ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಮಲೆನಾಡು ಮತ್ತು ಬಯಲು ಸೀಮೆಗಳಲ್ಲಿ ಬೆಳೆದು ಕಟಾವಿಗೆ ಬಂದಿದ್ದ ಬೆಳೆಗಳು ಹಾನಿಗೊಳಗಾಗಿದೆಯಲ್ಲದೆ ಮನೆಗಳು ಕುಸಿದು ನೂರಾರು ಕೋಟಿ ರೂ.ಗಳ ನಷ್ಟ ಸಂಭವಿಸಿದ್ದು, ಸಮೀಕ್ಷೆಯ ಮೂಲಕ ನಷ್ಟವನ್ನು ಅಂದಾಜಿಸಿ ಬೆಳೆಗಾರರಿಗೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ನೇತೃತ್ವದಲ್ಲಿ ಮುಖಂಡರು ನಗರದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ರಮೇಶ್ ಅವರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯ ಜೊತೆಗೆ ಅಕಾಲಿಕ ಮಳೆಯಾಗಿದ್ದರಿಂದ ಮಲೆನಾಡಿನಲ್ಲಿ ಕಟಾವಿಗೆ ಬಂದಿದ್ದ ಕಾಫಿ, ಮೆಣಸು ಬೆಳೆಗಳು ದೊಡ್ಡ ಪ್ರಮಾಣದಲ್ಲಿ ಹಾನಿಗೊಂಡಿವೆ. ಜೊತೆಗೆ ಬತ್ತದ ಬೆಳೆ ತೆನೆಕಟ್ಟುವ ಮೊದಲೇ ನೆಲಕ್ಕೆ ಮಲಗಿದೆ. ತರಕಾರಿ ಬೆಳೆಗಳು ಹೇಳ ಹೆಸರಿಲ್ಲದಂತೆ ಮಳೆಯಿಂದ ಕರಗುತ್ತಿವೆ. ಬಯಲು ಸೀಮೆಯಲ್ಲಿ ಕಟಾವಿಗೆ ಬಂದಿದ್ದ ಈರುಳ್ಳಿ, ರಾಗಿ, ಜೋಳ ಪೂರ್ಣ ಹಾನಿಗೆ ಒಳಗಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: India win big: ಟಿ20 ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು
ಕಳೆದ ವರ್ಷ ಜಿಲ್ಲೆಯಲ್ಲಿ ಬಿದ್ದಿದ್ದ ಅಕಾಲಿಕ ಮಳೆಯಿಂದ ಕಾಫಿ, ಕಾಳು ಮೆಣಸು, ಬತ್ತ, ರಾಗಿ, ಈರುಳ್ಳಿ, ಜೋಳ ಸೇರಿದಂತೆ ಅನೇಕ ವಾಣಿಜ್ಯ ಬೆಳೆಗಳು ಹಾನಿಗೊಂಡು ೭೦೦ ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ಸಂಭವಿಸಿತ್ತು. ಜೊತೆಗೆ ಭೂ ಕುಸಿತ, ಕಾಲುವೆಗಳು ಕೊಚ್ಚಿ ಹೋಗಿ ಹಾನಿ, ಮನೆಗಳಿಗೆ ಹಾನಿ ಜೊತೆಗೆ ಪ್ರಾಣ ಹಾನಿಯೂ ಸಂಭವಿಸಿತ್ತು. ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲಾಗಿತ್ತೇ ವಿನಾ ಬೆಳೆಗಾರರಿಗೆ ಇಲ್ಲಿಯವರೆಗೆ ಯಾವುದೇ ಪರಿಹಾರಗಳು ದೊರಕದೆ ತೊಂದರೆಗೆ ಸಿಲುಕಿದ್ದಾರೆ. ಬೆಳೆಗಾರರಿಗೆ ಅನುಕೂಲವಾಗದಿರುವುದನ್ನು ಗಮನಿಸಿದಾಗ ಸಮೀಕ್ಷೆ ಕೇವಲ ಕಣ್ಣೊರೆಸುವ ತಂತ್ರವಾಗಿ ನಡೆದಿತ್ತೆಂಬ ಸಂಶಯ ಮೂಡಿದೆ ಎಂದು ಮುಖಂಡರು ಹೇಳಿದರು.
