ಬೆಂಗಳೂರು: ಕೋವಿಡ್-19 ಸೋಂಕು ಹೆಚ್ಚುತ್ತಿರುವುದು ಮತ್ತು ರೂಪಾಂತರ ತಳಿಯ ಪ್ರಕರಣಗಳು ವಿದೇಶಗಳಲ್ಲಿ ಕಂಡು ಬರುತ್ತಿರುವುದರಿಂದ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ಗಳನ್ನು ಕೊಡಲು ಕೇಂದ್ರ ಸರಕಾರದ ಅನುಮತಿ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಇಡೀ ದೇಶಕ್ಕೆ ಮಾಡಬೇಕಾಗುತ್ತದೆ. ಕೇಂದ್ರದ ತೀರ್ಮಾನಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದ ತಕ್ಷಣ ಪಾಲನೆ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು.?
ಕೋವಿಡ್ ಎರಡನೇ ನಿಯಂತ್ರಣಕ್ಕೆ ಬಂದಿದೆ ಎನ್ನುವ ಸಂದರ್ಭದಲ್ಲಿ ವಿದೇಶದಲ್ಲಿ ಹೊಸ ರೂಪಾಂತರ ಕಾಣಿಸಿಕೊಂಡಿದೆ. ದಕ್ಷಿಣ ಆಫ್ರಿಕಾ, ಹಾಂಗ್ಕಾಂಗ್ ಮತ್ತು ಬೋಟ್ಸ್ವಾನಾದಲ್ಲಿ ಹೆಚ್ಚಿನ ರೂಪಾತರ ತಳಿ ಕಂಡುಬಂದಿದೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಈ ರಾಷ್ಟ್ರಗಳಿಗೆ ನಿಷೇಧ ಹೇರಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ದೇಶಗಳ ಬಗ್ಗೆ ಎಚ್ಚರಿಕೆ ಕೊಟ್ಟಿದೆ.
ಈ ಹೊಸ ರೂಪಾಂತರ ತಳಿ ಒಮಿಕ್ರಾನ್ ಯಾವ ರೀತಿ ಪರಿಣಾಮ ಬೀರುತ್ತದೆಯೆಂದು ಸಂಪೂರ್ಣ ವಿವರಗಳು ಇಲ್ಲ. ಆದರೆ ಬಹಳ ವೇಗದಲ್ಲಿ ಹರಡುತ್ತದೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಭಾರತ ಕೂಡ ಬಹಳ ಎಚ್ಚರಿಕೆ ವಹಿಸುತ್ತಿದೆ. ಪ್ರಧಾನಿಯವರು ನಿನ್ನೆ ಸಭೆ ನಡೆಸಿ, ಹಲವಾರು ನಿರ್ದೇಶನಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಗಮನಿಸುತ್ತೇವೆ.
ನಮ್ಮ ರಾಜ್ಯದಲ್ಲಿ ಹೊರ ರೂಪಾಂತರ ತಳಿ ಎಲ್ಲಿಯೂ ಪತ್ತೆಯಾಗಿಲ್ಲ. ಆದರೆ ಧಾರವಾಡ, ಮೈಸೂರು ಮತ್ತು ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ಗಳಲ್ಲಿ ಕ್ಲಸ್ಟರ್ ರೂಪದಲ್ಲಿ ಕೋವಿಡ್ ೧೯ ಸೋಂಕು ವ್ಯಾಪಕವಾಗಿ ಕಂಡು ಬರುತ್ತಿದೆ. ಈಗಾಗಲೇ ಆ ಹಾಸ್ಟೆಲ್ಗಳನ್ನು ಕಂಟೈನ್ಮೆಂಟ್ ಝೋನ್ ಮಾಡಿ, ಪ್ರವೇಶ ನಿಷೇಧಿಸಲಾಗಿದೆ. ಎಲ್ಲರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ. ಎಸ್ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಅಲ್ಲಿನ ವೈದ್ಯರು, ದಾದಿಯರು, ರೋಗಿಗಳನ್ನು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ.
ಹೊರರೋಗಿಗಳ ವಿಭಾಗ ಮುಚ್ಚಲಾಗಿದೆ. ಮೈಸೂರು ಮತ್ತು ಬೆಂಗಳೂರಿನಲ್ಲೂ ಅದೇ ರೀತಿ ಕಂಟೈನ್ಮೆಂಟ್ ಝೋನ್ ಮಾಡಿ ತೀವ್ರ ನಿಗಾದಲ್ಲಿರಿಸಲಾಗಿದೆ. ಅಲ್ಲಿನ ಬೆಳವಣಿಗೆಯನ್ನು ಗಮನಿಸಲಾಗುತ್ತಿದೆ. ಪರೀಕ್ಷೆ ಮಾತ್ರವಲ್ಲದೇ ಪಾಸಿಟಿವ್ ಬಂದವರಿಗೆ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ.
