Real Life Story: 2020ರಲ್ಲಿ ಯಾರೂ ಕೂಡ ಕೊರೊನಾ ಎಂಬ ಮಹಾಮಾರಿಯಿಂದ ನಾವು ಮನೆಯಲ್ಲಿರುವಂತಾಗುತ್ತದೆ. ಊಟ ತಿಂಡಿಗೂ ಪರಿತಪಿಸುವಂತಾಗುತ್ತದೆ. ಕಣ್ಣಿಗೆ ಕಾಣದ ವೈರಸ್ ನಮ್ಮ ಜೀವನ ಅಸ್ತವ್ಯಸ್ತ ಮಾಡಿಬಿಡುತ್ತದೆ ಎಂದು ಊಹಿಸಿಯೇ ಇರಲಿಲ್ಲ. ಅಚಾನಕ್ ಆಗಿ ಅಟ್ಯಾಕ್ ಮಾಡಿದ ಮಹಾಮಾರಿಯಿಂದ ತಪ್ಪಿಸಿಕೊಳ್ಳಲೂ ಜನ ಈಗಲೂ ಪರದಾಡುತ್ತಿದ್ದಾರೆ. ಈ ಮಾತು ಈಗ್ಯಾಕೆ ಹೇಳುತ್ತಿದ್ದೇವೆಂದರೆ, ಇಂದು ನಾವು ವಿವರಿಸಲಿರುವ ಚಾಣಕ್ಯ ನೀತಿಗೂ, ಇಂದಿನ ಪರಿಸ್ಥಿತಿಗೂ ತುಂಬಾ ಹೋಲಿಕೆ ಇದೆ. ಹಾಗಾದ್ರೆ ಚಾಣಕ್ಯರು ಹಣ ಉಳಿತಾಯ ಮಾಡುವ ಬಗ್ಗೆ ಹೇಳಿದ್ದೇನು ಅಂತಾ ತಿಳಿಯೋಣ ಬನ್ನಿ..
ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಬರುವ ಸಂಬಳದಲ್ಲಿ ಒಂದಿಷ್ಟು ಹಣವನ್ನು ಉಳಿತಾಯ ಮಾಡು ಅಂತಾ ನಮ್ಮ ಹಿರಿಯರು ಬುದ್ಧಿ ಮಾತು ಹೇಳುತ್ತಾರೆ. ಚಾಣಕ್ಯರು ಕೂಡ ತಮ್ಮ ಚಾಣಕ್ಯ ನೀತಿಯಲ್ಲಿ ಇದೇ ಮಾತನ್ನ ಹೇಳಿದ್ದಾರೆ. ಲಾಕ್ಡೌನ್ ಆಗಿದ್ದ ಸಂದರ್ಭದಲ್ಲಿ, ಹಲವರಿಗೆ ಈ ಮಾತಿನ ಅರ್ಥ, ಅನುಭವ ಆಗಿರುತ್ತದೆ.
ಚಾಣಕ್ಯರ ಪ್ರಕಾರ ಆಪತ್ಕಾಲಕ್ಕಾಗಿ ಹಣವನ್ನು ಕೂಡಿಡಬೇಕು. ತಮ್ಮವರ ಸಲುವಾಗಿ ಮತ್ತು ತನ್ನ ಸಲುವಾಗಿ ಮನುಷ್ಯ ಹಣವನ್ನ ಕೂಡಿಡಬೇಕು. ಹೀಗೆ ಹಣ ಉಳಿತಾಯವಾಗಬೇಕು ಅಂದ್ರೆ ಮನುಷ್ಯ ಅನವಶ್ಯಕವಾಗಿ ಖರ್ಚು ಮಾಡದೇ, ದುಡಿದ ಹಣದಲ್ಲಿ ಸ್ವಲ್ಪ ಸ್ವಲ್ಪ ಹಣವನ್ನಾದರೂ ಕೂಡಿಡಬೇಕು. ಕೆಲವೊಮ್ಮೆ ಶ್ರೀಮಂತನಿಗೂ ಹಣದ ಅಭಾವವಾಗುವ ಪರಿಸ್ಥಿತಿ ಬಂದೊದಗುತ್ತದೆ. ಹಾಗಾಗಿ ಶ್ರೀಮಂತನಾದರೂ ಕೂಡ ಲಕ್ಷ್ಮೀ ದೇವಿಯ ಚಂಚಲತೆಯನ್ನರಿತು ಹಣ ಖರ್ಚು ಮಾಡಬೇಕಾಗುತ್ತದೆ.
