ಚಿಕ್ಕಮಗಳೂರು: ಮುಂಗಾರು ಋತುವಿನಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಬಿಳಿಜೋಳ ಖರೀದಿಸಲು ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ರೈತರು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ರಾಗಿ ಮತ್ತು ಬಿಳಿಜೋಳ ನೋಂದಣಿ ಮತ್ತು ಖರೀದಿಸುವ ಕೇಂದ್ರಗಳನ್ನು ಚಿಕ್ಕಮಗಳೂರು, ತರೀಕೆರೆ, ಕಡೂರು, ಪಂಚನಹಳ್ಳಿ ಮತ್ತು ಅಜ್ಜಂಪುರ ಎ.ಪಿ.ಎಂ.ಸಿ. ಯಾರ್ಡ್ಗಳಲ್ಲಿ ತಕ್ಷಣದಿಂದಲೇ ಪ್ರಾರಂಭಿಸಿ, ರೈತರ ಅಗತ್ಯ ದಾಖಲಾತಿಗಳನ್ನು ಪಡೆದು ನೋಂದಣಿ ಪ್ರಕ್ರಿಯೆ ನಿರ್ವಹಿಸಲಾಗುವುದು. ೨೦೨೨, ಜನವರಿ ೧ ರಿಂದ ಮಾರ್ಚ್ ೩೧ರವರೆಗೆ ಸರಕಾರ ಮಾನದಂಡ ಅನುಸಾರ ಖರೀದಿ ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ಹೇಳಿದರು.
ಕಳೆದ ವರ್ಷ ಖರೀದಿ ಕೇಂದ್ರಗಳಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ರೈತರಿಂದ ದೂರುಗಳು ಬಂದಿವೆ. ಈ ವರ್ಷ ಅಂತಹ ಯಾವುದೇ ದೂರು ಬಾರದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಲೋಪವಾದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನೇ ಜವಾಬ್ದಾರಿಯನ್ನಾಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಪಿ.ಆರ್. ಕೃಷ್ಣಮೂರ್ತಿ ಮಾತನಾಡಿ, ಸರಕಾರವು ಬಿಳಿಜೋಳ -ಹೈಬ್ರಿಡ್ ಪ್ರತೀ ಕ್ವಿಂಟಾಲ್ಗೆ ರೂ. ೨೭೩೮, ಬಿಳಿಜೋಳ – ಮಾಲ್ದಂಡಿ ಪ್ರತೀ ಕ್ವಿಂಟಾಲ್ಗೆ ರೂ. ೨೭೫೮, ಹಾಗೂ ರಾಗಿ ಪ್ರತೀ ಕ್ವಿಂಟಾಲ್ಗೆ ರೂ. ೩೩೭೭ ಬೆಂಬಲ ಬೆಲೆ ನಿಗದಿಪಡಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತೀ ಎಕರೆಗೆ ೧೦ ಕ್ವಿಂಟಾಲ್ನಂತೆ ಗರಿಷ್ಠ ೨೦ ಕ್ವಿಂಟಾಲ್ ರಾಗಿ/ಬಿಳಿಜೋಳ ಖರೀದಿಸಲಾಗುವುದು. ಕೃಷಿ ಇಲಾಖೆಯ ’ಫ್ರೂಟ್ಸ್’ ದತ್ತಾಂಶದಲ್ಲಿರುವ ರೈತರ ಫ್ರೂಟ್ಸ್ ಐಡಿ ಮಾಹಿತಿ ಪಡೆದು, ಕೃಷಿ ಇಲಾಖೆಯು ಒದಗಿಸಿರುವ ಸರಾಸರಿ ಬೆಳೆ ಮಾಹಿತಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಿರುವ ರೈತರಿಂದ ಭತ್ತವನ್ನು ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿ ಮೂಲಕ ಖರೀದಿಸಿ ಸಂಗ್ರಹಿಸಲಾಗುವುದು ಎಂದರು. ರೈತರಿಂದ ಅಗತ್ಯ ದಾಖಲಾತಿಗಳನ್ನು ಪಡೆದು, ಸರಕಾರದ ನಿಗದಿತ ಮಾನದಂಡ ಅನುಸಾರ ಭತ್ತ ಖರೀದಿ ಪ್ರಕ್ರಿಯೆ ನಿರ್ವಹಿಸಲಾಗುವುದು ಎಂದರು.
ಆಹಾರ ಇಲಾಖೆ ಗುಣಮಟ್ಟ ನಿರೀಕ್ಷಕ ಮಹೇಂದ್ರ ಮಾತನಾಡಿ, ರೈತರು ಬೆಂಬಲ ಬೆಳೆ ಕೇಂದ್ರಕ್ಕೆ ಬೆಳೆಯನ್ನು ತುಂಬಿಸಿ ತಂದ ಪ್ರತೀ ಗೋಣಿ ಚೀಲಕ್ಕೆ( ಒಮ್ಮೆ ಬಳಸಿದ) ರೂ. ೨೨ ಗಳನ್ನು ಪ್ರತ್ಯೇಕವಾಗಿ ಪಾವತಿಸಲಾಗುವುದು. ಖರೀದಿ ಕೇಂದ್ರದಲ್ಲಿ ಯಾವುದೇ ಹಮಾಲಿ ಕೂಲಿ ಪಾವತಿಸುವ ಅಗತ್ಯವಿಲ್ಲ. ಅಲ್ಲದೇ, ಪ್ರತೀ ಗೋಣಿ ಚೀಲದಲ್ಲಿ ೫೦ ಕೆ.ಜಿ. ಮಾತ್ರ ಇದ್ದರೆ ಸಾಕು. ಖರೀದಿದಾರರು ಪ್ರತೀ ಗೋಣಿ ಚೀಲದಲ್ಲಿ ೫೨ ಕೆ.ಜಿ. ತುಂಬಿಸಲು ರೈತರಿಗೆ ಒತ್ತಾಯಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ರೈತರು ಹೆಚ್ಚಿನ ಮಾಹಿತಿಗಳಿಗೆ ಈ ಕೆಳಕಂಡ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದಾಗಿದೆ. ಆಹಾರ ಇಲಾಖೆ – ೦೮೨೬೨ ೨೩೭೭೧೫, ಕೃಷಿ ಇಲಾಖೆ – ೦೮೨೬೨ ೨೨೦೫೨೬, ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿ -೦೮೨೬೨ ೨೯೫೬೨೩ ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಇದ್ದರು.
Purchase of ragi, white corn at support price
Discussion about this post