ಬಿಪಿನ್ ಲಕ್ಷ್ಮಣ್ಸಿಂಗ್ ರಾವತ್ ಸದ್ಯ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಸಶಸ್ತ್ರಪಡೆಗಳ ಅತ್ಯುನ್ನತ ಹುದ್ದೆಯಾಗಿದ್ದು ಭಾರತೀಯ ಸೈನ್ಯದ ಮೂರೂ ವಿಭಾಗಗಳ ಮುಖ್ಯಸ್ಥರೂ ಇವರಿಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ. ಭಾರತ ಸೇನೆಯಲ್ಲಿ ಇವರು ಸಲ್ಲಿಸಿರುವ ವಿಶಿಷ್ಟ ಸೇವೆಗಾಗಿ ಇವರಿಗೆ ಅನೇಕ ಪ್ರಶಸ್ತಿ ಹಾಗೂ ಪದಕಗಳು ಸಂದಿವೆ.
ಬಿಪಿನ್ ರಾವತ್ ಜನಿಸಿದ್ದು ಉತ್ತರಾಖಂಡ್ ರಾಜ್ಯದ ಪೌರಿಯಲ್ಲಿ, ದಿನಾಂಕ 16 ಮಾರ್ಚ್ 1958ರಂದು. ಭಾರತೀಯ ಸೈನ್ಯದ ಸೇವೆಗೆ ಅನೇಕ ಸೈನಿಕರನ್ನು ನೀಡಿದ ಕುಟುಂಬ ಅವರದು. ಅವರ ತಂದೆ ಲಕ್ಷ್ಮಣ್ಸಿಂಗ್ ರಾವತ್ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸಿ ಲೆಫ್ಟಿನೆಂಟ್ ಜನರಲ್ ಹುದ್ದೆಯವರೆಗೂ ಏರಿದವರು. ಅವರ ತಾಯಿ ಉತ್ತರ ಕಾಶಿ ಜಿಲ್ಲೆಯವರಾಗಿದ್ದು ಉತ್ತರಕಾಶಿ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಕಿಶನ್ಸಿಂಗ್ ಪರಮಾರ್ರ ಪುತ್ರಿಯಾಗಿದ್ದರು. ಹೀಗೆ ಬಿಪಿನ್ ರಾವತ್ರ ತಂದೆ ಹಾಗೂ ತಾಯಿಯರ ಎರಡೂ ಕುಟುಂಬಗಳು ದೇಶ ಸೇವೆಗೆ ಹೆಸರಾದ ಕುಟುಂಬಗಳು.
ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಡೆಹ್ರಾಡೂನ್ನ ಕೇಮ್ಬ್ರಿಯನ್ ಹಾಲ್ ಶಾಲೆ ಹಾಗೂ ಶಿಮ್ಲಾದ ಸೈಂಟ್ ಎಡ್ವರ್ಡ್ ಶಾಲೆಗಳಲ್ಲಿ ಮುಗಿಸಿದ ಅವರು ಖಡಕವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯನ್ನು ಸೇರಿದರು. ಅಲ್ಲಿ ಅವರಿಗೆ ಸ್ವೋರ್ಡ್ ಆಫ್ ಆನರ್ ಪ್ರಶಸ್ತಿಯನ್ನು ನೀಡಲಾಯಿತು.
