ಚಿಕ್ಕಮಗಳೂರು: ಡಿಸೆಂಬರ್ ೧೯ ರ ದತ್ತಜಯಂತಿ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಸುಮಾರು 12 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ ಎಂದು ವಿಶ್ವಹಿಂದು ಪರಿಷತ್ ಭಜರಂಗದಳ ಪ್ರಾಂತ ಸಂಯೋಜಕ ರಘು ಸಕಲೇಶಪುರ ತಿಳಿಸಿದರು.
ಡಿಸೆಂಬರ್ ೧೭ ರಂದು ಬೆಳಗ್ಗೆ ೮.೩೦ ಕ್ಕೆ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಐ.ಜಿ ರಸ್ತೆ ಮೂಲಕ ಕಾಮಧೇನು ಗಣಪತಿ ದೇವಸ್ಥಾನದವರೆಗೆ ಮಾತೆಯರಿಂದ ಭಜನೆ ಹಾಗೂ ಸಂಕೀರ್ತನಾ ಯಾತ್ರೆ ನಡೆಯಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಡಿ.೧೮ ರ ಶನಿವಾರ ಬೃಹತ್ ಶೋಭಾ ಯಾತ್ರೆ ನಡೆಯಲಿದ್ದು ಮಧ್ಯಾಹ್ನ ೨.೩೦ ಗಂಟೆಗೆ ನಗರದ ಕಾಮಧೇನು ಗಣಪತಿ ದೇವಾಲಯದಿಂದ ಎಂ.ಜಿ ರಸ್ತೆ ಮೂಲಕ ಸಾಗಿ ಆಜಾದ್ ಪಾರ್ಕ್ವರೆಗೆ ಮೆರವಣಿಗೆ ಮೂಲಕ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಸಂಜೆ ೬.೦೦ ಗಂಟೆಗೆ ಮಂಗಳೂರಿನ ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಆಲ್ದೂರಿನ ಬೇರುಗಂಡಿ ಮಠದ ರೇಣುಕಾ ಮಹಂತ ಶಿವಾಚಾರ್ಯ ಸ್ವಾಮೀಜಿ, ಉಪಸ್ಥಿತರಿರಲಿದ್ದಾರೆ. ವಿ.ಹಿಂ.ಪ.ನ ಅಖಿಲ ಭಾರತೀಯ ಸಹ ಪ್ರಧಾನ ಕಾರ್ಯದರ್ಶಿ ಸ್ಥಾಣುಮಾಲಯನ್ ದಿಕ್ಸೂಚಿ ಭಾಷಣ ಓದಲಿದ್ದು, ವಿ.ಹಿಂ.ಪ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಿಸೆಂಬರ್ ೧೯ ರ ದತ್ತಜಯಂತಿ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸುಮಾರು ೧೨ ಸಾವಿರಕ್ಕೂ ಹೆಚ್ಚು ದತ್ತಭಕ್ತರು ಭಾಗವಹಿಸಲಿದ್ದಾರೆ ಅಂದು ದತ್ತಪೀಠದಲ್ಲಿ ಬೆಳಗ್ಗೆ ೧೦.೦೦ ಗಂಟೆಗೆ ಪೂರ್ಣಾಹುತಿ ಪೂಜೆ, ಮತ್ತು ವಿವಿಧ ಮಠದ ಮಠಾಧೀಶರ ನೇತೃತ್ವದಲ್ಲಿ ಗಣಪತಿ ಹೋಮ, ದತ್ತಹೋಮ, ಧಾರ್ಮಿಕ ಸಭೆ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ವಿಶ್ವಹಿಂದು ಪರಿಷತ್ ಭಜರಂಗದಳದ ಜಿಲ್ಲಾ ಸಂಚಾಲಕ ಶಶಾಂಕ್ ಹೆರೂರು, ಅಮಿತ್, ಜಿಲ್ಲಾ ಉಪಾಧ್ಯಕ್ಷ ಯೋಗೇಶ್ ರಾಜ್ ಅರಸ್ ಉಪಸ್ಥಿತರಿದ್ದರು.
Discussion about this post