ಸಾರ್ವಜನಿಕರು ಜ್ಯೋತಿಷ ಎಂದರೆ ಭಯ ಪಡುವ ಪರಿಸ್ಥಿತಿ ಇದೆ. ಜ್ಯೋತಿಷ ಎಂದರೆ ಏನು ಮತ್ತು ಜ್ಯೋತಿಷದ ಮೂಲ ತತ್ವ ಹಾಗೂ ಉದ್ದೇಶಗಳೇನು ಎಂಬುದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಅದರ ಬಗ್ಗೆ ಇರುವ ಭಯ ಹೋಗವುದು. ಮೊದಲಿಗೆ ನಾವು ಜ್ಯೋತಿಷ ಎಂದರೇನು ಎಂದು ತಿಳಿದುಕೊಳ್ಳೋಣ. “ಜ್ಯೋತಿ” ಎಂದರೆ ಬೆಳಕು, “ಷ” ಎಂದರೆ ಅದರ ಕಿರಣ. ಎರಡನ್ನೂ ಒಟ್ಟಾಗಿ ಸೇರಿಸಿ ಹೇಳಬೇಕೆಂದರೆ “ಜ್ಯೋತಿಷ ಎಂದರೆ ಬೆಳಕಿನ ಕಿರಣ.” ನಮಗೆ ಅಂದರೆ ಭೂಮಿಗೆ ಬೆಳಕು ಬರುವುದು ಸೂರ್ಯನಿಂದ ಮತ್ತು ಚಂದ್ರನಿಂದ. ಸೂರ್ಯನಿಂದ ನಮಗೆ ನೇರವಾಗಿ ಬರುವ ಬೆಳಕು, ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು ಪ್ರತಿಫಲಿತವಾಗಿ ನಮಗೆ ಬರುವ ಬೆಳಕು, ಹಾಗೂ ಸೂರ್ಯನ ಬೆಳಕು ಬೇರೆ ಗ್ರಹಗಳ ಮೇಲೆ ಬಿದ್ದು ನಮಗೆ ಬರುವ ಬೆಳಕು ಇದರಲ್ಲಿ ಸೇರಿವೆ. ಆದ್ದರಿಂದ ನಾವು ಇದನ್ನು ಬೆಳಕಿನ ಒಂದು ಆಟ ಎಂದು ಕರೆಯಬಹುದಾಗಿದೆ. ಇನ್ನೂ ಕೆಲವರ ಪ್ರಕಾರ, ಜ್ಯೋತಿಷವೆನ್ನುವುದು ಆಕಾಶಕಾಯಗಳ ಆಟ.
ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾಗಿರುವುದೇನೆಂದರೆ, ಯಾರ ಬದುಕಿನಲ್ಲಿ ಆಧ್ಯಾತ್ಮಿಕ ಸಮಸ್ಯೆಗಳಿಂದಾಗಿ ಜೀವನ ಕತ್ತಲಾಗಿದೆಯೋ, ಅವರಿಗೆ ಸೂಕ್ತ ಹಾಗೂ ಸರಳ ಪರಿಹಾರಗಳ ಮೂಲಕ ಬೆಳಕಿನ ಕಿರಣವಾಗಿ ದಾರಿ ತೋರಿಸಿ ಬಂದಿರುವ ಸಮಸ್ಯೆಗಳನ್ನು ಆಧ್ಯಾತ್ಮಿಕವಾಗಿ ಪರಿಹಾರ ಮಾಡಿಕೊಂಡು ಮುಂದಿನ ಜೀವನವನ್ನು ಸುಖಮಯವಾಗಿ ಕಳೆಯಲು ದಾರಿದೀಪವಾಗುವುದೇ ಜ್ಯೋತಿಷ. ಆದ್ದರಿಂದ, ಅಂಧಕಾರ ತುಂಬಿದ ಜೀವನಕ್ಕೆ ಜ್ಯೋತಿಷ ಬೆಳಕಾಗುವುದೇ ವಿನ: ಭಯ ಹುಟ್ಟಿಸುವುದಲ್ಲ.
