ಚಿಕ್ಕಮಗಳೂರು : ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲ್ಲಿ ಒಟ್ಟು ೫೦ ಡೆಂಗ್ಯೂ ಹಾಗೂ ೪ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು ರೋಗದ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಜಿಲ್ಲಾ ರೋಗವಾಹಕ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ. ಹರೀಶ್ಬಾಬು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರೋಗವಾಹಕ ಆಶ್ರಿತ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯ, ಮೆದುಳುಜ್ವರ ರೋಗದ ನಿಯಂತ್ರಣ ಕುರಿತು ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಸಂಬಂಧ ಸಾರ್ವಜನಿಕರಿಗೆ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಲಾಗಿದೆ. ಯಾವುದೇ ವ್ಯಕ್ತಿಯಲ್ಲಿ ತೀವ್ರ ಜ್ವರ, ವಿಪರೀತ ತಲೆನೋವು, ಮಾಂಸಖಂಡ, ಕೀಲುಗಳಲ್ಲಿ ವಿಪರೀತ ನೋವಿನ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ತೆರಳಿ ವೈದ್ಯರಿಂದ ರಕ್ತಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಡೆಂಗ್ಯೂ ಜ್ವರ ವೈರಸ್ನಿಂದ ಉಂಟಾಗುವ ಖಾಯಿಲೆ. ಇದು ಸೋಂಕು ಹೊಂದಿರುವ ಈಡಿಸ್ ಇಸಿಸ್ಟೇ ಎಂಬ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚ ನೀರಿನಲ್ಲಿ ಸಂತಾನಭಿವೃದ್ಧಿ ಮಾಡುತ್ತವೆ. ಈ ರೋಗಕ್ಕೆ ನಿರ್ದಿಷ್ಟವಾದ ಔಷಧಿ ಅಥವಾ ಲಸಿಕೆ ಇರುವುದಿಲ್ಲ ರೋಗದ ಲಕ್ಷಣಗಳಿಗನುಗುಣವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಮಲೇರಿಯಾ ಖಾಯಿಲೆಗೆ ಸಂಬಂಧಿಸಿದಂತೆ ೧,೭೮,೧೯೫ ಜನರನ್ನು ರಕ್ತಪರೀಕ್ಷೆಗೆ ಒಳಪಡಿಸಲಾಗಿದ್ದು ೪ ಪ್ರಕರಣಗಳಲ್ಲಿ ಮಲೇರಿಯಾ ಸೋಂಕು ದೃಢಪಟ್ಟಿದೆ. ಇನ್ನೂ ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಅಕ್ಟೋಬರ್ ೩೦ ರ ಒಳಗೆ ಡೆಂಗ್ಯೂ ೫೦, ಚಿಕನ್ಗುನ್ಯ ೧೧, ಮೆದುಳು ಜ್ವರಕ್ಕೆ ಸಂಬಂಧಿಸಿದಂತೆ ೧ ಪ್ರಕರಣ ದಾಖಲಾಗಿದೆ. ಮಲೇರಿಯಾಗೆ ಸಂಬಂಧಿಸಿದಂತೆ ಕಡೂರು ತಾಲ್ಲೂಕಿನಲ್ಲಿ ೩, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೧ ಪ್ರಕರಣ, ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಸೊಳ್ಳೆಗಳ ನಿಯಂತ್ರಣ ಮಾಡುವ ಮೂಲಕ ರೋಗವನ್ನು ಹತೋಟಿಗೆ ತರಬಹುದಾಗಿದ. ಮುಖ್ಯವಾಗಿ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರೆಲ್, ಮುಂತಾದ ಕಡೆಗಳಲ್ಲಿ ನೀರನ್ನು ಶೇಖರಣೆ ಮಾಡುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ರೋಗ ನಿಯಂತ್ರಣ ಹಾಗೂ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಜತೆಗೆ ಸಹಭಾಗಿತ್ವ ಅಗತ್ಯ ಎಂದರು.
ಹೆಚ್ಚು ಕಾಲ ಸಂಗ್ರಹವಾಗುವ ಎಲ್ಲಾ ನೀರಿನ ತೊಟ್ಟಿಗಳನ್ನು ಕನಿಷ್ಟ ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು, ಸೊಳ್ಳೆಗಳು ನೀರಿನ ತೊಟ್ಟಿಗಳಿಗೆ ನುಸುಳದಂತೆ ಸರಿಯಾಗಿ ಮುಚ್ಚಳದಿಂದ ಮುಚ್ಚಬೇಕು, ಘನ ತ್ಯಾಜ್ಯ ವಸ್ತುಗಳಲ್ಲಿ ಮನೆ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು, ಸೊಳ್ಳೆ ನಿರೋಧಕ, ಸೊಳ್ಳೆ ಪರದೆಯನ್ನು ಬಳಸುವಂತೆ ಸಲಹೆ ನೀಡಿದರು.
ಗ್ರಾಮೀಣ ಭಾಗ ಒಳಗೊಂಡಂತೆ ಜಿಲ್ಲೆಯಾದ್ಯಂತ ೨೭ ಲಕ್ಷಕ್ಕೂ ಹೆಚ್ಚು ಮನೆ-ಮನೆ ಭೇಟಿ ಮಾಡಿ ಲಾರ್ವ ಸಮೀಕ್ಷೆ ನಡೆಸಲಾಗಿದೆ. ಸೊಳ್ಳೆಗಳಿಂದ ಹರಡುವ ರೋಗದ ಬಗ್ಗೆ ಆಶಾ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸಲಾಗಿದೆ, ಆನೆಕಾಲು ರೋಗಕ್ಕೆ ಸಂಬಂಧಿಸಿದಂತೆ ವಲಸೆ ಕಾರ್ಮಿಕರಿಗೆ ತಪಾಸಣೆ ನಡೆಸಲಾಗಿದೆ. ಎಂದು ತಿಳಿಸಿದರು.
ಪ್ರತಿ ವರ್ಷವೂ ಫೆ.೨೨ ರಂದು ವಿಶ್ವ ಮೆದುಳು ಸೋಂಕು ದಿನ, ಏಪ್ರಿಲ್ ೨೫ ಕ್ಕೆ ವಿಶ್ವ ಮಲೇರಿಯಾ ದಿನ, ಮೇ ತಿಂಗಳಲ್ಲಿ ವಿಶ್ವಡೆಂಗ್ಯೂ ದಿನ ಆಚರಣೆ ಮೂಲಕ ಜನರಲ್ಲಿ ರೋಗದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹಿರಿಯ ಮೇಲ್ವಿಚಾರಕ ದೇವರಾಜ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ, ಪ್ರದೀಪ್, ಯೋಗೇಶ್, ಶ್ರೀಧರ್, ಸೇರಿದಂತೆ ಮತ್ತಿತರರು ಇದ್ದರು.
Discussion about this post