ಹೊಸದಿಲ್ಲಿ: ತನಿಖಾ ಪತ್ರಿಕೋದ್ಯಮ ದೇಶದಲ್ಲಿ ಕಣ್ಮರೆಯಾಗುತ್ತಿದೆ, ಇತ್ತೀಚಿಗಿನ ವರ್ಷಗಳಲ್ಲಿ ಮಾಧ್ಯಮಗಳು ದೊಡ್ಡ ವಿಚಾರವನ್ನು ಬಯಲಿಗೆಳೆದಿಲ್ಲ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.
ಪತ್ರಕರ್ತ ಸುಧಾಕರ್ ರೆಡ್ಡಿ ಉದುಮಲ ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ರಮಣ, “ತನಿಖಾ ಪತ್ರಿಕೋದ್ಯಮ ಎಂಬ ಪರಿಕಲ್ಪನೆಯೇ ಮಾಧ್ಯಮ ವಲಯದಿಂದ ದೂರವಾಗುತ್ತಿದೆ. ಕನಿಷ್ಠ ಭಾರತದ ವಿಚಾರದಲ್ಲಿ ಇದು ನಿಜ. ಒಂದೆರಡು ವರದಿಗಳನ್ನು ಹೊರತುಪಡಿಸಿ ದೊಡ್ಡ ಹಗರಣಗಳನ್ನು ಬಯಲಿಗೆಳೆದ ಯಾವುದೇ ವರದಿ ಇತ್ತೀಚಿಗಿನ ವರ್ಷಗಳಲ್ಲಿ ನನಗೆ ನೆನಪಿಲ್ಲ. ನಮ್ಮ ಉದ್ಯಾನವನದಲ್ಲಿ ಎಲ್ಲವೂ ಸುಂದರವಾಗಿರುವಂತಿದೆ” ಎಂದು ಹೇಳಿದರು.
“ಪತ್ರಿಕೆಗಳಲ್ಲಿ ಯಾವುದಾದರೂ ದೊಡ್ಡ ಹಗರಣಗಳು ಬಯಲಿಗೆ ಬಂದಿವೆಯೇ ಎಂದು ನಾನು ಬೆಳೆಯುತ್ತಿರುವ ದಿನಗಳಲ್ಲಿ ಕಾತರದಿಂದ ಎದುರು ನೋಡುತ್ತಿದ್ದೆ,” ಎಂದರಲ್ಲದೆ ಆಗ “ಪತ್ರಿಕೆಗಳು ಯಾವತ್ತೂ ನಮ್ಮನ್ನು ನಿರಾಸೆಗೊಳಿಸುತ್ತಿರಲಿಲ್ಲ” ಎಂದರು.
“ಹಿಂದೆ ಪತ್ರಿಕೆಗಳು ಹಗರಣಗಳು ಹಾಗೂ ದುರ್ನಡತೆಗಳ ಕುರಿತಂತೆ ವರದಿಗಳನ್ನು ಮಾಡುತ್ತಿದ್ದವು ಹಾಗೂ ಇವುಗಳ ಪರಿಣಾಮ ಗಂಭೀರವಾಗಿರುತ್ತಿತ್ತು” ಎಂದು ಅವರು ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮಾತುಗಳನ್ನು ಉಲ್ಲೇಖಿಸಿದ ಜಸ್ಟಿಸ್ ರಮಣ, “ಪತ್ರಿಕೆಗಳನ್ನು ವಾಸ್ತವದ ಅಧ್ಯಯನಕ್ಕಾಗಿ ಓದಬೇಕು. ಸ್ವತಂತ್ರ ಚಿಂತನೆಯ ಅಭ್ಯಾಸವನ್ನು ನಶಿಸುವಂತೆ ಮಾಡಲು ಅವುಗಳಿಗೆ ಅನುಮತಿಸಬಾರದು” ಎಂದು ಹೇಳಿದರು. ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಅನೇಕ ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಿಜೆಐ ರಮಣ ಅವರ ಮಾತುಗಳು ಮಹತ್ವ ಪಡೆದಿವೆ.
Investigative journalism is disappearing in India
Discussion about this post