ಚಿಕ್ಕಮಗಳೂರು : ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ಹಮ್ಮಿಕೊಂಡಿದ್ದ ಗುರುದತ್ತಾತ್ರೇಯ ಪೀಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದತ್ತ ಜಯಂತಿ ಹಾಗೂ ದತ್ತ ಮಾಲಾ ಅಭಿಯಾನಕ್ಕೆ ಶಾಂತಯುತ ತೆರೆಕಂಡಿತು.
ಭಾನುವಾರ ಶ್ರೀ ಗುರುದತ್ತಾತ್ರೇಯ ಪೀಠದಲ್ಲಿ ಪೊಲೀಸ್ ಬಿಗಿ ಭದ್ರತೆ ನಡುವೆ ರಾಜ್ಯದ ವಿವಿಧ ಭಾಗಗಳಿಂದ ಗಮಿಸಿದ್ದ ಸಹಸ್ರಾರು ಭಕ್ತರು ಬ್ಯಾರಿಕೇಡ್ನಲ್ಲಿ ಸಾಗಿ ದತ್ತ ಪಾದುಕೆ ದರ್ಶನ ಪಡೆದು ಹೋಮ ಹವನದಲ್ಲಿ ಪಾಲ್ಗೊಳ್ಳುವ ಮೂಲಕ ದತ್ತ ಜಯಂತಿ ನಡೆಯಿತು.
ಹೊನ್ನಮ್ಮನಹಳ್ಳದಿಂದ ದತ್ತಮಾಲಾಧಾರಿಗಳು ೧೦ ಕಿಮೀ ಪಾದಾಯಾತ್ರೆಯಲ್ಲಿ ಸಾಗಿದರು. ರಾಜ್ಯದ ವಿವಿಧ ಭಾಗಗಳಿಂದ ವಾಹನದಲ್ಲಿ ಆಗಮಿಸಿದ್ದ ಭಕ್ತರು ಹೊನ್ನಮ್ಮನಹಳ್ಳದಲ್ಲಿ ಮಿಂದೆದ್ದು ದತ್ತಪೀಠದ ಗುಹಾಂತರ ದೇವಾಲಯಕ್ಕೆ ತೆರಳಿ ಪಾದುಕೆ ದರ್ಶನ ಪಡೆದು ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆ ತಿಪ್ಪನಹಳ್ಳಿ ಎಸ್ಟೇಟ್ ಸಮೀಪದ ಚೆಕ್ ಪೋಸ್ಟ್ಬಳಿ ಸಾಲುಗಟ್ಟಿ ನಿಂತಿದ್ದ ಭಕ್ತರ ನೂರಾರು ವಾಹನಗಳನ್ನು ತಪಾಸಣೆ ನಡೆಸಿ ಬಿಡಲಾಯಿತು.
ಬ್ಯಾರಿಕೇಡ್ನ ಹೊರಭಾಗದಲ್ಲಿದ್ದ ಶೆಡ್ನಲ್ಲಿ ಭಕ್ತರು ಇರುಮುಡಿ ಹೊತ್ತು ತಂದಿದ್ದ ಅಕ್ಕಿ, ಬೆಲ್ಲ, ಕಾಯಿ ಇತ್ಯಾದಿ ವಸ್ತುವಿದ್ದ ಪಡಿಯನ್ನು ಅರ್ಪಿಸಿ ಮಾಲೆಯನ್ನು ವಿಸರ್ಜಿಸುವ ಮೂಲಕ ಮೂರು ದಿನಗಳ ದತ್ತ ಜಯಂತಿ ಉತ್ಸವಕ್ಕೆ ತೆರೆ ಎಳೆಯಲಾಯಿತು. ಭಕ್ತರು ಸಾಲಿನಲ್ಲಿ ಆಗಮಿಸಿ ತೀರ್ಥ, ಪ್ರಸಾದ ಸ್ವೀಕರಿಸಿ ನಂತರ ಗುಹಾಂತರ ದೇವಾಲಯದ ಸಮೀಪದ ಶೆಡ್ನಲ್ಲಿ ಅರ್ಚಕ ಕೇಶವ ಭಟ್, ಸುಶಾಂತ್ ಭಟ್, ಖಾಂಡ್ಯ ಪ್ರವೀಣ್ ನೇತೃತ್ವದಲ್ಲಿ ದತ್ತಾತ್ರೇಯ ಹೋಮ, ಗಣಪತಿ ಹೋಮ ನೆರವೇರಿಸಿದರು.
ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ಕುಮಾರ್, ಪತ್ನಿ ಪ್ರೀಯಾಂಕಸುನೀಲ್, ಪುತ್ರ ದತ್ತ ಕುಟುಂಬ ಸಮೇತರಾಗಿ ಆಗಮಿಸಿ ಪಾದುಕೆ ದರ್ಶನಪಡೆದರು. ನಂತರ ಸಚಿವರು ಹಾಗೂ ಪುತ್ರ ಇರುಮುಡಿ ಅರ್ಪಿಸಿ ಮಾಲೆ ವಿಸರ್ಜಿಸಿದರು.
ಬೆಂಗಳೂರು, ಮಂಗಳೂರು, ಉಡುಪಿ , ಕಾರ್ಕಾಳ, ಹಾಸನ, ಬೇಲೂರು, ಸಕಲೇಶಪುರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಕಾಪು, ತುಮಕೂರು, ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ದ್ವಿಚಕ್ರವಾಹನಗಳು ಸೇರಿದಂತೆ ೧೨೦೦ಕ್ಕೂ ಹೆಚ್ಚು ವಾಹನಗಳಲ್ಲಿ ೧೬ ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಬಹಳಷ್ಟು ಯುವಕರು ಕೇಸರಿ ವಸ ತೊಟ್ಟು ಬೈಕ್ಗಳಿಗೆ ಬೃಹದಾಕಾರದ ಧ್ವಜ ಕಟ್ಟಿಕೊಂಡು ಜೈಕಾರದ ಘೋಷಣೆಗಳೊಂದಿಗೆ ಸಾಗಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದ ಕೆಲವೆಡೆ ಭಕ್ತರ ವಾಹನ ಪಾರ್ಕಿಗ್ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ದತ್ತಜಯಂತಿ ಅಂಗವಾಗಿ ಕೆಲವು ರಸ್ತೆಗಳಲ್ಲಿ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ನಗರದಲ್ಲಿ ರಸ್ತೆಗಳು ಬಿಕೋ ಎನ್ನುತ್ತಿತ್ತು. ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಬೆಳ್ಳಿಪ್ರಕಾಶ್, ಬಜರಂಗದಳ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ್, ರಘು ಸಕಲೇಶಪುರ, ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಯೋಗೀಶ್ ರಾಜ್ ಅರಸ್, ಆರ್.ಡಿ.ಮಹೇಂದ್ರ, ಶಶಾಂಕ್ ಹೆರೂರ್, ಅಮಿತ್ ಗೌಡ, ಶ್ವಾಮ್ ವಿ ಗೌಡ, ಸಂತೋಷ್ ಕೋಟ್ಯಾನ್, ಬಿಜೆಪಿ ಮುಖಂಡರಾದ ವರಸಿದ್ದಿವೇಣುಗೋಪಾಲ್, ಸಿ.ಆರ್.ಪ್ರೇಮ್ಕುಮಾರ್, ಬಿ.ರಾಜಪ್ಪ, ನಾರಾಯಣಗೌಡ, ಈಶ್ವರಹಳ್ಳಿ ಮಹೇಶ್, ರವಿದೇವನೂರು, ದೀಪಕ್ ದೊಡ್ಡಯ್ಯ ದಿನೇಶ್, ಸಚಿನ್ ಇದ್ದರು.
Dattajayanti Festival
Discussion about this post