ಇನ್ನು ಕೆಲವರಿಗೆ ಇಂದಿನ ಸಂತಸವನ್ನ ಇಂದೇ ಅನುಭವಿಸಬೇಕು. ನಾಳೆ ಹಣ ಕೂಡಿಡುವುದರಲ್ಲಿ ಅರ್ಥವಿಲ್ಲ ಎಂಬ ಯೋಚನೆಯಿರುತ್ತದೆ. ಆದ್ರೆ ಇಂಥ ಯೋಚನೆ ಮಾಡುವುದು ತಪ್ಪು. ಹಾಗಂತ ಇಂದಿನ ಸಂತಸವನ್ನ ಅನುಭವಿಸಬಾರದು ಅಂತಲ್ಲ. ಆದರೆ ಇದರೊಂದಿಗೆ ನಾಳಿನ ಜೀವನದ ಬಗ್ಗೆಯೂ ಯೋಚಿಸಬೇಕಾಗುತ್ತದೆ.
ಕೆಲ ವರ್ಷಗಳ ಹಿಂದೆ ನಡೆದ ನಿಜ ಘಟನೆ ಹೇಳ್ತೀವಿ ಕೇಳಿ. ಒಬ್ಬ ಹುಡುಗ ಇದೇ ಸ್ವಭಾವದವನಾಗಿದ್ದ. ಮನೆಯಲ್ಲಿ ಬಡತನವಿದ್ದರೂ ಆತನ ತಾಯಿ ಆತನಿಗೆ ಚೆನ್ನಾಗಿಯೇ ನೋಡಿಕೊಂಡಿದ್ದಳು. ಆದರೆ ಅವನಿಗೆ ಬೇಕ ಬೇಕಾದ ವಸ್ತುವನ್ನು ತೆಗೆಸಿಕೊಡಲು ಅವಳಲ್ಲಿ ಹಣವಿರಲಿಲ್ಲ. ಆದ್ರೂ ಕೂಡ ಮನೆಕೆಲಸ ಮಾಡಿ ಹೇಗೋ ಎರಡು ಹೊತ್ತಿಗಾಗುವಷ್ಟು ಊಟ, ಎರಡು ಜೊತೆ ಬಟ್ಟೆ, ಒಂದು ಚಿಕ್ಕ ಸೂರಿನಲ್ಲಿ ಜೀವನ ಸಾಗಿಸುತ್ತಿದ್ದಳು. ಇಂಥ ಕಷ್ಟದಲ್ಲಿಯೇ ಮಗನಿಗೆ ಪಿಯುಸಿ ತನಕ ಓದಿಸಿದಳು.
