ಚಿಕ್ಕಮಗಳೂರು: ಕಾಂಗ್ರೆಸ್ ಅಧಿಕಾರವಧಿಯಲ್ಲಿ ಜಿಲ್ಲೆಗೆ ವಿಶೇಷ ಅನುದಾನ ನೀಡದೆ ಅನ್ಯಾಯ ಮಾಡಿದ್ದು ಪಕ್ಷದ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಶಾಸಕ ಸಿ.ಟಿ. ರವಿ ಸವಾಲು ಹಾಕಿದರು.
ನಗರದ ಕುಪ್ಪೇನಹಳ್ಳಿ ಮತ್ತು ದಂಟರಮುಕ್ಕಿ ೨೪ನೇ ವಾರ್ಡ್ನ ಬಿಜೆಪಿ ಅಭ್ಯರ್ಥಿ ಸತೀಶ್ಕುಮಾರ್ ಕೆ.ಎಂ ಪರವಾಗಿ ಮತಯಾಚನೆ ವೇಳೆ ಅವರು ಮಾತನಾಡಿದರು.
ಈ ಬಾರಿಯ ನಗರಸಭೆ ಚುನಾವಣೆ ಅಭಿವೃದ್ಧಿ ಪರ ಮತ್ತು ವಿರೋಧದ ನಡುವಿನ ಚುನಾವಣೆಯಾಗಿದ್ದು, ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಜಿಲ್ಲೆಗೆ ಮೆಡಿಕಲ್ಕಾಲೇಜು, ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಲಾಗಿದೆ. ಬಿಜೆಪಿ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ೬೩೦ ಕೋಟಿ ವೆಚ್ಚದಲ್ಲಿ ಸುಸ್ಸಜ್ಜಿತ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ, ಕಡೂರು-ಚಿಕ್ಕಮಗಳೂರು-ಮೂಡಿಗೆರೆ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ ೨೯೭ ಕೋಟಿ ರೂ ಮಂಜೂರು ಮಾಡಿಸಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ನೀಡದೆ ಅನ್ಯಾಯ ಮಾಡಿದ್ದು ಇದೀಗ ಮತಕೇಳುವ ನೈತಿಕತೆ ಪಕ್ಷಕ್ಕಿಲ್ಲ, ಜಿಲ್ಲೆಗೆ ಪಕ್ಷದ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.
ನಗರದಲ್ಲಿ ಅಮೃತ್ ಹಾಗೂ ಒಳಚರಂಡಿ ಕಾಮಗಾರಿಗಳು ಪೂರ್ಣಗೊಳ್ಳುವ ಹಂತ ತಲುಪಿದೆ. ೬ ಕೋಟಿ ವೆಚ್ಚದಲ್ಲಿ ರತಗಿರಿ ಬೋರೆ ಉದ್ಯಾನವನ ಅಭಿವೃದ್ಧಿ, ೪.೫೦ ಕೋಟಿ ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣ, ೧೨ ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಪ್ರವಾಸಿ ಮಂದಿರ ನಿರ್ಮಾಣ, ನಗರದ ತೋಟಗಾರಿಕೆ ಇಲಾಖೆ ಬಳಿ ಜಾಗದಲ್ಲಿ ೭೦ ಕೋಟಿ ವೆಚ್ಚದಲ್ಲಿ ಡಿಸಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮುಂದಾಗಿದ್ದು ಬಿಜೆಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದರು.
ಕಾಂಗ್ರೆಸ್ ಅಧಿಕಾರವಧಿಯಲ್ಲಿ ನಗರದ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನ ಬಿಡುಗಡೆಗೊಳಿಸಿಲ್ಲ, ನಾನು ಸಚಿವನಾಗಿದ್ದ ವೇಳೆ ೨೧ ಕೋಟಿ ವಿಶೇಷ ಅನುದಾನ ತಂದಿದ್ದೇನೆ. ನಗರದ ಎಲ್ಲಾ ಮತದಾರರು ಪ್ರತಿಯೊಂದು ಮತವನ್ನು ಬಿಜೆಪಿ ಅಭ್ಯರ್ಥಿಗೆ ನೀಡುವಂತೆ ವಿನಂತಿಸಿಕೊಂಡರು.
ಪ್ರತಿ ಮತವು ಅಮೂಲ್ಯವಾಗಿದ್ದು, ಒಂದು ಮತದಿಂದ ಒಬ್ಬ ಅಭ್ಯರ್ಥಿ ಗೆಲ್ಲಬಹುದು, ಒಂದು ಸರ್ಕಾರ ರಚನೆಯಾಗಲೂ ಬಹುದು ಆದ್ದರಿಂದ ತಮ್ಮ ಅಮೂಲ್ಯ ಮತವನ್ನು ಕಮಲದ ಗುರುತಿಗೆ ನೀಡುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರಲ್ಲಿ ಕೇಳಿಕೊಂಡರು.
ಬಿಜೆಪಿ ಮುಖಂಡ sದಂಟರಮಕ್ಕಿ ನಟರಾಜ್ ಮಾತನಾಡಿ ಶಾಸಕ ಸಿ.ಟಿ. ರವಿ ಅವರು ಕುಪ್ಪೇನಹಳ್ಳಿ ಒಳಗೊಂಡಂತೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಭಿವೃಧ್ದಿಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ಹೇಮಶ್ರೀ, ಕೃಷ್ಣಮೂರ್ತಿ, ದಯಾನಂದ್, ಮಂಜುಳಾ, ದೊಡಪೇಗೌಡ, ಅಶೋಕ್, ಲಕ್ಯಾಬಸವರಾಜ್ ಮೋಹನ್, ಜಗನ್ನಾಥ್, ಚಂದ್ರಶೇಖರ್, ಮತ್ತಿತರರು ಇದ್ದರು.
Congress contribution
Discussion about this post