ಬಹು ನಿರೀಕ್ಷಿತ ಕಲಬುರಗಿ ನಗರ ಬೈಪಾಸ್, ಯಾದಗಿರಿ ನಗರ ಬೈಪಾಸ್, ಹೈದರಾಬಾದ್ ವಿಜಯಪುರ ರಾಷ್ಟ್ರೀಯ ಹೆದ್ದಾರಿ ( ಕರ್ನಾಟಕ ಗಡಿಯಿಂದ ಸಿಂದಗಿಯವರೆಗೆ) ಮಂಜೂರಾತಿ ಹಾಗೂ ಹೈದರಾಬಾದ್ ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹಳ್ಳಿಖೇಡ- ಕೆ ಗ್ರಾಮದ ಬಳಿ ಘಾತುಕ ತಿರುವುಗಳ ತೆರವು ಹಾಗೂ ರಸ್ತೆ ವಿಸ್ತರಣೆ ಮಾಡುವಂತೆ ಆಗ್ರಹಿಸಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಖರ್ಗೆ ಅವರು, ಉದ್ದೇಶಿತ ಯೋಜನೆಗಳಿಂದ ಹಿಂದುಳಿದ ಹೈ. ಕ .ಭಾಗದ ಪ್ರದೇಶಗಳ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ಮನವರಿಕೆ ಮಾಡಿದ್ದಾರೆ. ಕಲಬುರಗಿ ಲೋಕಸಭಾ ವ್ಯಾಪ್ತಿಗೆ ಒಳಪಡುವ ಅಫಜಲ್ ಪುರ ಕ್ರಾಸ್, ಹುಮನಾಬಾದ್ ಕ್ರಾಸ್, ಶಹಾಬಾದ್ ಕ್ರಾಸ್ ಹಾಗೂ ಜೇವರ್ಗಿ ರಸ್ತೆಯನ್ನು ಒಳಗೊಂಡಂತೆ ಕಲಬುರಗಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮಂಜೂರು ಕುರಿತಂತೆ ಈಗಾಗಲೇ ಹಲವಾರು ಬಾರಿ ಪತ್ರ ಬರೆಯಲಾಗಿದ್ದು, ಆದರೂ ಯೋಜನೆ ನೆನಗುದಿಗೆ ಬಿದ್ದಿದೆ. ಉದ್ದೇಶಿತ ಬೈಪಾಸ್ ರಸ್ತೆ ಪ್ರಕ್ರಿಯೆ ಹೊಸ ರಾಷ್ಟ್ರೀಯ ಹೆದ್ದಾರಿ ನಂಬರ್ ಕೊಡುವ ಹಂತದಲ್ಲಿದೆ ಎಂದು ಗೊತ್ತಾಗಿದೆ.
ಈ ಬಗ್ಗೆ ತಾವು ನನಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಷ್ಟು ಬೇಗ ಯೋಜನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದೀರಿ. ನೀವು ನೀಡಿದ ಭರವಸೆಯ ಅಧರಿಸಿ ನಾನು ಈಗಾಗಲೇ ಮೂರೂ ಪತ್ರ ಬರೆದು ಹಿಂದುಳಿದ ಹೈಕ ಭಾಗದ ಪ್ರಮುಖ ರಸ್ತೆ ನಿರ್ಮಾಣ ಯೋಜನೆ ಕುರಿತಂತೆ ಮನವರಿಕೆ ಮಾಡಿಲಾಗಿದೆ. ಉದ್ದೇಶಿತ ಯೋಜನೆಯನ್ನು ಈ ಕೂಡಲೇ ಮಂಜೂರು ಮಾಡುವಂತೆ ಮತ್ತೊಮ್ಮೆ ಈ ಮೂಲಕ ಈ ಭಾಗದ ಜನರ ಪರವಾಗಿ ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯಾದಗಿರಿ ರಾಯಚೂರು ರಸ್ತೆ ನಿರ್ಮಾಣಗೊಂಡಿದ್ದು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಐದು ವರ್ಷ ಕಳೆದರೂ ಕೂಡಾ ಯಾದಗಿರಿ ಬೈ ಪಾಸ್ ರಸ್ತೆ ನಿರ್ಮಾಣ ಪ್ರಾರಂಭವಾಗಿಲ್ಲ. ಆದ್ದರಿಂದ ಆ ಭಾಗದ ಜನರು ಉದ್ದೇಶಿತ ಯೋಜನೆಯ ಲಾಭಪಡೆದುಕೊಳ್ಳದೆ ವಂಚಿತರಾಗಿದ್ದಾರೆ. ಜೊತೆಗೆ ಯೋಜನೆ ವಿಳಂಬವಾಗುತ್ತಿರುವುದರಿಂದಾಗಿ, ಯೋಜನೆಯ ವೆಚ್ಚದ ಗಾತ್ರವೂ ಹಿಗ್ಗುತ್ತದೆ. ಇದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಹಾಗಾಗಿ ಆದಷ್ಟು ಶೀಘ್ರ ಯೋಜನೆ ಕೈಗೆತ್ತಿಕೊಳ್ಳಬೇಕೆಂದು ಶ್ರೀ ಮಲ್ಲಿಕಾರ್ಜುನ ಖರ್ಗೆ ಕೋರಿದ್ದಾರೆ
Mallikarjun Kharge writes to Nitin Gadkari.
Discussion about this post