ಚಿಕ್ಕಮಗಳೂರು: ಚುನಾವಣೆಯಲ್ಲಿ ಬಿಜೆಪಿಯನ್ನು ನೇರವಾಗಿ ಎದುರಾಗಿಸಲಾಗದ ವಿಪಕ್ಷದವರು ವಾಮವೇಷ ತೊಟ್ಟು ಬಿಜೆಪಿ ಭದ್ರಕೋಟೆ ಅಲುಗಾಡಿಸಲು ಯತ್ನಿಸುತ್ತಿವೆ ಅದು ಎಂದಿಗೂ ಅಸಾಧ್ಯ ಎಂದು ಶಾಸಕ ಸಿ.ಟಿ ರವಿ ಹೇಳಿದರು.
ನಗರದಲ್ಲಿ ವಾರ್ಡ್ ನಂಬರ್ ೭ ರ ಅಭ್ಯರ್ಥಿ ಕುಮಾರ್, ಸಿ.ಎಂ, ವಾರ್ಡ್ ನಂಬರ್ ೫ ರ ಮಧುಕುಮಾರ್ ರಾಜ್ಅರಸ್, ಹಾಗೂ ವಾರ್ಡ್ ನಂಬರ್ ೬ ರ ಅಭ್ಯರ್ಥಿ ಸುಜಾತಶಿವಕುಮಾರ್ ಪರವಾಗಿ ಕೋಟೆ ಬಡಾವಣೆಯಲ್ಲಿ ಮತಯಾಚನೆ ವೇಳೆ ಮಾತನಾಡಿದರು.
ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಬಿಜೆಪಿ ಭದ್ರಕೋಟೆಗೆ ನುಗ್ಗಲು ಕೆಲವು ವಿಪಕ್ಷಗಳ ವಾಮಮಾರ್ಗದ ಪ್ರಯತ್ನ ಮಾಡುತ್ತಿವೆ. ಕಾಂಗ್ರೆಸ್ ಜಿಲ್ಲೆಗೆ ರೈಲು ಯೋಜನೆ ತರುವುದಾಗಿ ೧೯ ವರ್ಷಗಳ ಕಾಲ ಕಂಬಿ ಇಲ್ಲದೇ ರೈಲು ಬಿಡುವ ಕೆಲಸ ಮಾಡಿತ್ತು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದ ವೇಳೆ ಶ್ರೀಕಂಠಪ್ಪ ಸಂಸದರಾದಾಗ ಜಿಲ್ಲೆಗೆ ರೈಲು ಯೋಜನೆ ಅನುಮೋದನೆ ದೊರೆತು ೨೦೧೪ ರಲ್ಲಿ ಪೂರ್ಣಗೊಂಡಿದೆ. ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನ ನೀಡದೆ ತಾರತಮ್ಯ ತೋರಿದೆ ಎಂದು ವಾಗ್ದಾಳಿ ನಡೆಸಿದರು.
ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಲಾಗಿದೆ. ಬಿಜೆಪಿ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ೬೩೦ ಕೋಟಿ ವೆಚ್ಚದಲ್ಲಿ ಸುಸ್ಸಜ್ಜಿತ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ, ಕಡೂರು-ಚಿಕ್ಕಮಗಳೂರು-ಮೂಡಿಗೆರೆ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ ೨೯೭ ಕೋಟಿ ರೂ ಮಂಜೂರು ಮಾಡಿಸಲಾಗಿದೆ ಎಂದರು.
ನಗರದಲ್ಲಿ ಅಮೃತ್ ಹಾಗೂ ಒಳಚರಂಡಿ ಕಾಮಗಾರಿಗಳು ಪೂರ್ಣಗೊಳ್ಳುವ ಹಂತ ತಲುಪಿದೆ. ೬ ಕೋಟಿ ವೆಚ್ಚದಲ್ಲಿ ರಸ್ನಗಿರಿ ಬೋರೆ ಉದ್ಯಾನವನ ಅಭಿವೃದ್ಧಿ, ೪.೫೦ ಕೋಟಿ ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣ, ೧೨ ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಪ್ರವಾಸಿ ಮಂದಿರ ನಿರ್ಮಾಣ, ನಗರದ ತೋಟಗಾರಿಕೆ ಇಲಾಖೆ ಬಳಿ ಜಾಗದಲ್ಲಿ ೭೦ ಕೋಟಿ ವೆಚ್ಚದಲ್ಲಿ ಡಿಸಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮುಂದಾಗಿದ್ದು ಬಿಜೆಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದರು.