ಬಹಳಷ್ಟು ಜನ ಹೇಳುವುದೇನೆಂದರೆ, ದಿನನಿತ್ಯ ದೂರದರ್ಶನದಲ್ಲಿ ಬರುವ ಜ್ಯೋತಿಷಿಗಳು ದುಬಾರಿ ಶುಲ್ಕಗಳನ್ನು ತೆಗೆದುಕೊಳ್ಳುವುದಲ್ಲದೇ ದುಬಾರಿ ಪರಿಹಾರೋಪಾಯಗಳನ್ನು ಹೇಳುತ್ತಾರೆ, ಇದು ನಮ್ಮಲ್ಲಿ ಭಯ ಹುಟ್ಟಿಸುತ್ತದೆ ಎಂದು ಹೇಳುತ್ತಾರೆ. ಇದು ವಾಸ್ತವ ಸಂಗತಿಯೇ ಆಗಿದ್ದು, ತಮ್ಮನ್ನು ತಾವು ಜ್ಯೋತಿಷಿಗಳೆಂದು ಹೇಳಿಕೊಳ್ಳುವ ಕೆಲವರು ತಮ್ಮ ದುರಾಸೆಗಳನ್ನು ಈಡೇರಿಸಿಕೊಳ್ಳಲು ಈ ಪವಿತ್ರವಾದ ಶಾಸ್ತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ. ಕೆಲವೊಮ್ಮೆ ಇಂಥವರು ಜಾಕದಲ್ಲಿ ಇಲ್ಲದ ದೋಷಗಳನ್ನು ಇದೆಯೆಂದು ಹೇಳಿ ಸಾಮಾನ್ಯ ಜನರಲ್ಲಿ ಭಯ ಹುಟ್ಟಿಸಿ ಅವರನ್ನು ಸುಲಿಗೆ ಮಾಡುತ್ತಿರುವ ಉದಾಹರಣೆಗಳೂ ಇವೆ. ಇದರಿಂದಾಗ, ಜ್ಯೋತಿಷವೆಂದರೆ ಭಯಪಡುವ ಪರಿಸ್ಥಿತಿ ಉಂಟಾಗಿದೆ.
ಕೆಲವೊಮ್ಮೆ, ಪ್ರಗತಿಪರರೆಂದೋ ಅಥವಾ ವಿಜ್ಞಾನಿಗಳೆಂದೋ ಕರೆದುಕೊಳ್ಳುವವರು ಜ್ಯೋತಿಷಿಗಳಿಗೆ ಅವರ ಸಾಧನೆಯಿಂದ ಕೀರ್ತಿ, ಪ್ರತಿಷ್ಠೆ ಮತ್ತು ಹೆಚ್ಚಿನ ಧನ ಸಂಪಾದನೆಯಾಗಿ ಉತ್ತಮ ಸ್ಥಿತಿಯಲ್ಲದಿದ್ದಾಗ ವೃತ್ತಿವೈಷಮ್ಯದಿಂದಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಅಥವಾ ಜ್ಯೋತಿಷವನ್ನು ಮೂಢನಂಬಿಕೆಯೆಂದೂ, ಅವೈಜ್ಞಾನಿಕವೆಂದೂ ಹೀಗಳೆಯುವ ಪರಿಪಾಠ ಬೆಳೆಸಿಕೊಂಡಿರುತ್ತಾರೆ. ಇಂಥದೊಂದು ವರ್ಗವಿದ್ದು ಅವರು ಜ್ಯೋತಿಷದ ಬಗ್ಗೆ ಅಪಪ್ರಚಾರ ಮಾಡುತ್ತಾ ಗೊಂದಲಗಳನ್ನು ಸೃಷ್ಟಿ ಮಾಡುವುದರಿಂದಲೂ ಜನಸಾಮಾನ್ಯರಲ್ಲಿ ಜ್ಯೋತಿಷದ ಬಗ್ಗೆ ಭಯ ಉಂಟಾಗುತ್ತದೆ. ಹೀಗಿದ್ದರೂ, ಈಗಲೂ ಶೇ 90 ಜನರು ಜ್ಯೋತಿಷದ ಬಗ್ಗೆ ಅತ್ಯಂತ ಗೌರವಾದರಗಳಿದ್ದು ನಂಬಿಕೆಯನ್ನಿಟ್ಟುಕೊಂಡಿದ್ದಾರೆ.