ಈ ಬಾರಿಯ ಅಕಾಲಿಕ ಮಳೆಯಿಂದ ಹಿಂದೆಂದಿಗಿಂತಲೂ ಹೆಚ್ಚಿನ ಬೆಳೆಗಳು ಹಾನಿಗೊಂಡಿವೆ. ಕಾಫಿ ಬೆಳೆ ಕಟಾವಿಗೆ ಬಂದಿದ್ದು, ಮಳೆ ಮತ್ತು ವಾತಾವರಣ ವೈಪರಿತ್ಯದಿಂದ ಹಣ್ಣುಗಳು ಕೆಳ ಉದುರುತ್ತಿವೆ. ಕ್ರಿಮಿನಾಶಕ ಸಿಂಪಡಿಸಲು ಸಾಧ್ಯವಾಗದ ಕಾರಣದಿಂದ ಎಲೆ ಚುಕ್ಕೆ ರೋಗದ ಭೀತಿಯು ಎದುರಾಗಿದೆ. ಗಿಡದಿಂದ ಉದುರಿರುವ ಕಾಫಿ ಹಣ್ಣು ಎರಕಲು ಕಾರ್ಮಿಕರ ಕೊರತೆ ಎದುರಾಗಿದೆ. ಕಳೆದೆಲ್ಲ ವರ್ಷಗಳಿಗಿಂತ ಈ ವರ್ಷ ಕಾಫಿ ಬೆಳೆಗಾರರು ದೊಡ್ಡ ಮಟ್ಟದ ನಷ್ಟಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: High Court: ಡಿಸೆಂಬರ್ 30ರೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ಪೂರ್ಣಗೊಳಿಸಲು ಹೈಕೋರ್ಟ್ ಆದೇಶ
ಕಾಳು ಮೆಣಸು ಬೆಳೆಯ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅಕಾಲಿಕ ಮಳೆ ನಿರಂತರ ಸುರಿದ ಪರಿಣಾಮ ಬಳ್ಳಿಗಳಲ್ಲಿ ಕಾಳು ಮೆಣಸು ಗೊನೆ ಕಟ್ಟಲು ಸಾಧ್ಯವಾಗದೆ ಫಸಲಿನ ಇಳುವರಿ ಕ್ಷೀಣಿಸಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಕಾಳು ಮೆಣಸನ್ನೆ ನಂಬಿದ್ದ ಬೆಳೆಗಾರರು ಸಂಪೂರ್ಣವಾಗಿ ನೆಲ ಕಚ್ಚಿದ್ದಾರೆ. ಜಿಲ್ಲೆಯ ಚಿಕ್ಕಮಗಳೂರು, ತರೀಕೆರೆ, ಅಜ್ಜಂಪುರ, ಕಡೂರು ತಾಲೂಕುಗಳಲ್ಲಿ ಕಟಾವಿಗೆ ಬಂದಿದ್ದ ಈರುಳ್ಳಿ ಮಳೆಯಿಂದ ಪೂರ್ಣ ಕೊಳೆತು ಬೆಳೆಗಾರರು ಕೈ ಸುಟ್ಟುಕೊಂಡಿದ್ದಾರೆ. ಕಟಾವು ಮಾಡಿ ಹೊಲಗಳಲ್ಲಿ ಹಾಕಲಾಗಿದ್ದ ಈರುಳ್ಳಿ ರಾಶಿ ಕರಗಿ ಹೋಗಿದೆ. ಅದರಿಂದ ಬೀಜ, ಗೊಬ್ಬರದ ಖರ್ಚು ಬೆಳೆಗಾರರಿಗೆ ಸಿಕ್ಕದಂತ ಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರು, ಕಡೂರು, ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ಹೆಚ್ಚಾಗಿ ಜೋಳ ಬೆಳೆದಿದ್ದು, ಇಳುವರಿ ಉತ್ತಮವಾಗಿತ್ತು. ಅಕಾಲಿಕ ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗದೆ ಗಿಡದಲ್ಲೇ ಜೋಳ ಮೊಳಕೆಯೊಡೆದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ರಾಗಿ ಬೆಳೆ ಪೂರ್ಣ ಮಲಗಿಕೊಂಡಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ತಲುಪಿದೆ.