ರಾವತ್ರವರು ವೆಲ್ಲಿಂಗ್ಟನ್ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (ಡಿಎಸ್ಎಸ್ಸಿ) ನಿಂದಲೂ ಶಿಕ್ಷಣ ಪಡೆದರು ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನದ ಆರ್ಮಿ ಕಮಾಂಡ್ ಹಾಗೂ ಕಾನ್ಸಾಸ್ನ ಫೋರ್ಟ್ ಲೀವನ್ವರ್ತ್ ನಿಂದ ಹೈಯರ್ ಕಮಾಂಡ್ ಕೋರ್ಸನ್ನು ಪಡೆದರು. ತಮ್ಮ ಡಿಎಸ್ಎಸ್ಸಿಯ ವಿದ್ಯಾಭ್ಯಾಸದ ಅವಧಿಯಲ್ಲಿ ಎಮ್ಫಿಲ್ ಪದವಿಯನ್ನೂ ಪಡೆದರು. ಮುಂದೆ, 2011ರಲ್ಲಿ ಇವರಿಗೆ ಸೈನ್ಯ ಹಾಗೂ ಮಾಧ್ಯಮಗಳ ವ್ಯೂಹಾತ್ಮಕ ಅಧ್ಯಯನಗಳ ಸಂಶೋಧನೆಗಾಗಿ ಮೀರತ್ನ ಚೌಧುರಿ ಚರಣ್ಸಿಂಗ್ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಪದವಿಯೂ ದೊರೆಯಿತು.
ಸೈನ್ಯ ವೃತ್ತಿ
ದಿನಾಂಕ 16 ಡಿಸೆಂಬರ್ 1978ರಂದು ರಾವತ್ ಗೂರ್ಖಾ ರೈಫಲ್ನ 5ನೇ ಬಟಾಲಿಯನ್ ಸೇರಿದರು. ಅವರ ತಂದೆಯೂ ಇಲ್ಲೇ ತಮ್ಮ ಪ್ರಥಮ ಉದ್ಯೂಗಕ್ಕೆ ಸೇರಿದ್ದರು. ಅವರಿಗೆ ಎತ್ತರದ ಪರ್ವತ ಪ್ರದೇಶಗಳ ಯುದ್ಧಗಳಲ್ಲಿ ಹೆಚ್ಚಿನ ಅನುಭವ ಹಾಗೂ ನಿಪುಣತೆಯಿದ್ದು 10 ವರ್ಷಗಳ ಕಾಲ ಒಳನುಸುಳುವಿಕೆಯ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಸೈನ್ಯದ ವಿವಿಧ ಹಂತಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾವತ್ ಅನೇಕ ರಾಷ್ಟ್ರಗಳ ಸೈನ್ಯಗಳಿಂದ ಕೂಡಿದ ಪಡೆಗೆ ಕಾಂಗೋ ಗಣರಾಜ್ಯ ಸೈನ್ಯದ ನಾಯಕತ್ವವನ್ನೂ ವಹಿಸಿದ್ದರು.
ಭಾರತೀಯ ಸೈನ್ಯದ ಮೂರೂ ಸಶಸ್ತ್ರಪಡೆಗಳ ಮುಖ್ಯಸ್ಥರಾಗಿ ಬಿಪಿನ್ ರಾವತ್ರವರನ್ನು ಕೇಂದ್ರ ಸರ್ಕಾರವು ಜನವರಿ 1, 2020ರಂದು ನೇಮಿಸಿತ್ತು. ಇದೇ ಸಮಯದಲ್ಲಿ ರಕ್ಷಣಾ ಇಲಾಖೆಯ ಭಾಗವಾಗಿ ಅಸ್ತಿತ್ವಕ್ಕೆ ಬಂದ ಮಿಲಿಟರಿ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು. ಏಕೀಕೃತ ಕಮಾಂಡ್ಗಳ ರಚನೆ ಮತ್ತು ಸೇನೆಯ ಪುನರ್ ಸಂಘಟನೆಯ ಮಹತ್ವದ ಹೊಣೆಗಾರಿಕೆಯನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು.
ತಮಿಳುನಾಡಿನ ಕುನ್ನೂರಿನಲ್ಲಿ ಇಂದು ಸಂಭವಿಸಿದ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ ಒಟ್ಟು 14 ಜನರಿದ್ದ ಈ ಅಪಘಾತದಲ್ಲಿ ಇಲ್ಲಿಯವರೆಗೂ 12 ಶವಗಳು ಸಿಕ್ಕಿರುವುದಾಗಿ ವರದಿಯಾಗಿದೆ.
Army Leader
Discussion about this post