ಮಾನವ ತನ್ನ ಹಿಂದಿನ ಜನ್ಮಗಳಲ್ಲಿ ಯಾವ-ಯಾವ ಪಾಪ-ಪುಣ್ಯಕಾರ್ಯಗಳನ್ನು ಮಾಡಿ ಏನೇನು ಫಲ ತಂದಿದ್ದಾನೆಂದು ಅವನ ಜನ್ಮ ಲಗ್ನ ಕುಂಡಲಿಯಿಂದ ತಿಳಿಯಬಹುದಾಗಿದೆ. ನಾಮಕರಣ ಮಾಡಿದ ಒಂದು ವರ್ಷದ ನಂತರ ಜನ್ಮಲಗ್ನ ಕುಂಡಲಿ ಅಥವಾ ಜಾತಕವನ್ನು ಬರೆಸಿ ಯಾವುದಾದರೂ ದೋಷಪೂರಿತ ಗ್ರಹಸ್ಥಿತಿಗಳಿದ್ದರೆ ಅವುಗಳಿಗೆ ಸಂಪೂರ್ಣ ಶಾಂತಿಪೂಜೆ ಮಾಡಿಸುವುದರ ಮೂಲಕ ದೋಷಪೂರಿತ ಗ್ರಹಗಳ ಕೆಟ್ಟಫಲಗಳನ್ನು ಶೇ 60ರಷ್ಟು ಪರಿಹರಿಸಿಕೊಳ್ಳಬಹುದಾಗಿದೆ. ಹೋಮಗಳನ್ನು ಮಾಡಿಸುವುದು, ಶಾಂತಿ ಪೂಜೆಗಳನ್ನು ಮಾಡಿಸುವುದು, ಹಾಗೂ ಜಪಗಳನ್ನು ಮಾಡಿಸುವುದೆಲ್ಲವೂ ವಿವಿಧ ಪರಿಹಾರ ಕಾರ್ಯಗಳೇ ಆಗಿದ್ದು ಒಬ್ಬೊಬ್ಬರು ಒಂದೊಂದು ವಿಧಾನ ಅನುಸರಿಸುತ್ತಾರೆ. ಜಪಗಳ ಮೂಲಕ ಮಾಡುವ ಪರಿಹಾರ ಕಾರ್ಯ ಹೆಚ್ಚು ಸಮಯ ತೆಗೆದುಕೊಳ್ಳಲಿದ್ದು ಸ್ವತ: ಯಾರಿಗೆ ದೋಷಗಳಿವೆಯೋ ಅವರೇ ಜಪ ಮಾಡಬೇಕಾಗುತ್ತದೆ.
ಶ್ರದ್ಧಾಭಕ್ತಿಗಳಿಂದ ಹಾಗೂ ಪೂರ್ಣ ಮನಸ್ಸಿನಿಂದ ಕ್ರಮಬದ್ಧವಾಗಿ ಜಪ/ಪರಿಹಾರಗಳನ್ನು ಮಾಡಿಕೊಂಡರೂ ಉತ್ತಮ ಫಲ ಲಭಿಸುವುದು, ಇದಕ್ಕೆ ಯಾವುದೇ ಪುರೋಹಿತರ/ಜ್ಯೋತಿಷಿಗಳ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ವೇಳೆ ನಮಗೆ ಕಾಲಾವಕಾಶಗಳಿಲ್ಲದೇ ಇರುವುದರಿಂದ ನಾವು ಪುರೋಹಿತರ ಮೊರೆ ಹೋಗುತ್ತೇವೆ. ಖರ್ಚುಮಾಡುವ ಶಕ್ತಿಯಿದ್ದವರು ಹೋಮ-ಶಾಂತಿಪೂಜೆಗಳನ್ನು ಮಾಡಿಸಿಕೊಳ್ಳಬಹುದು.
