ಕಾರವಾರ: ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿಗೆ ‘ಚಿನ್ನದ ಬೆಲೆ’ ಬರುವ ಸಾಧ್ಯತೆಯನ್ನು ಮಾರುಕಟ್ಟೆ ತಜ್ಞರು ವ್ಯಕ್ತಪಡಿಸಿದ್ದು, ಇದು ಕಾಳು ಮೆಣಸು ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿಸಿದೆ.
ಶಿರಸಿ ಟಿಎಸ್ಎಸ್ನಲ್ಲಿ ಪ್ರಸ್ತುತ ಕ್ವಿಂಟಾಲ್ ಕಾಳು ಮೆಣಸಿಗೆ ಕನಿಷ್ಠ 41,299, ಗರಿಷ್ಠ 50,899 ರೂ. ಇದ್ದು, ಸರಾಸರಿ 48,208 ರೂ.ಗೆ ಮಾರಾಟವಾಗುತ್ತಿದೆ. ಕಳೆದ ಒಂದು ವರ್ಷದ ಹಿಂದಿನವರೆಗೂ ದರದಲ್ಲಿ ಇಳಿಕೆಯಾಗುತ್ತಿತ್ತು. ವರ್ಷದ ಹಿಂದೆ 38 ಸಾವಿರದಷ್ಟು ಗರಿಷ್ಠ ದರವಿತ್ತು. ಇದೀಗ ಸುಮಾರು 10 ಸಾವಿರದಷ್ಟು ದರ ವ್ಯತ್ಯಾಸವಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವರ್ಷಕ್ಕೆ ಒಂದು ಬೆಳೆಯಾಗುವ ಕಾಳುಮೆಣಸನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಹೊನ್ನಾವರ ಭಾಗದಲ್ಲಿ ಅತಿಹೆಚ್ಚು ಬೆಳೆಯಲಾಗುತ್ತದೆ. ಪ್ರಧಾನ ಬೆಳೆಯಾದ ಅಡಿಕೆಯೊಂದಿಗೆ ಇಲ್ಲಿನ ರೈತರು ಕಾಳುಮೆಣಸನ್ನು ಉಪಬೆಳೆಯಾಗಿ ಬೆಳೆಯುತ್ತಾರೆ. ‘ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 4,200 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತದೆ. ಹೆಚ್ಚಾಗಿ ಶಿರಸಿಯಲ್ಲಿ 2,200 ಹೆಕ್ಟೇರ್, ಸಿದ್ದಾಪುರದಲ್ಲಿ 1,300 ಹೆಕ್ಟೇರ್, ಯಲ್ಲಾಪುರದಲ್ಲಿ 380, ಹೊನ್ನಾವರ ಹಾಗೂ ಕುಮಟಾದಲ್ಲಿ ತಲಾ 130- 150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಪೈಕಿ ಮಾರುಕಟ್ಟೆಗೆ 2,300- 2,500 ಟನ್ ನಷ್ಟು ಬೆಳೆ ಪ್ರತಿವರ್ಷ ಬರುತ್ತದೆ’ ಎಂದು ವಿವರಿಸುತ್ತಾರೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸತೀಶ್.