ನಾನು ಸಚಿವನಾಗಿದ್ದ ವೇಳೆ ಜಿಲ್ಲೆಗೆ ೨೧ ಕೋಟಿ ವಿಶೇಷ ಅನುದಾನ ತಂದಿದ್ದೇನೆ. ಬಿಜೆಪಿಯನ್ನು ನೇರವಾಗಿ ಎದುರಿಸಲಾದ ಎಲ್ಲಾ ವಿಪಕ್ಷಗಳ ಜತೆ ಕೆಲವು ಹಳೇ ಕಳ್ಳರು ಒಗ್ಗಟ್ಟಾಗಿ ಬಿಜೆಪಿಯನ್ನು ಹಣಿಯಲು ತಂತ್ರರೂಪಿಸುತ್ತಿದ್ದಾರೆ ಬಿಜೆಪಿ ಭದ್ರಕೋಟೆ ಅಲುಗಾಡಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಪ್ರತಿ ಮತವು ಅಮೂಲ್ಯವಾಗಿದ್ದು, ಒಂದು ಮತದಿಂದ ಒಬ್ಬ ಅಭ್ಯರ್ಥಿ ಗೆಲ್ಲಬಹುದು, ಒಂದು ಸರ್ಕಾರ ರಚನೆಯಾಗಲೂ ಬಹುದು ಆದ್ದರಿಂದ ತಮ್ಮ ಅಮೂಲ್ಯ ಮತವನ್ನು ಕಮಲದ ಗುರುತಿಗೆ ನೀಡುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರಲ್ಲಿ ಕೇಳಿಕೊಂಡರು.
ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಆಸೆ, ಆಮಿಷದ ಮೂಲಕ ಮತಾಂತರ ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ, ಆದರೆ ಇಚ್ಚೆಯಿಂದ ಮತಾಂತರವಾಗಲು ಯಾವುದೇ ಅಡ್ಡಿ ಇಲ್ಲ ಇದಕ್ಕಾಗಿ ಡಿಸಿಗೆ ಅರ್ಜಿ ಸಲ್ಲಿಸಿ ಮತಾಂತರವಾಗಲು ಅವಕಾಶವಿದೆ. ಸಂವಿಧಾನದ ಕಾನೂನಿನ ಮೂಲಕ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿದೆ ಇಲ್ಲಿ ಯಾವುದೇ ಧರ್ಮವನ್ನು ಕೇಂದ್ರಿಕರಿಸಿ ಕಾಯ್ದೆ ರೂಪಿಸಿಲ್ಲ ಈ ಬಗ್ಗೆ ಯಾವುದೇ ಭಯ ಬೇಡ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಸಿಎನ್ಎನ್ ವಿಚಾರದಲ್ಲೂ ಮುಸಲ್ಮಾನರ ಪೌರತ್ವ ರದ್ದಾಗಲಿದೆ ಎಂದು ಅಪಪ್ರಚಾರ ಮಾಡಿತ್ತು, ಇದೀಗ ಮತಾಂತರ ಕಾಯ್ದೆಯಲ್ಲು ಅದೇ ನೀತಿ ಅನುಸರಿಸುತ್ತಿದೆ, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತಾಂತರ ನಿಷೇಧ ಕಡತಕ್ಕೆ ಸಹಿ ಹಾಕಿ ಇದೀಗ ಬೇಡ ಎಂದು ವಿರೋಧಿಸುವುದು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ ಅವರೊಬ್ಬ ನಾಲಾಯಕ್ ಎನ್ನಬಹುದು ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಗಿಲ್ಸೋಮಶೇಖರ್, ದಿನೇಶ್, ಅಪ್ಸರ್ಅಹಮದ್, ರವಿಕುಮಾರ್, ಕೃಷ್ಣಕುಮಾರ್, ಕೋಟೆರಂಗಣ್ಣ, ಕೋಟೆಕುಮಾರ್, ನಟರಾಜ್, ಬಾಲಕೃಷ್ಣನಾಯ್ಡು ಇದ್ದರು.
BJP stronghold
Discussion about this post