್ತೆಯುದ್ದಕ್ಕೂ ಗೌರವ ನಮನ ಸಲ್ಲಿಸಿದ ಜನ ದುಃಖಿತರಾಗಿರುವುದು ಕಂಡುಬಂತು. ಈ ವಿಡಿಯೊವನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಸಾಮಾಜಿಕ ಮಾಧ್ಯಮ ‘ಕೂ’ನಲ್ಲಿ ಹಂಚಿಕೊಂಡಿದ್ದು, ‘ಇದೊಂದು ಹೃದಯವಿದ್ರಾವಕ ಕ್ಷಣಗಳು. ಇಂಥ ಕ್ಷಣಗಳು ಜನರಲ್ಲಿ ಆಳವಾಗಿ ಹುದುಗಿರುವ ಭಾವನೆಗಳನ್ನು ವ್ಯಕ್ತವಾಗುವಂತೆ ಮಾಡುವ ಸಾಮರ್ಥ್ಯ ಹೊಂದಿವೆ. ಅದು ಕಣ್ಣೀರಿನೊಂದಿಗೆ ವ್ಯಕ್ತವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Funeral: ಸೇನಾ ಹೆಲಿಕಾಪ್ಟರ್ ದುರಂತ: ನಾಳೆ ಜನರಲ್ ಬಿಪಿನ್ ರಾವತ್ ಅಂತ್ಯಕ್ರಿಯೆ
ಮೃತದೇಹಗಳನ್ನು ಕೊಂಡೊಯ್ಯುತ್ತಿರುವ ಮತ್ತೊಂದು ವಿಡಿಯೊವನ್ನು ‘ಪ್ರಸಾರ ಭಾರತಿ’ ಸುದ್ದಿ ಸಂಸ್ಥೆ ಕೂಡ ‘ಕೂ’ನಲ್ಲಿ ಹಂಚಿಕೊಂಡಿದೆ.
ಬುಧವಾರ ತಮಿಳುನಾಡಿನ ಕೂನೂರಿನ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್ ಪತನಗೊಂಡಿತ್ತು. ದುರಂತದಲ್ಲಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಇತರ 11 ಮಂದಿ ಮೃತಪಟ್ಟಿದ್ದಾರೆ.
ಹೆಲಿಕಾಪ್ಟರ್ ಪತನವಾಗಲು ನಿಖರ ಕಾರಣ ಏನೆಂಬುದು ಈವರೆಗೂ ತಿಳಿದು ಬಂದಿಲ್ಲ. ಹೆಲಿಕಾಪ್ಟರ್ನಲ್ಲಿದ್ದ ಬ್ಲ್ಯಾಕ್ಬಾಕ್ಸ್ ದೊರೆತಿದ್ದು, ತನಿಖೆಯ ಬಳಿಕವಷ್ಟೇ ಪೂರ್ಣ ವಿವರ ದೊರೆಯಲಿದೆ.
ಇದನ್ನೂ ಓದಿ: ಹೆಲಿಕಾಪ್ಟರ್ ಪತನದಿಂದ ಜನರಲ್ ರಾವತ್ ನಿಧನ: ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಸಂತಾಪ
Discussion about this post