ನವದೆಹಲಿ: ಕೃಷಿ ವಲಯದ ಸುಧಾರಣೆಯ ವಿಷಯದಲ್ಲಿ ವಿಮುಖವಾಗಿಲ್ಲ. ರೈತರ ಅಭಿವೃದ್ಧಿಗೆ ನಾವು ಮತ್ತೆ ಮುಂದಡಿ ಇರಿಸುತ್ತೇವೆ ಎಂದು ಎರಡು ದಿನಗಳ ಹಿಂದೆ ನಾಗಪುರದ ಅಗ್ರಿ ವಿಷನ್ ಎಕ್ಸ್ಪೋದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಮರುಮಂಡನೆ ಮಾಡುವ ಸುಳಿವು ನೀಡಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ತಾವು ಈ ರೀತಿ ಹೇಳಿಲ್ಲ ಎಂದು ಭಾನುವಾರ ಸ್ಪಷ್ಟನೆ ನೀಡಿದ್ದಾರೆ.
‘ರದ್ದುಗೊಳಿಸಲಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಮರುಮಂಡನೆ ಮಾಡುವ ಇರಾದೆ ಸರ್ಕಾರಕ್ಕೆ ಇಲ್ಲ. ಇವುಗಳನ್ನು ಮತ್ತೆ ಸಂಸತ್ ಮುಂದೆ ತರಲಾಗುತ್ತದೆ ಎಂದು ನಾನು ಹೇಳಿಯೇ ಇಲ್ಲ. ಆ ಕಾರ್ಯಕ್ರಮದಲ್ಲಿ ನಾನು ಹೇಳಿದ್ದು, ಉತ್ತಮವಾದ ಕೃಷಿ ಕಾನೂನನ್ನು ರಚಿಸಿದ್ದೆವು. ಆದರೆ, ಕೆಲವು ಕಾರಣದಿಂದಾಗಿ ಇದನ್ನು ವಾಪಸು ಪಡೆಯಬೇಕಾಯಿತು. ಆದರೆ, ರೈತರ ಕಲ್ಯಾಣದ ಕಾರ್ಯಕ್ರಮಗಳನ್ನು ಸರ್ಕಾರ ಮುಂದುವರಿಸಲಿದೆ ಎಂದು ಹೇಳಿದ್ದೆ’ ಎಂದು ಸ್ಪಷ್ಟ ಪಡಿಸಿದ್ದಾರೆ.
ನಾಗಪುರದ ಅಗ್ರಿ ವಿಷನ್ ಎಕ್ಸ್ಪೋ ಸಮ್ಮೇಳನದಲ್ಲಿ ಮೂರು ಕೃಷಿ ಕಾನೂನುಗಳನ್ನು ಮರುಮಂಡನೆ ಮಾಡಲಾಗುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈಗ, ಈ ರೀತಿಯ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಹೇಳಿದ್ದಾರೆ.
ನರೇಂದ್ರ ಸಿಂಗ್ ತೋಮರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಕೃಷಿ ಸಚಿವರ ಹೇಳಿಕೆಯು ಕೇಂದ್ರ ಒಳಮುಖವನ್ನು ಅನಾವರಣ ಮಾಡಿದೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ರದ್ದುಗೊಳಿಸಲಾದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳು ಮರುಮಂಡನೆಯಾಗಲಿದೆ. ಸರ್ಕಾರ ರೈತರಿಗೆ ಮಂಕುಬೂದಿ ಎರಚಿಸಿದೆ ಎಂದಿದ್ದರು.
ಇದನ್ನೂ ಓದಿ: ನಿಮ್ಮ ಸ್ಮಾರ್ಟ್ಫೋನ್ ಸುರಕ್ಷತೆಗೆಗಾಗಿ ನೀವು ಅನುಸರಿಸಬೇಕಿರುವ ಸೂತ್ರಗಳಿವು
Discussion about this post