ಜನಸಾಮಾನ್ಯರಿಗೆ ಜ್ಯೋತಿಷವೆನ್ನುವುದು ಕೈಗೆಟುಕದ ನಕ್ಷತ್ರವೇನೂ ಅಲ್ಲ. ಒಂದೊಂದು ಗ್ರಹಕ್ಕೂ ಒಂದೊಂದು ಜಪವಿದ್ದು ಯಾರು ಬೇಕಾದರೂ ಅವುಗಳನ್ನು ಜಪಿಸಬಹುದಾಗಿದೆ. ದೊಡ್ಡ-ದೊಡ್ಡ ಮಂತ್ರಗಳನ್ನು ಹೇಳಿಕೊಳ್ಳುವ ಅವಶ್ಯಕತೆಯೂ ಇಲ್ಲ. ಮುಂದಿನ ಲೇಖನಗಳಲ್ಲಿ ಯಾವ ಗ್ರಹ ದೋಷಕ್ಕೆ ಯಾವ ಜಪ ಮಾಡಬೇಕು, ಎಷ್ಟು ಸಾವಿರ ಜಪ ಮಾಡಬೇಕು, ಎಷ್ಟು ದಿನಗಳ ಕಾಲ ಜಪ ಮಾಡಬೇಕು ಎಂಬ ವಿವರಗಳನ್ನು ನೀಡುತ್ತೇವೆ.
ಜ್ಯೋತಿಷಿಗಳು ಕೆಲವೊಮ್ಮೆ ಜಾತಕದಲ್ಲಿರಬಹುದಾದ ಗಂಡಾಂತರಗಳನ್ನು ಸೂಚ್ಯವಾಗಿ ಹೇಳದೇ “ನಿಮಗೆ ಇಂತಹ ವಯಸ್ಸಿನಲ್ಲಿ ಮರಣವಿದೆ ಎಂದೋ ಅಥವಾ ಆತಂಕವಿದೆಯೆಂದೋ ಹೇಳಿ ಜನರನ್ನು ಭಯದಿಂದ ಜೀವನ ಮಾಡುವಂತೆ ಮಾಡುತ್ತಾರೆ. ಇದಕ್ಕಾಗಿ ಮೃತ್ಯುಂಜಯ ಜಪ/ಹೋಮ ಮಾಡಬೇಕೆಂದು ಹೇಳುತ್ತಾರೆ. ಇದು ಬಹಳ ಖರ್ಚಿನ ವಿಷಯವಾಗಿದ್ದು ಇಂಥವಕ್ಕೆ ಹೆದರಬಾರದು. ನಮಗೆಲ್ಲಾ ಗೊತ್ತಿರುವಂತೆ ಮಾರ್ಕಂಡೇಯನು ತಾನು ಅಲ್ಪಾಯುವೆಂದು ತಿಳಿದಾಗ ಹೆದರೆದೆ ಪಂಚಾಕ್ಷರಿ ಮಂತ್ರದಿಂದ ಶಿವನನ್ನು ಒಲಿಸಿಕೊಂಡು ಚಿರಂಜೀವಿಯಾದ. ಓಂ ನಮ: ಶಿವಾಯ ಎಂಬ ಮಂತ್ರವನ್ನು ಕ್ರಮಬದ್ಧವಾಗಿ ಜಪಿಸಿದರೆ ಎಂತಹ ಆಪತ್ತಿಗೂ ಅದು ರಕ್ಷಾಕವಚದಂತೆ ಕೆಲಸ ಮಾಡುತ್ತದೆ.