ನಂತರ ಬೆಂಗಳೂರಿನಲ್ಲಿ ಮಗನಿಗೆ ಕೆಲಸ ಸಿಕ್ಕಿತು. ಅಂತೂ ಮಗನ ಜೀವನ ಸರಿಹೋಯಿತು. ಇನ್ನು ತನಗೆ ಚಿಂತೆಯಿಲ್ಲ. ತಾನು ಮನೆಗೆಲಸ ಮುಂದುವರೆಸಿಕೊಂಡು, ನಿಶ್ಚಿಂತೆ ಯಿಂದ ಇರಬಹುದೆಂದು ತಾಯಿ ನಿಟ್ಟುಸಿರು ಬಿಟ್ಟಿದ್ದಳು. ಆದ್ರೆ ಬೆಂಗಳೂರಿನಲ್ಲಿದ್ದ ಮಗನಿಗೆ ಮೊದಲ ತಿಂಗಳ ಸಂಬಳ ಕಂಡು ಶೋಕಿ ಮಾಡುವ ಚಟ ಹತ್ತಿತು. ತಾಯಿ ಹೇಗೂ ಮನೆಕೆಲಸಕ್ಕೆ ಹೋಗುತ್ತಾಳೆ. ಆಕೆಗೆ ಸಂಬಳ ಬರುತ್ತದೆ. ಈ ಸಂಬಳ ತನಗಿರಲಿ ಎಂದು ಯೋಚಿಸುತ್ತ. ಬರುವ ಸಂಬಳದಲ್ಲಿ ಸ್ವಲ್ಪ ಕೂಡಿಟ್ಟು, ಇನ್ನುಳಿದ ಹಣದಲ್ಲಿ ಬಣ್ಣ ಬಣ್ಣದ, ಬೆಲೆ ಬಾಳುವ ಉಡುಗೆ ತೊಡುಗೆ ಕೊಳ್ಳಲು ಆರಂಭಿಸಿದ. ಪ್ರತಿ ತಿಂಗಳು ಬರುವ ಸಂಬಳ ಹೀಗೆ ಶೋಕಿಯಲ್ಲೇ ಕಳೆದು ಹೋಗುತ್ತಿತ್ತು. ಮತ್ತು ಸ್ವಲ್ಪ ಹಣ ಬ್ಯಾಂಕ್ ಅಕೌಂಟಿನಲ್ಲಿ ಜಮೆಯಾಗುತ್ತಿತ್ತು. ಮತ್ತು ಈ ವಿಷಯ ಅಮ್ಮನಿಗೂ ಗೊತ್ತಿತ್ತು.
ಅಮ್ಮನ ಪ್ರಕಾರ ತನ್ನ ಮಗ ಬ್ಯಾಂಕ್ನಲ್ಲಿ ಹಣ ಜಮೆ ಮಾಡಿ, ತನ್ನ ಮುಂದಿನ ಜೀವನಕ್ಕೆ ಕೂಡಿಡುತ್ತಿದ್ದಾನೆ. ತಾಯಿಯ ಕಷ್ಟವನ್ನು ಅರಿತುಕೊಂಡಿದ್ದಾನೆಂದುಕೊಂಡಿದ್ದಳು. ಆದ್ರೆ ಮಗನ ಪ್ಲಾನ್ ಬೇರೆ ಇತ್ತು. ಮಗ ಕೂಡಿಟ್ಟ 1ಲಕ್ಷ ರೂಪಾಯಿಯನ್ನು ಒಂದೇ ದಿನ ಖರ್ಚು ಮಾಡಿಬಿಟ್ಟ. ತಾನಿರುವ ರೂಮಿನಿಂದ, ತನ್ನ ಕಚೇರಿ ನಡೆದು ಹೋಗುವಷ್ಟು ಹತ್ತಿರವಿದ್ದರೂ ಕೂಡ, ಶೋಕಿಗಾಗಿ ಬೈಕ್ ಖರೀದಿ ಮಾಡಿದ್ದ. ಹೊಸ ಬಟ್ಟೆ ಹಾಕಿ, ಬೈಕ್ನಲ್ಲಿ ಜುಮ್ ಎಂದು ಓಡಾಡುತ್ತ, ಹುಡಿಗಿಯರಿಗೆ ಲೈನ್ ಹಾಕುತ್ತಿದ್ದ.
ಹೀಗಿರುವಾಗ ಒಂದು ದಿನ, ಆಫೀಸಿಗೆಂದು ಬೈಕ್ ಹಿಡಿದು ಹೊರಟವನು, ಆಫೀಸಿಗೆ ಹೋಗಿ ಪಂಚ್ ಮಾಡಿ, ಮತ್ತೆ ಬೈಕ್ ತೆಗೆದುಕೊಂಡು ತಿರುಗಾಡಲು ಹೊರಟ. ಆಫೀಸಿನಲ್ಲಿ ಸುಮಾರು ಕೆಲಸ ಪೆಂಡಿಂಗ್ ಇದ್ದರೂ, ಅದನ್ನು ಕಡೆಗಣಿಸಿ, ಸಿಟಿ ರೌಂಡ್ ಹೊಡೆದ. ರಾಂಗ್ ರೂಟ್ನಲ್ಲಿ ಹೋಗುವಾಗ, ಸ್ಪೀಡ್ ಆಗಿ ಬಂದ್ ಬೈಕ್ ಗುದ್ದಿ ಅಪಘಾತವಾಯಿತು. ತೀವ್ರವಾಗಿ ಗಾಯಗೊಂಡ ಹುಡುಗನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವಿಷಯ ತಿಳಿದ ತಾಯಿ, ತನ್ನ ಬಳಿ ಇರುವ ಚುರು ಪಾರು ಕಾಸಿನೊಂದಿಗೆ ಬೆಂಗಳೂರಿಗೆ ಓಡಿ ಬಂದಳು. ತನ್ನ ಕೈಲಾದಷ್ಟು ದುಡ್ಡು ತುಂಬಿ, ಸಂಬಂಧಿಕರ ಬಳಿ ಸಾಲ ಕೇಳಿ, ಅದರಿಂದ ಮಗನಿಗೆ ಚಿಕಿತ್ಸೆ ಕೊಡಿಸಿ, ಮನೆಗೆ ಕರೆದೊಯ್ದಳು.
