ಕಾಶಿ ವಿಶ್ವನಾಥನ ಎದುರು ನಾಳೆ (ಡಿಸೆಂಬರ್ 13) ಪ್ರಧಾನಿ ನರೇಂದ್ರ ಮೋದಿಯವರನ್ನೂ ಒಳಗೊಂಡು ಇಡೀ ಬಿಜೆಪಿಯ ಪ್ರಮುಖ ಪದಾಧಿಕಾರಿಗಳು ಮತ್ತು ಸಮಸ್ತ ಮುಖ್ಯಮಂತ್ರಿಗಳೂ ನೆರೆಯಲಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ಪ್ರಾಜೆಕ್ಟಿನ ಉದ್ಘಾಟನೆ ನಾಳೆ ನೆರವೇರಲಿದೆ. 399 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಾಶಿ ವಿಶ್ವನಾಥ್ ಕಾರಿಡಾರ್ ಪ್ರಾಜೆಕ್ಟ್ನ ಮೊದಲ ಹಂತದ ಕಾಮಗಾರಿಗೆ ನಾಳೇ ಉದ್ಘಾಟನಾ ಭಾಗ್ಯ ದೊರೆಯಲಿದೆ. ಕಾಶಿ ವಿಶ್ವನಾಥ ದೇವಾಲಯವನ್ನು ಗಂಗಾ ನದಿಯ ಘಾಟ್ಗಳಿಗೆ ಜೋಡಿಸುವ ಯೋಜನೆ ಇದಾಗಿದೆ.
ಉತ್ತರ ಪ್ರದೇಶ ಚುನಾವಣೆಯೂ ಹತ್ತಿರದಲ್ಲಿ ಇರುವ ಕಾರಣ ನಾಳೆ ಜರುಗಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಇನ್ನಷ್ಟು ಬಗೆಯ ಆಯಾಮಗಳು ದೊರೆತಿವೆ. ಕಾಶಿ ಅಥವಾ ವಾರಣಾಸಿಯ ಲೋಕಸಭಾ ಸಂಸದರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಪರೀಕ್ಷೆ ಒಡ್ಡುತ್ತಿದೆ. ಜೊತೆಗೆ ಸಹಜವಾಗಿಯೇ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಂತೂ ಸವಾಲನ್ನು ತಂದೊಡ್ಡಿದೆ. ಕೊವಿಡ್ ಸೋಂಕು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿತ್ತು ಎಂಬ ಟೀಕೆಗಳು ಈಮುನ್ನ ಕೇಳಿಬಂದಿದ್ದ ಕಾರಣ ಯೋಗಿ ಆದಿತ್ಯನಾಥ್ ಸರ್ಕಾರ ಮುಜುಗರಕ್ಕೆ ಈಡಾಗಿತ್ತು. ಕೊವಿಡ್ ಮತ್ತು ಇನ್ನಿತರ ರಾಜಕೀಯ ಸಮೀಕರಣಗಳು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಡೆ ಉಂಟುಮಾಡಲಿವೆ ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದವು. ಈ ಎಲ್ಲ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಬಿಜೆಪಿಗೆ ಮರುಬಲ ತುಂಬುವ ಕೆಲಸ ಮಾಡಲಿದೆ ಎನ್ನಲಾಗಿದೆ.
ಅಷ್ಟೇ ಅಲ್ಲದೇ ಹಳೆಯ ಕಾಶಿಯನ್ನು ‘ಹೊಸ ಕಾಶಿ’ಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಕಾಮಗಾರಿ ನಡೆಸುವಾಗ ಕಾಶಿಯ ಎಷ್ಟೋ ಐತಿಹಾಸಿಕ ಮಂದಿರಗಳು, ಮನೆಗಳು, ಬೀದಿಗಳನ್ನು ನೆಲಸಮ ಮಾಡಲಾಗಿದೆ. ಈಕುರಿತು ಸ್ಥಳೀಕರಲ್ಲಿ ಆಕ್ರೋಶವಿದ್ದರೂ ಸಹ ದೊಡ್ಡ ಮಟ್ಟದಲ್ಲಿ ಹೊರಬಿದ್ದಿಲ್ಲ.
2019ರಲ್ಲಿ ಆರಂಭವಾದ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಗೆ ಒದಗಿಸಿರುವ ಅನುದಾನ ಒಟ್ಟು 900 ಕೋಟಿ. ಉತ್ತರ ಪ್ರದೇಶ ಚುನಾವಣೆಯ ನಿತಿ ಸಂಹಿತೆ ಆರಂಭಕ್ಕೂ ಮುನ್ನ ಮತದಾರರಲ್ಲಿ ಬಿಜೆಪಿ ಪರ ಒಲವು ಮೂಡಿಸಲು ಕಾರಿಡಾರ್ 1ರ ಉದ್ಘಾಟನೆಯನ್ನು ಬಿಜೆಪಿ ಮಾಡಹೊರಟಿದೆ ಎನ್ನಲಾಗಿದೆ. ಏಕೆಂದರೆ ವರದಿಗಳ ಪ್ರಕಾರ ಒಟ್ಟು ಕಾಮಗಾರಿ ಮುಗಿಯಲು ಇನ್ನೂ ನಾಲ್ಕು ತಿಂಗಳ ಅಗತ್ಯವಂತೂ ಇದೆ.
ಇದನ್ನೂ ಓದಿ: Army Leader: ಸಾಧಕ, ಸುಧಾರಕ, ಸೇನಾ ನಾಯಕ: ಸಿಡಿಎಸ್ ಬಿಪಿನ್ ರಾವತ್ ಬದುಕು ಸಾಗಿಬಂದ ಹಾದಿ
(PM Narendra Modi will inaugurate Kashi Vishwanath Corridor phase 1 on tomorrow)
Discussion about this post