ಕೆಲವೊಮ್ಮೆ, ದೋಷಪೂರಿತ ಗ್ರಹದ ದಶಾಕಾಲದಲ್ಲಿ ಆ ಗ್ರಹಕ್ಕೆ ಮಾತ್ರ ಶಾಂತಿ ಮಾಡಬೇಕಾಗುತ್ತದೆ. ಶನಿಗ್ರಹದ ವಿಷಯದಲ್ಲಿ ಹೆಚ್ಚಿನ ಭಯ ಹುಟ್ಟಿಸಿದ್ದು ಸೂರ್ಯನ ನಂತರ ರಾಜಯೋಗವನ್ನು ಹಾಗೂ ಸಕಲೈಶ್ವರ್ಯಗಳನ್ನು ಕೊಡುವ ಗ್ರಹ ಶನಿ. ಶುಕ್ರನಷ್ಟೇ ಸಂಪತ್ತನ್ನು ಹಾಗೂ ಸಮೃದ್ಧಿಯನ್ನೂ ಕೊಡುವ ಗ್ರಹ ಶನಿ. ಆದ್ದರಿಂದ, ಶನಿ ಗ್ರಹದ ಬಗ್ಗೆ ಅನವಶ್ಯಕವಾಗಿ ಭಯ ಪಡಬಾರದು. ಶನಿದೋಷವಿದ್ದರೆ, ಶನಿಗೆ ಸಂಬಂಧಿಸಿದ ಸರಳವಾದ ಅನೇಕ ಉಪಾಯಗಳನ್ನು ಮಾಡಬಹುದು. ಇವೆಲ್ಲಾ, ನಿಮಗೆ ಸುಲಭ ಜ್ಯೋತಿಷ ಕ್ರಮದಲ್ಲಿ ಮಾತ್ರ ಸಿಗುತ್ತದೆ. ಮುಂದಿನ, ಲೇಖನದಲ್ಲಿ ಯಾವ-ಯಾವ ಗ್ರಹಗಳು ಎಲ್ಲಿದ್ದರೆ ದೋಷವುಂಟಾಗುತ್ತದೆ, ಶುಭಾಶುಭ ದಶೆಗಳು ಮತ್ತು ಅವುಗಳಿಗೆ ಪರಿಹಾರ ಮತ್ತು ಗಂಡಾಂತರ ಶಾಂತಿಯನ್ನು ಹೇಗೆ ಮಾಡಿಕೊಳ್ಳಬೇಕೆಂದು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.
(ಈ ಲೇಖನದಲ್ಲಿ ಪ್ರಕಟವಾಗಿರುವ ಮಾಹಿತಿ ಲೇಖಕರ ವೈಯಕ್ತಿಕ ದೃಷ್ಟಿಕೋನವನ್ನು ಪ್ರತಿಫಲಿಸುತ್ತದೆ)
Astrology can serve as guiding light to people who are in trouble

ಇದನ್ನೂ ಓದಿ: ಕನ್ನಡಿಗರ ನಾಡಹಬ್ಬ ದಸರಾಗೆ ದಿನಗಣನೆ: ನವರಾತ್ರಿಯಲ್ಲಿ ದೇವಿ ಆರಾಧನೆ ಶ್ರೇಯಸ್ಕರ, ಇಲ್ಲಿದೆ ವಿಧಿವಿಧಾನದ ಮಾಹಿತಿ
ಇದನ್ನೂ ಓದಿ: Viral Video: ಈ ಯುವತಿ ವಿಶ್ವದ ಅತಿ ಎತ್ತರದ ಮಹಿಳೆ, ಇದು ಗಿನ್ನಿಸ್ ರೆಕಾರ್ಡ್
Discussion about this post