ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕಡೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆತನ ವಕೀಲರು ಶುಕ್ರವಾರ ಶತಪ್ರಯತ್ನ ಮಾಡಿದರೂ ಸಂಜೆ ಒಳಗೆ ನಿಗದಿತ ಕಾಗದ ಪತ್ರಗಳನ್ನು ಹೊಂದಿಸಿಕೊಳ್ಳಲು ಆಗದ ಕಾರಣ ಆರ್ಯನ್ ಮತ್ತೊಂದು ರಾತ್ರಿ ಜೈಲಿನಲ್ಲಿ ಇರಬೇಕಾಯಿತು.
ಐಷಾರಾಮಿ ಹಡಗಿನಲ್ಲಿ ಮಾದಕವಸ್ತು ಸೇವನೆ ಕೇಸ್ನಲ್ಲಿ ಬಂಧಿತನಾಗಿ 28 ದಿನ (ಐದು ದಿನ ಪೊಲೀಸ್ ಲಾಕಪ್ನಲ್ಲಿ ಇದ್ದಿದ್ದು ಸೇರಿ) ಜೈಲಿನಲ್ಲಿದ್ದ ಬಾಲಿವುಡ್ ನಟ ಶಾರುಕ್ ಖಾನ್ ಮಗ ಆರ್ಯನ್ ಖಾನ್ (23) ಶನಿವಾರ ಬೆಳಗ್ಗೆ 11 ಗಂಟೆಗೆ ಆರ್ಥರ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಜೈಲಿನಿಂದ ಹೊರಬರುತ್ತಿದ್ದಂತೆ ರೇಂಜ್ ರೋವರ್ ಕಾರಿನಲ್ಲಿ ಆರ್ಯನ್ನನ್ನು ‘ಮನ್ನತ್’ಗೆ (ಶಾರುಕ್ ಖಾನ್ ನಿವಾಸ) ಕರೆದೊಯ್ಯಲಾಯಿತು. ಶಾರುಕ್ ಖಾನ್ ಅಭಿಮಾನಿಗಳು ಅವರ ಮನೆ ಮುಂದೆ ಬೆಳಗ್ಗೆಯಿಂದಲೇ ಜಮಾಯಿಸಿ, ಆರ್ಯನ್ ಖಾನ್ ಸ್ವಾಗತಕ್ಕೆ ಪೋಸ್ಟರ್ ಹಿಡಿದು ನಿಂತಿದ್ದರು.
ಬಾಂಬೆ ಹೈಕೋರ್ಟ್ ಆರ್ಯನ್ ಖಾನ್, ಅರ್ಬಾಜ್ ಖಾನ್ ಮತ್ತು ಮುನ್ಮುನ್ ಧಮೇಚಾರಿಗೆ ಗುರುವಾರವೇ ಜಾಮೀನು ನೀಡಿತ್ತು. ಆದರೆ, ಆದೇಶದ ಪ್ರಮಾಣೀಕೃತ ಪ್ರತಿ ಮತ್ತು ಇನ್ನಿತರ ದಾಖಲೆಗಳನ್ನು ಶುಕ್ರವಾರ ಸಂಜೆ 5.30ರೊಳಗೆ ಹೊಂದಿಸಿಕೊಳ್ಳಲು ಆರ್ಯನ್ ಖಾನ್ ವಕೀಲರಿಗೆ ಸಾಧ್ಯವಾಗದ ಕಾರಣ ಆತನ ಬಿಡುಗಡೆ ಒಂದು ದಿನ ತಡವಾಯಿತು. ಆರ್ಯನ್ ಪರವಾಗಿ ಸುಪ್ರೀಂಕೋರ್ಟ್ನ ಹೆಸರಾಂತ ವಕೀಲ ಮುಕುಲ್ ರೊಹಟಗಿ ವಾದಿಸಿದ್ದರು.
ಗುರುವಾರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವ ವೇಳೆ 14 ಷರತ್ತನ್ನು ಹೈಕೋರ್ಟ್ ಹಾಕಿತ್ತು. ಇದರಲ್ಲಿ ಪ್ರಮುಖವಾಗಿ ತಲಾ 1 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಜೊತೆಗೆ ಇಷ್ಟೇ ಮೊತ್ತಕ್ಕೆ ಇನ್ನೊಬ್ಬರ ಖಾತರಿಯನ್ನು ನೀಡಬೇಕು ಎಂದು ಹೈಕೋರ್ಟ್ ಹೇಳಿತ್ತು. ನಟಿ ಜೂಹಿ ಚಾವ್ಲಾ ಶುಕ್ರವಾರವೇ 1 ಲಕ್ಷ ರೂಪಾಯಿಯ ಖಾತ್ರಿಯನ್ನು ನೀಡಿದ್ದರು. ಜೂಹಿ ಚಾವ್ಲಾ ಮತ್ತು ಶಾರುಖ್ ಖಾನ್ ಅನೇಕ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ ಮತ್ತು ಇವರಿಬ್ಬರು ಕೋಲ್ಕತ್ತ ನೈಟ್ ರೈಡರ್ ಐಪಿಎಲ್ ತಂಡದ ಸಹಮಾಲೀಕರೂ ಆಗಿದ್ದಾರೆ.
ಆರೋಪಿಗಳು ತಮ್ಮ ಪಾಸ್ಪೋರ್ಟ್ ಅನ್ನು ವಿಶೇಷ ಕೋರ್ಟ್ ವಶಕ್ಕೆ ನೀಡಬೇಕು. ಕೋರ್ಟ್ನ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳುವಂತಿಲ್ಲ. ಮುಂಬೈನಿಂದ ಹೊರಹೋಗಬೇಕಿದ್ದರೆ ಪ್ರಕರಣದ ತನಿಖಾಧಿಕಾರಿಗೆ ಮಾಹಿತಿ ನೀಡಬೇಕು. ಪರಸ್ಥಳದಲ್ಲಿನ ತಮ್ಮ ಭೇಟಿಯ ಬಗ್ಗೆ ವಿವರ ಸಲ್ಲಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಹೇಳಿಕೆ ನೀಡುವಂತಿಲ್ಲ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್/ಕಾಮೆಂಟ್ ಮಾಡುಂವತಿಲ್ಲ ಎಂದು ಕೋರ್ಟ್ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ಮುಂಬೈನಿಂದ ಗೋವಾಕ್ಕೆ ಹೋಗುತ್ತಿದ್ದ ವಿಹಾರ ನೌಕೆಯಲ್ಲಿ ಅ.2ರಂದು ರೇವ್ ಪಾರ್ಟಿ ನಡೆಸಿ ಮಾದಕವಸ್ತು ಸೇವಿಸಿದ ಪ್ರಕರಣದ ಸಂಬಂಧ ಆರ್ಯನ್ ಖಾನ್ ಮತ್ತು ಇತರ ಏಳು ಮಂದಿಯನ್ನು ಮಾದಕವಸ್ತು ನಿಯಂತ್ರಣ ದಳ (ಎನ್ಸಿಬಿ) ಬಂಧಿಸಿತ್ತು. ಇವರ ವಿಚಾರಣೆಯ ನಂತರ ಇನ್ನೂ 12 ಮಂದಿಯನ್ನು ದಸ್ತಗಿರಿ ಮಾಡಿತ್ತು. ಪ್ರಕರಣದ ತನಿಖಾಧಿಕಾರಿಯಾದ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಮಾಡಲಾಗಿರುವ 8 ಕೋಟಿ ರೂಪಾಯಿ (ಒಟ್ಟು 25 ಕೋಟಿ ರೂಪಾಯಿ) ಲಂಚದ ಆರೋಪದ ಬಗ್ಗೆ ಎನ್ಸಿಬಿ ವಿಚಕ್ಷಣ ದಳದಿಂದ ತನಿಖೆಗೆ ಆದೇಶಿಸಿದೆ.
Aryan Khan Released From Arthur Road Jail in Mumbai
ಇದನ್ನೂ ಓದಿ: ಆರ್ಯನ್ ಖಾನ್ಗೆ ಜಾಮೀನು ಸಿಕ್ಕ ತಕ್ಷಣ ಶಾರೂಖ್ ಅತ್ತುಬಿಟ್ಟಿದ್ದರು
ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದ ನಂತರ ಪ್ರಥಮ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡ ಶಾರುಖ್
Discussion about this post