ಸಾಮಾನ್ಯವಾಗಿ ಕಾಳು ಮೆಣಸು ಬೆಳೆಯುವವರು ಬೆಳೆಯನ್ನು ವರ್ಷಗಳ ಕಾಲ ದಾಸ್ತಾನು ಮಾಡಿಕಟ್ಟುಕೊಂಡು, ಬೆಲೆ ಬಂದ ಬಳಿಕ ಮಾರುಕಟ್ಟೆಗೆ ತರುತ್ತಾರೆ. ಕೋವಿಡ್ ನಿಂದಾಗಿ ಮಾರುಕಟ್ಟೆಗಳೆಲ್ಲವೂ ಮುಗ್ಗರಿಸಿತ್ತು. ಈ ಸಂದರ್ಭದಲ್ಲಿ ಕಾಳು ಮೆಣಸನ್ನು ಹೆಚ್ಚಾಗಿ ಬಳಸುತ್ತಿದ್ದ ಹೋಟೆಲ್ ಉದ್ಯಮಗಳು ಮುಚ್ಚಿದ್ದವು. ಬೇರೆ ಕಡೆಗೆ ಸಾಗಣೆಗೂ ಸಮಸ್ಯೆ ಉಂಟಾಗಿದ್ದ ಕಾರಣ ದರದಲ್ಲಿ ಇಳಿಕೆಯಾಗಿತ್ತು. ಆದರೆ ಈಗ ಎಲ್ಲಾ ಉದ್ಯಮಗಳು ಕಾರ್ಯನಿರ್ವಹಿಸುತ್ತಿರುವ ಕಾರಣ ಕಾಳುಮೆಣಸಿಗೆ ಬೇಡಿಕೆ ಬಂದಿದೆ. ಅದರಲ್ಲೂ ಈ ಹಿಂದೆ ವಿಯೆಟ್ನಾಂ ಹಾಗೂ ಶ್ರೀಲಂಕಾದಿಂದ ಕಳ್ಳದಾರಿಯಲ್ಲಿ ಬರುತ್ತಿದ್ದ ಕಡಿಮೆ ಗುಣಮಟ್ಟದ, ಕಡಿಮೆ ದರದ ಕಾಳು ಮೆಣಸಿನಿಂದಾಗಿ ಸ್ಥಳೀಯ ಬೆಳೆಗಾರರು ಬೆಲೆ ಬರದೆ ನಷ್ಟ ಅನುಭವಿಸುತ್ತಿದ್ದರು. ಆದರೆ ಈಗ ಹೊರದೇಶಗಳಿಂದ ಆಮದಾಗುವ ಕಾಳು ಮೆಣಸಿನ ದರ ಅಧಿಕವಾಗಿದ್ದು, ಇದರ ಖರೀದಿ ಕೂಡ ಕುಸಿದಿದೆ. ಹೀಗಾಗಿ ಸ್ಥಳೀಯ ಕಾಳು ಮೆಣಸಿಗೆ ಅತ್ಯಧಿಕ ಬೇಡಿಕೆ ಶುರುವಾಗಿದೆ. ಆದರೆ ದರ ಕ್ವಿಂಟಲ್ ಗೆ 50 ಸಾವಿರದ ಮೇಲೆ ಏರುವುದು ಕಷ್ಟ ಎನ್ನುತ್ತಾರೆ ವ್ಯಾಪಾರಿಗಳು.
‘ವಿಯೆಟ್ನಾಂ ಕಾಳುಮೆಣಸು ಆಮದು ದರ ಈಗ ಹೆಚ್ಚಾಗಿದೆ. ಜೊತೆಗೆ, ಅಲ್ಲಿ ಲಕ್ಷಗಟ್ಟಲೆ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಬೆಳೆ ಈಗ ಸಾವಿರ ಹೆಕ್ಟೇರ್ ಗೆ ಇಳಿದಿದ್ದು, ಬೆಳೆಯೂ ಕಡಿಮೆ ಇದೆ. ಹೀಗಾಗಿ ಸ್ಥಳೀಯ ಕಾಳು ಮೆಣಸಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಎಂಟು ವರ್ಷಗಳ ಹಿಂದೆ ಕ್ವಿಂಟಲ್ ಗೆ 70 ಸಾವಿರದಷ್ಟು ದರ ಬಂದಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಷ್ಟೆಲ್ಲ ದರ ಬರುತ್ತದೆಂದು ಅನಿಸುವುದಿಲ್ಲ’ ಎನ್ನುತ್ತಾರೆ ಕಾಳು ಮೆಣಸು ವಕಾರಿ ಹೊಂದಿರುವ ಶಿರಸಿಯ ಎಲ್.ಆರ್.ಹೆಗಡೆ.
ವರದಿ: ದೇವರಾಜ್ ನಾಯ್ಕ್, ಕಾರವಾರ
ಇದನ್ನೂ ಓದಿ: 2024ರೊಳಗೆ ಉತ್ತರ ಕನ್ನಡದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡುವೆ: ಸಂಸದ ಅನಂತಕುಮಾರ್ ಹೆಗಡೆ
Discussion about this post