ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ (ಐಎನ್ಸಿ) ಈಗ 136ನೇ ಸಂಸ್ಥಾಪನಾ ದಿನದ ಸಂಭ್ರಮ. ಈ ಸಂದರ್ಭದಲ್ಲಿ ಪಕ್ಷದ ಹಿನ್ನೆಲೆ ಕುರಿತ ಸಂಕ್ಷಿಪ್ತ ಇಣುಕುನೋಟ
***
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ (ಐಎನ್ಸಿ) ಈಗ 136ನೇ ಸಂಸ್ಥಾಪನಾ ದಿನದ ಸಂಭ್ರಮ. ಸ್ವಾತಂತ್ರ್ಯ ಸಂಗ್ರಾಮವೂ ಸೇರಿದಂತೆ ದೇಶದ ಇತಿಹಾಸದ ಪ್ರಮುಖ ಘಟ್ಟಗಳಿಗೆ ಸಾಕ್ಷಿಯಾಗಿರುವ ಮುಖ್ಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಅಧಿಕೃತವಾಗಿ ಉದಯವಾದದ್ದು 1885ರಲ್ಲಿ.
ನಿವೃತ್ತ ನಾಗರಿಕ ಸೇವಾ ಅಧಿಕಾರಿ ಅಲನ್ ಆಕ್ಟೇವಿಯನ್ (ಎ.ಒ) ಹ್ಯೂಮ್ ನೇತೃತ್ವದಲ್ಲಿ ಸ್ಥಾಪನೆಯಾದ ಕಾಂಗ್ರೆಸ್ನ ಮುಖ್ಯ ಉದ್ದೇಶವಿದ್ದುದು, ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯರಿಗೆ ಸರಕಾರದಲ್ಲಿ ಹೆಚ್ಚಿನ ಪಾಲನ್ನು ಒದಗಿಸುವಂತೆ ಮಾಡುವುದು. ಇದರ ಜತೆಗೆ ನಾಗರಿಕರು ಮತ್ತು ಬ್ರಿಟಿಷ್ ಆಡಳಿತದ ನಡುವೆ ರಾಜಕೀಯ ಮಾತುಕತೆಯ ವೇದಿಕೆಯನ್ನು ರಚಿಸುವುದಾಗಿತ್ತು.
ಎ.ಒ. ಹ್ಯೂಮ್ ಪಕ್ಷದ ಸ್ಥಾಪಕರಲ್ಲಿ ಒಬ್ಬರಾದರೆ, ಉಮೇಶ ಚಂದರ್ ಬ್ಯಾನರ್ಜಿ ಮೊದಲ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷದ ಮೊದಲ ಅಧಿವೇಶನ 1885ರ ಡಿಸೆಂಬರ್ 28 ರಿಂದ 31 ರವರೆಗೆ ಮುಂಬೈಯಲ್ಲಿ ನಡೆದಿತ್ತು.
ಬಳಿಕ ಸ್ವಾತಂತ್ರ್ಯ ಸಂಗ್ರಾಮ ಚುರುಕುಪಡೆಯುತ್ತಿದ್ದಂತೆಯೇ ಕಾಂಗ್ರೆಸ್ನ ಚಟುವಟಿಕೆಗಳೂ ಗರಿಗೆದರಿದವು. 1900ರ ಹೊತ್ತಿಗೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರಗಾಮಿ ಹಾಗೂ ಮಂದಗಾಮಿ ಎಂಬ ಎರಡು ಬಣಗಳೂ ಸೃಷ್ಟಿಯಾದವು. ಬಾಲಗಂಗಾಧರ ತಿಲಕರ ನೇತೃತ್ವದಲ್ಲಿ ತೀವ್ರಗಾಮಿ ಗುಂಪು ಗುರುತಿಸಿಕೊಂಡರೆ ಮಹಾತ್ಮ ಗಾಂಧಿಜಿ ಅವರ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಸಾರಥ್ಯದಲ್ಲಿ ಮಂದಗಾಮಿಗಳು ಮುನ್ನಡೆದರು.
ಭಾರತೀಯ ಹಿಂದೂಗಳನ್ನು ಸಜ್ಜುಗೊಳಿಸಲು ಪ್ರಯತ್ನಿಸಿದ ಬಾಲ ಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಗಳನ್ನು ಆರಂಭಿಸಿದ್ದರು. ಅದುವೇ ಇಂದಿಗೂ ದೇಶದಾದ್ಯಂತ ಪ್ರಚಲಿತದಲ್ಲಿರುವುದು ಗಮನಾರ್ಹ.
