ಲಖನೌ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಅಯೋಧ್ಯೆಯಲ್ಲಿ ಭೂಮಿ ಬೆಲೆ ಭಾರಿ ಏರಿಕೆ ಆಗಿದೆ. ಜೊತೆಗೆ ಭೂಅವ್ಯವಹಾರಗಳು ನಡೆಯುತ್ತಿವೆ. ಬಿಜೆಪಿ ಮುಖಂಡರೇ ಅಕ್ರಮದಲ್ಲಿ ನಿರತರಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಮಂದಿರದ ಸಮೀಪದ ಭೂಮಿಯನ್ನು ಎಂಟು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಾಕ್ಷ್ಯಾಧಾರವೂ ಇದೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾದ ಉತ್ತರ ಪ್ರದೇಶದ ಪಕ್ಷದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಂದಿರ ನಿಮಿರ್ಸಿಲಾಗುತ್ತಿರುವ ಸನಿಹದಲ್ಲೇ ಅಜಮಾಸು 2 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಎರಡು ಸಾರಿ ಅಧಿಕ ಬೆಲೆಗೆ ಕೆಲವೇ ನಿಮಿಷದ ಅಂತರದಲ್ಲಿ ಮಾರಾಟ ಮಾಡಲಾಗಿದೆ. ಇದನ್ನು ಎರಡೂ ಸಾರಿಯೂ ಹೆಚ್ಚಿನ ಬೆಲೆಗೆ ಖರೀದಿಸಿದ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಮೋಸ ಹೋಗಿದೆ ಎಂದು ಭೂಮಿ ಮಾರಾಟಕ್ಕೆ ಸಂಬಂಧಿಸಿದ ಕ್ರಯಪತ್ರಗಳನ್ನು ಪ್ರಿಯಾಂಕಾ ಗಾಂಧಿ ತೋರಿಸಿದರು.
ಅಕ್ರಮ ಎಸಗಲಾಗಿರುವ ಭೂಮಿಯನ್ನು 2017ರಲ್ಲಿ ಒಬ್ಬರಿಗೆ ಮಾರಾಟ ಮಾಡಲಾಗಿತ್ತು. ಅವರು ಇದನ್ನು ತೀರ್ಥ ಕ್ಷೇತ್ರ ಟ್ರಸ್ಟ್ಗೆ 8 ಕೋಟಿ ರೂಪಾಯಿಗೆ ವಿಕ್ರಯಿಸಿದರು. ಇದಾದ 19 ನಿಮಿಷಗಳ ನಂತರ ರವಿ ಮೋಹನ್ ತಿವಾರಿ ಎಂಬ ವ್ಯಕ್ತಿಗೆ ಎರಡು ಕೋಟಿ ರೂಪಾಯಿಗೆ ಮಾರಾಟ ಮಾಡಿದರು. ಈ ತಿವಾರಿ ಭೂಮಿಯನ್ನು ಖರೀದಿಸಿದ ಐದೇ ನಿಮಿಷದಲ್ಲಿ ಅದನ್ನು 18.50 ಕೋಟಿ ರೂಪಾಯಿಗೆ ಮತ್ತೆ ರಾಮ ಮಂದಿರ ಟ್ರಸ್ಟ್ಗೆ ಮಾರಿದರು ಎಂದು ಪ್ರಿಯಾಂಕಾ ವಿವರಿಸಿದರು.
ವಿವಾದವಾಗಿದ್ದ ಭೂಮಿ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರಯ-ವಿಕ್ರಯಕ್ಕೆ ಆಸ್ಪದವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಈ ಭೂಮಿ ಬಿಕರಿ ಆಗಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ಖರೀದಿ ಕಾಗದಪತ್ರಕ್ಕೆ ರಾಮ ಮಂದಿರ ಟ್ರಸ್ಟ್ನ ಸದಸ್ಯರೊಬ್ಬರು ಮತ್ತು ಅಯೋಧ್ಯೆಯ ಮೇಯರ್ ಕೂಡ ಸಾಕ್ಷಿ ಹಾಕಿದ್ದಾರೆ ಎಂದು ಆರೋಪಿಸಿದರು.
ರಾಮ ಮಂದಿರ ನಿರ್ಮಾಣ ಕಾರ್ಯವು ಸುಪ್ರೀಂಕೋರ್ಟ್ ಸೂಚನೆಯಂತೆ ಮತ್ತು ಅದರ ನಿಗಾದಲ್ಲಿ ನಡೆಯುತ್ತಿದೆ. ಆದ್ದರಿಂದ ಭೂ ಅವ್ಯವಹಾರದ ತನಿಖೆ ಕೂಡ ಸುಪ್ರೀಂಕೋರ್ಟ್ ನಿಗಾದಲ್ಲೇ ಆಗಬೇಕು ಎಂದು ರಣದೀಪ್ ಸುರ್ಜೆವಾಲಾ ಒತ್ತಾಯಿಸಿದರು. ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಾರ್ಟಿಗಳು ಕಳೆದ ಜೂನ್ನಲ್ಲಿ ಅಯೋಧ್ಯೆಯಲ್ಲಿನ ಭೂ ಅವ್ಯವಹಾರ ಬಗ್ಗೆ ಆರೋಪ ಮಾಡಿದ್ದವು. ಆದರೆ, ರಾಮಮಂದಿರ ಟ್ರಸ್ಟ್ ಇದನ್ನು ಅಲ್ಲಗಳೆದಿತ್ತು.
ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಆದೇಶ
ಅಯೋಧ್ಯೆಯಲ್ಲಿನ ಭೂ ಅವ್ಯಹಾರ ಕುರಿತಂತೆ ಕಾಂಗ್ರೆಸ್ ಆರೋಪ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ತನಿಖೆ ಆದೇಶಿಸಿದೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗೆ ಈ ತನಿಖೆಯನ್ನು ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಚ್ಚುವರಿ ಮುಖ್ಯಕಾರ್ಯದಶಿರ್ ನವನೀತ್ ಸೆಹಗಲ್ ತಿಳಿಸಿದ್ದಾರೆ.
ಇದನ್ನೂ ಓದಿ:Anti Conversion Law: ಮತಾಂತರ ನಿಷೇಧ ಕಾಯ್ದೆ ಆರ್ಎಸ್ಎಸ್ ಮತ್ತು ಬಿಜೆಪಿ ಸರ್ಕಾರದ ಕೂಸು: ಸಿದ್ದರಾಮಯ್ಯ
Discussion about this post