ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿಯೆಂದು ಹೇಳಲಾದ ವ್ಯಕ್ತಿ ಮತ್ತು ನೀರಾವರಿ ಇಲಾಖೆಯ ಕೆಲ ಗುತ್ತಿಗೆದಾರರ ಮೇಲೆ ಇತ್ತೀಚಿಗೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಗಳ ನಂತರ ಯಡಿಯೂರಪ್ಪ ಮತ್ತು ಸಿದ್ಧರಾಮಯ್ಯ ರಹಸ್ಯವಾಗಿ ಭೇಟಿಯಾಗಿ ಮಾತಕತೆ ನಡೆಸಿದ್ದರೆಂದು ನೆನ್ನೆ (ಅಕ್ಟೋಬರ್ 12) ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದರು. ಯಡಿಯೂರಪ್ಪನವರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಕೇಂದ್ರ ಬಿಜೆಪಿ ನಾಯಕತ್ವದ ಉದ್ದೇಶವಾಗಿತ್ತು ಎಂದೂ ಅವರು ಅಭಿಪ್ರಾಯಪಟ್ಟಿದ್ದರು.
ಇದಕ್ಕೆ ಉತ್ತರಿಸಿರುವ ಉಭಯ ನಾಯಕರು ರಹಸ್ಯಭೇಟಿಯ ವಿಷಯವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕ ಸಿದ್ಧರಾಮಯ್ಯ “ಇಂತಹದೊಂದು ಭೇಟಿ ನಡೆದಿರುವುದನ್ನು ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಕುಮಾರಸ್ವಾಮಿಯವರಿಗೆ ಸವಾಲು ಹಾಕಿದ್ದಾರೆ.” ನಾನು ಯಡಿಯೂರಪ್ಪನವರನ್ನು ಅವರ ಜನ್ಮದಿನದಂದು ಅಭಿನಂದಿಸಲು ಹೋಗಿದ್ದುದು ನಿಜವಾದರೂ ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ಭೇಟಿ ನಡೆಯಲಿಲ್ಲ ಎಂದ ಸಿದ್ಧರಾಮಯ್ಯ ಇಲ್ಲಿಯವರೆಗೂ ಎಂದೂ ನಾನು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ ಎಂದರು. ಕೋರೋನಾ ಸೋಂಕು ತಗಲಿ ನಾವಿಬ್ಬರೂ ಒಂದೇ ಆಸ್ಪತ್ರೆಯಲ್ಲಿ ಏಕ ಕಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ನಾವಿಬ್ಬರೂ ಪರಸ್ಪರ ಭೇಟಿಯಾಗಿಲ್ಲ ಎಂದು ಹೇಳಿದರು. ಕುಮಾರಸ್ವಾಮಿಯವರೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಪದೇ-ಪದೇ ಭೇಟಿ ಮಾಡುತ್ತಿದ್ದುದನ್ನು ಸ್ಮರಿಸಿದರು.
ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪನವರು “ರಹಸ್ಯಭೇಟಿ ಸತ್ಯಕ್ಕೆ ದೂರವಾದ ಸಂಗತಿ ಹಾಗೂ ಅರ್ಥವಿಲ್ಲದ ಆರೋಪ ಎಂದು ತಿಳಿಸಿದ್ದಾರೆ.” ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿದ ಯಡಿಯೂರಪ್ಪನವರು ಕುಮಾರಸ್ವಾಮಿಯವರ ಹೆಸರು ಹೇಳದೇ ರಹಸ್ಯಭೇಟಿಯನ್ನು ನಿರಾಕರಿಸಿದ್ದಲ್ಲದೇ ನಾನು ನಂಬಿದ ತತ್ವ-ಆದರ್ಶಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು. ಬಿಜೆಪಿಯನ್ನು ಕರ್ನಾಟಕದಲ್ಲಿ ಮತ್ತೊಮ್ಮೆ ಬಹುಮತದಿಂದ ಅಧಿಕಾರಕ್ಕೆ ತರುವುದೇ ನನ್ನ ಏಕೈಕ ಗುರಿಯಾಗಿದೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.
Congress leader Siddharamaih and BJP leader Yediyurappa deny the allegation of secret meeting made by Kumaraswamy
ಇದನ್ನೂ ಓದಿ: Karnataka Politics: 2023 ನನ್ನ ಕೊನೆಯ ವಿಧಾನಸಭಾ ಚುನಾವಣೆ: ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ
ಇದನ್ನೂ ಓದಿ: NIMHANS Convocation: ನಿಮ್ಹಾನ್ಸ್ ಘಟಿಕೋತ್ಸವದಲ್ಲಿ ಕನ್ನಡಕ್ಕೆ 3ನೇ ಸ್ಥಾನ: ಕೆರಳಿದ ಹೆಚ್ ಡಿ ಕುಮಾರಸ್ವಾಮಿ
Discussion about this post