ಮಹಾತ್ಮ ಗಾಂಧಿ ಅವರು 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಮರಳಿ, ಮಂದಗಾಮಿ ಗುಂಪಿನ ಸಹಾಯದಿಂದ ಕಾಂಗ್ರೆಸ್ನ 43ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಗಾಂಧಿ ಅವರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯ ಚಳವಳಿ ರೂಪುಗೊಂಡ ಬಗೆ, ಬಳಿಕ ನಡೆದ ಸತ್ಯಾಗ್ರಹ–ಹೋರಾಟಗಳು ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿವೆ. ಈ ಮಧ್ಯೆ, 1938-39ರ ಅವಧಿಯಲ್ಲಿ ಸುಭಾಷ್ಚಂದ್ರ ಬೋಸ್ ನೇತೃತ್ವದಲ್ಲಿಯೂ ಪಕ್ಷ ಮುನ್ನಡೆದಿತ್ತು. ಬಳಿಕ ಆಂತರಿಕ ಭಿನ್ನಮತದಿಂದ ಬೋಸ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ 1943ರಲ್ಲಿ ತಮ್ಮದೇ ಆದ ‘ಆಜಾದ್ ಹಿಂದ್’ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಮುನ್ನುಗ್ಗಿದರು.
ಮತ್ತೊಂದೆಡೆ, ಗಾಂಧಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ಯಶಸ್ಸು ದೊರಕಿದ್ದು ಈಗ ಇತಿಹಾಸ. ಸ್ವಾತಂತ್ರ್ಯಾನಂತರ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಾಂಗ್ರೆಸ್ ದೇಶದಲ್ಲಿ ಪ್ರಬಲ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತು. ಜವಹರಲಾಲ್ ನೆಹರೂ ದೇಶದ ಮೊದಲ ಪ್ರಧಾನಿಯಾದರು. ಸರ್ದಾರ್ ವಲ್ಲಭಭಾಯಿ ಪಟೇಲರು ದೇಶದ ಗೃಹ ಸಚಿವರಾದರು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಭಾರತದ ಒಕ್ಕೂಟ ಸೇರದೇ ಇದ್ದ ಅನೇಕ ಪ್ರಾಂತ್ಯಗಳನ್ನು ದೇಶದ ಜತೆ ವಿಲೀನಗೊಳಿಸುವಲ್ಲಿ ಪಟೇಲರು ಮಹತ್ವದ ಪಾತ್ರ ವಹಿಸಿದ್ದರು.
ಭಾರತ–ಪಾಕಿಸ್ತಾನ ವಿಭಜನೆ, ಬಾಂಗ್ಲಾದೇಶ ವಿಮೋಚನೆ ಸೇರಿದಂತೆ ದೇಶದ ಇತಿಹಾಸದ ಹಲವು ಮಹತ್ತರ ವಿದ್ಯಮಾನಗಳಿಗೂ ಕಾಂಗ್ರೆಸ್ ಸಾಕ್ಷಿಯಾಗಿದೆ, ಕಾರಣವೂ ಆಗಿದೆ.
1977ರಲ್ಲಿ ಜನತಾ ಪಕ್ಷದ ಮೈತ್ರಿಕೂಟದ ವಿರುದ್ಧ ಮೊದಲ ಬಾರಿ ಕಾಂಗ್ರೆಗೆ ಸೋಲಾಯಿತು. 1980ರಲ್ಲಿ ಪುನಃ ಅಧಿಕಾರಕ್ಕೆ ಮರಳಿ 1989 ರವರೆಗೆ ಮತ್ತೊಮ್ಮೆ ಆಡಳಿತ ನಡೆಸಿತು. 2004 ಮತ್ತು 2009ರಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿಕೊಂಡು ಕಾಂಗ್ರಸ್ ಆಡಳಿತ ನಡೆಸಿತು. 2014ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋಲನುಭವಿಸಿ ಮತ್ತೆ ಅಧಿಕಾರದಿಂದ ದೂರ ಉಳಿದಿದೆ. ಇದೀಗ ಮತ್ತೆ ಗತ ವೈಭವ ನೆನಪಿಸಿಕೊಂಡು ರಾಜಕೀಯ ಪುನಶ್ಚೇತನಕ್ಕಾಗಿ ಅವಿರತ ಶ್ರಮಿಸುತ್ತಿದೆ.
Discussion about this post