ದೆಹಲಿ : ಕೇಂದ್ರವು ಮೂರು ಕೃಷಿ ಕಾನೂನುಗಳನ್ನು ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು ಹೋರಾಟವನ್ನು ಹಿಂತೆಗೆದುಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರವು ಲಿಖಿತವಾಗಿ ನೀಡಿದ್ದನ್ನು ಈಡೇರಿಸುವುದು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
‘ಹಕ್ಕುಗಳಿಗಾಗಿ ಹೋರಾಡಿ ಗೆಲುವು ಸಾಧಿಸಿದ ರೈತರಿಗೆ ಅಭಿನಂದನೆಗಳು. ನಾವು ಒಗ್ಗಟ್ಟಾಗಿದ್ದರೆ, ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ರೈತ ಹೋರಾಟ ಸಾಕ್ಷಿಯಾಗಿದೆ. ಸರ್ಕಾರವು ಲಿಖಿತವಾಗಿ ಭರವಸೆ ನೀಡುತ್ತದೆ. ಆದರೆ ಅದನ್ನು ಅವರು ಅನುಸರಿಸುವುದು ಮುಖ್ಯವಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾವು ಕೇಂದ್ರವು ನೀಡಿರುವ ಭರವಸೆಯನ್ನು ಪೂರ್ಣಗೊಳಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಖರ್ಗೆ ಅವರು ಪ್ರತಿಭಟನಾ ವೇಳೆ ಪ್ರಾಣ ಕಳೆದುಕೊಂಡ 700ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
‘ಮೃತ ರೈತರ ಕುಟುಂಬದ ಎಲ್ಲಾ ನಷ್ಟಗಳು ಹಾಗೂ ಅವರ ಮಕ್ಕಳ ಶಿಕ್ಷಣವನ್ನು ಸರ್ಕಾರ ನೋಡಿಕೊಳ್ಳಬೇಕು. ಎಂಎಸ್ಪಿ ಕಾನೂನು ಬದ್ಧಗೊಳಿಸುವುದು ಮತ್ತು ಬಲಪಡಿಸುವುದು ಸಹ ಮುಖ್ಯವಾಗಿದೆ. ರೈತರ ವಿದ್ಯುತ್ ಬಿಲ್ ವಿಷಯಗಳು ಹಾಗೂ ರಸಗೊಬ್ಬರಗಳ ಬೇಡಿಕೆಯನ್ನು ಶೀಘ್ರವಾಗಿ ಪರಿಹರಿಸಬೇಕು’ ಎಂದರು.
ಕಳೆದ ವರ್ಷ ನವೆಂಬರ್ 26 ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೆ ಕೇಂದ್ರ ಸರ್ಕಾರವು ಕೃಷಿ ಕಾನೂನು ರದ್ಧತಿ ಮಸೂದೆಯನ್ನು ಅಂಗೀಕರಿಸಿತ್ತು.
ಕೇಂದ್ರ ಸರ್ಕಾರವು ರೈತರ ಉಳಿದ ಬೇಡಿಕೆಗಳನ್ನು ಪೂರೈಸುವುದಾಗಿ ಲಿಖಿತ ಭರವಸೆ ನೀಡಿದ್ದು, ರೈತರು ತಮ್ಮ ಒಂದು ವರ್ಷದ ಆಂದೋಲನವನ್ನು ಸ್ಥಗಿತಗೊಳಿಸುವುದಾಗಿ ಮತ್ತು ಡಿಸೆಂಬರ್ 11 ರಂದು ಪ್ರತಿಭಟನಾ ಸ್ಥಳಗಳನ್ನು ಖಾಲಿ ಮಾಡುವುದಾಗಿ ಘೋಷಿಸಿದರು.
Congratulations to the farmers who won
Discussion about this post