ಈಗ ಆ ಹುಡುಗನಿಗೆ ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಯಾಕಂದ್ರೆ ಆಫೀಸಿನ ಕೆಲಸದ ಮೇಲೆ ಹೊರಗೆ ಹೋಗಿದ್ದರೆ, ಆಫೀಸಿನಿಂದ ಸಹಾಯ ಸಿಗುತ್ತಿತ್ತು. ಆದ್ರೆ ಪಂಚ್ ಮಾಡಿ, ಕೆಲಸ ಮಾಡುವುದನ್ನು ಬಿಟ್ಟು, ತಿರುಗಾಡಲು ಹೋದ ಕಾರಣ ಆಫೀಸಿನಿಂದ ಬಿಡಿಗಾಸು ಸಿಗಲಿಲ್ಲ. ಕೆಲ ತಿಂಗಳ ಹಿಂದೆ ತೆಗೆದುಕೊಂಡ ಹೊಸ ಬೈಕ್ ಕೂಡ ನಜ್ಜು ಗುಜ್ಜಾಗಿತ್ತು. ಆದ್ರೆ ಅಪಘಾತ ಮಾಡಿದವ ಅದರ ಶುಲ್ಕ ಭರಿಸಲಿಲ್ಲ. ಯಾಕಂದ್ರೆ ಈ ಹುಡುಗ ರಾಂಗ್ ರೂಟ್ನಲ್ಲಿ ಬಂದ ಕಾರಣ, ತಪ್ಪು ಇವನದ್ದೇ ಆಗಿತ್ತು. ಗಾಡಿಯ ಈಎಂಐ ಶುಲ್ಕ ಭರಿಸುವುದು ಬಾಕಿ ಇತ್ತು. ಹೀಗೆ ಒಂದೇ ಸಮನೇ ಸಾಲದ ಹೊರೆ ಬಿದ್ದಿತ್ತು. ಇಷ್ಟೆಲ್ಲ ಘಟನೆ ನಡೆದ ಮೇಲೆ ಆತ ಬುದ್ಧಿ ಕಲಿತ. ಆರೋಗ್ಯ ಸುಧಾರಿಸಿದ ಮೇಲೆ ಹೊಸ ಕೆಲಸ ಹುಡುಕಿ, ಅದರಿಂದ ಬಂದ ಸಂಬಳವನ್ನ ಮಿತವಾಗಿ ಬಳಸಿದ. ಇಂಥ ಸಮಸ್ಯೆಗಳು ಬರಬಹುದು ಅನ್ನೋ ಕಾರಣಕ್ಕೇನೇ ಹಿರಿಯರು ಕಷ್ಟಗಳು ಹೇಳಿಕೇಳಿ ಬರುವುದಿಲ್ಲ ಅಂತಾ ಹೇಳೋದು. ಮತ್ತು ಇದೇ ಕಾರಣಕ್ಕೆ ಚಾಣಕ್ಯರು ಹಣವನ್ನ ಕೂಡಿಡಬೇಕು. ಆಪತ್ಕಾಲದಲ್ಲಿ ಅದು ಕೆಲಸಕ್ಕೆ ಬರುತ್ತದೆ ಅಂತಾ ಹೇಳಿದ್ದಾರೆ.
Discussion about this post