ಕೇರಳದಿಂದ ಬಂದವರಿಂದಲೇ ಸೋಂಕು ಹೆಚ್ಚಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಎಲ್ಲ ಕ್ಲಸ್ಟರ್ಗಳಲ್ಲಿ ಕೇರಳದಿಂದ ಬಂದಂತಹ ಪ್ಯಾರಾ ಮೆಡಿಕಲ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ದ.ಕ., ಕೊಡಗು, ಚಾಮರಾಜ ನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕೇರಳ ಗಡಿಯಲ್ಲಿ ಚೆಕ್ಪೋಸ್ಟ್ಗಳನ್ನು ರಚಿಸಿ, ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆ ವರದಿ ನೆಗೆಟಿವ್ ಇದ್ದರೆ ಮತ್ತು ಕೋವಿಡ್ ಲಸಿಕೆ ಎರಡೂ ಡೋಸ್ಗಳನ್ನು ಪಡೆದಿದ್ದರೆ ಮಾತ್ರ ಪ್ರವೇಶಕ್ಕೆ ಅನುಮತಿಸಬೇಕು. ಕೇರಳದಿಂದ ಕಳೆದ 14 ದಿನಗಳಲ್ಲಿ ಬಂದವರಿಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಬೇಕು,
ಹಾಸ್ಟೆಲ್ಗಳಲ್ಲಿ ಇರುವವರಿಗೆ 7ನೇ ದಿನ ಇನ್ನೊಂದು ಪರೀಕ್ಷೆ ಮಾಡಬೇಕೆಂದು ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಕೋವಿಡ್ ಟೆಸ್ಟ್ಗಳನ್ನು ಹೆಚ್ಚಿಸಲು ಆದೇಶ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಹೊಸ ತಳಿಗಳ ಸಂಪರ್ಕಕ್ಕೆ ಬಂದಿರುವ ಎಲ್ಲ ದೇಶಗಳಿಂದ ಕರ್ನಾಟಕಕ್ಕೆ ಬರುವ ಶೇ. 100ರಷ್ಟು ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಬೇಕು. ನೆಗೆಟಿವ್ ಬಂದರೆ ಮಾತ್ರ ಅವರನ್ನು ವಿಮಾನ ನಿಲ್ದಾಣದಿಂದ ಹೊರ ಬರಲು ಬಿಡಬೇಕು. ಇಲ್ಲದಿದ್ದರೆ ಅವರನ್ನು ಇನ್ಸ್ಟಿಟ್ಯೂಟ್ ಐಸೋಲೋಶನ್ಗೆ ಕಳುಹಿಸಬೇಕೆಂದು ನಿರ್ದೇಶನ ನೀಡಲಾಗಿದೆ.
ಮಾಲ್ಗಳ ಸಹಿತ ಖಾಸಗಿ, ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಲಸಿಕೆ ಹಾಕಿಸುವ ವ್ಯವಸ್ಥೆಯನ್ನು ಕೂಡ ಮಾಲ್ ಮತ್ತು ಸರಕಾರಿ ಕಚೇರಿಗಳಲ್ಲಿ ಮಾಡಬೇಕೆನ್ನುವ ಸೂಚಿಸಲಾಗಿದೆ.
ವಿಧಾನ ಪರಿಷತ್ ಚುನಾವಣೆ ನಡೆಯುತ್ತಿರುವುದರಿಂದ ಸಭೆಗಳ ಸಹಿತ ಪ್ರಚಾರದ ವೇಳೆ ಕೋವಿಡ್ ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಚುನಾವಣೆಗೆ ಸಾರ್ವಜನಿಕ ಸಭೆಗಳು ನಡೆಯುವುದಿಲ್ಲ, ಸೇರುವವರ ಸಂಖ್ಯೆಯೂ ಕಡಿಮೆ ಇರುತ್ತದೆ. ಆದರೆ ಸರಕಾರದ ಸೂಚನೆ ಪಾಲನೆ ಮಾಡಬೇಕು ಎಂದು ಸೂಚನೆ ಕೊಟ್ಟಿದೆ.
ರಾಜ್ಯದಲ್ಲಿ ಕೋವಿಡ್ ಲಸಿಕೆ ಮೊದಲ ಡೋಸ್ ಶೇ. 91ರಷ್ಟಾಗಿದೆ. ಎರಡನೇ ಡೋಸ್ ಬಗ್ಗೆ ಹೆಚ್ಚಿನ ಗಮನಹರಿಸಿ, ಡಿಸೆಂಬರ್ ಅಂತ್ಯಕ್ಕೆ ಕನಿಷ್ಠ ಶೇ. 70ರಷ್ಟು ಲಸಿಕೆ ಹಾಕಿಸಲು ಗುರಿ ಇರಿಸಿಕೊಳ್ಳಲಾಗಿದೆ. ಪ್ರಸಕ್ತ ಎರಡನೇ ಡೋಸ್ ಲಸಿಕೆ ಶೇ. 58ರಷ್ಟು ಹಾಕಲಾಗಿದೆ. ರಾಜ್ಯದಲ್ಲಿ ಬೇಕಷ್ಟು ಕೋವಿಡ್ ಲಸಿಕೆ ಇದೆ.
Booster dose
Discussion about this post