ಒಂದು ಕಡೆ ಕೃಷಿ ಸಲಕರಣೆಗಳು, ಗೊಬ್ಬರ ಬೆಲೆಯಲ್ಲಿ ಹೆಚ್ಚಳ, ಕಾರ್ಮಿಕರ ಕೊರತೆ. ಇನ್ನೊಂದು ಕಡೆ ಅಕಾಲಿಕ ಮಳೆಯಿಂದ ಬೆಳೆ ಹಾನಿ. ಕಟಾವಿಗೆ ಬಂದ ಬೆಳೆ ಕೈಗೆ ಬಾರದ ಕಾರಣದಿಂದ ಜಿಲ್ಲೆಯಲ್ಲಿ ಬಹುತೇಕ ಬೆಳೆಗಾರರು ನಷ್ಟ ಅನುಭವಿಸಿದ್ದು, ವಿವಿಧ ಬ್ಯಾಂಕುಗಳಿಂದ ಪಡೆದಿರುವ ಬೆಳೆ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗದೆ ಆತಂಕಕ್ಕೆ ಒಳಗಾಗಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಜಿಲ್ಲಾ ಕೇಂದ್ರ ಸ್ಥಾನ ಸೇರಿದಂತೆ ಈಗಾಗಲೇ ಜಿಲ್ಲೆಯಾದ್ಯಂತ ನೂರಾರು ಮನೆಗಳು ಕುಸಿದು ಜನರು ನಿರಾಶ್ರಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗೆ ವಿವರಿಸಿದರು.
ನಮ್ಮ ಕ್ಷೇತ್ರದ ಸಂಸದರು ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದಾರೆ. ಬಿಜೆಪಿ ಶಾಸಕ ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಜಿಲ್ಲೆಯಲ್ಲಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಬಿಜೆಪಿಯವರೇ ಆಗಿದ್ದಾರೆ. ಅಫೆಕ್ಸ್ ಬ್ಯಾಂಕ್ ಅಧ್ಯಕ್ಷರು ನಮ್ಮ ಜಿಲ್ಲೆಯ ಶಾಸಕರೇ ಆಗಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಆದರೆ, ಅವರುಗಳಿಂದ ಮತ್ತು ಸರ್ಕಾರದಿಂದ ಬೆಳೆ ಮತ್ತು ಆಸ್ತಿ ಕಳೆದುಕೊಂಡವರಿಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪತ್ರಕರ್ತರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಬೆಳೆಗಾರರು ಮತ್ತು ಜನರು ತೀವ್ರ ಸಂಕಷ್ಟ ಎದುರಿಸುತ್ತಿರುವುದರಿಂದ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ವಸ್ತುಸ್ಥಿತಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಿಳಿಸುವ ಮೂಲಕ ಜನರಿಗೆ ಮತ್ತು ಬೆಳೆಗಾರರಿಗೆ ಗರಿಷ್ಠ ಪ್ರಮಾಣದ ಪರಿಹಾರವನ್ನು ನೀಡಬೇಕು. ಜೊತೆಗೆ ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣದಿಂದ ರೈತರ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ನಿಯೋಗದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಲ್ಲಾ ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ, ರೂಬೆನ್ ಮೊಸೆಸ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಎಂ.ಸಂದೇಶ್, ಹಿರೇಮಗಳೂರು ರಾಮಚಂದ್ರ, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ನಾಯ್ಡು, ಸಾಮಾಜಿಕ ಜಾಲತಾಣ ಅಧ್ಯಕ್ಷ ವಿನಾಯಕ್, ಕಿಸಾನ್ ಸೆಲ್ ಜಿಲ್ಲಾ ಸಂಚಾಲಕ ರಸೂಲ್ ಖಾನ್, ಅಲ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ನಾಯಕರಾದ ನಾಗಭೂಷಣ್, ಯೋಗೀಶ್, ಸರೋಜಾ ಬಸವರಾಜ್, ಶೃದೇಶ್ ಇತತರು ಹಾಜರಿದ್ದರು.
District Congress demands maximum compensation for crop, property damaged due to unseasonal rains in the district
Discussion about this post