ಚಿಕ್ಕಮಗಳೂರು: ದೇಶದಲ್ಲಿ ನೋಟು ಅಮಾನ್ಯೀಕರಣಗೊಂಡು ೫ ವರ್ಷ ಕಳೆದಿವೆ. ಪ್ರಧಾನಿಗಳು ನೀಡಿರುವ ಭರವಸೆಗಳು, ಆಗಿರುವ ಬದಲಾವಣೆಗಳ ಕುರಿತು ಶ್ವೇತ ಪತ್ರ ಹೊರಡಿಸಿ ಜನತೆಗೆ ಮುಟ್ಟಿಸಲಿ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಒತ್ತಾಯಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಮಂಡಳಿಯಿಂದ ರಾಷ್ಟ್ರೀಯ ಮಂಡಳಿ ಸಭೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಅಭದ್ರತೆ ಸೇರಿದಂತೆ ಹಲವಾರು ಸಮಸ್ಯೆಗಳು ಕಾಡುತ್ತಿದ್ದು ಸರ್ಕಾರವನ್ನು ಜನತೆ ಪ್ರಶ್ನಿಸುವ ಕಾಲ ಬಂದಿದೆ. ದೇಶದ ಪ್ರಧಾನಮಂತ್ರಿಗಳು ರಾತ್ರೋ ರಾತ್ರಿ ನೋಟು ಅಮಾನ್ಯೀಕರಣಗೊಳಿಸುವ ಮೂಲಕ ಇದರಿಂದಾಗಿ ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ನಿಗ್ರಹ, ಜತೆಗೆ ಕಪ್ಪುಹಣ ತಡೆಗಟ್ಟಲು ಸಹಾಯಕವಾಗಲಿದೆ ಎಂದು ಆಶ್ವಾಸನೆ ನೀಡಿದ್ದರೂ ಆದರೆ ದೇಶದಲ್ಲಿ ಯಾವೊಂದು ಬದಲಾವಣೆಗಳಾಗಿಲ್ಲ ಮತ್ತಷ್ಟು ಅತಂತ್ರ ಸ್ಥಿತಿಗೆ ತಲುಪಿದೆ ಎಂದು ವಾಗ್ದಾಳಿ ನಡೆಸಿದರು.
ನೀಡಿದ ಭರವಸೆಗಳನ್ನು ಈಡೇರಿಸಿಲ್ಲದ ಬಗ್ಗೆ ದೇಶದ ಜನತೆ ಪ್ರಧಾನಿಗಳನ್ನು ಪ್ರಶ್ನಿಸುವ ಸಮಯ ಬಂದಿದೆ. ಅಚ್ಚೇದಿನ್ ಹೆಸರಿನಲ್ಲಿ ದೇಶವನ್ನು ಕಾರ್ಪೋರೇಟ್ ಬಂಡವಾಳ ಷಾಹಿಗಳಿಗೆ ಮಾರಾಟ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ದೇಶದ ಗಡಿಯಲ್ಲಿ ಕರಾಳ ಕೃಷಿ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ರೈತರು ಧರಣಿ ನಡೆಸುತ್ತಿರುವುದು ಒಂದು ವರ್ಷ ಪೂರೈಸುತ್ತಿದೆ. ಸೌಜನ್ಯಕ್ಕಾದರೂ ಸಮಸ್ಯೆಗಳನ್ನು ಆಲಿಸುವ ಕೆಲಸವನ್ನು ದೇಶದ ಪ್ರಧಾನಿಗಳು ಮಾಡಿಲ್ಲ. ಕೋವಿಡ್ ಸಂಕಷ್ಟದಲ್ಲಿ ರೈತರೊಂದಿಗೆ ಚರ್ಚಿಸದೆ, ಅವರನ್ನು ವಿಶ್ವಾಸಕ್ಕೆ ಪಡೆಯದೆ ಕರಾಳ ಮಸೂದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿರುವುದು ಸರ್ವಾಧಿಕಾರದ ಧೋರಣೆಯನ್ನು ವ್ಯಕ್ತಪಡಿಸುತ್ತದೆ ಎಂದು ಆಕ್ರೋಶ ಹೊರಹಾಕಿದರು.
ದೇಶದ ಯಾವುದೇ ಪಕ್ಷಗಳು ಜನರ ಶೋಷಣೆ ತಪ್ಪಿಸಲು ಮುಂದಾಗಿಲ್ಲ, ಬದಲಾಗಿ ಆರೋಪ, ಪ್ರತ್ಯಾರೋಪಗಳ ಮೂಲಕ ಜನರನ್ನು ಮತಬ್ಯಾಂಕ್ಗಳಾಗಿ ಪರಿವರ್ತನೆ ಮಾಡುತ್ತಿವೆ. ಅಗತ್ಯ ವಸ್ತುಗಳು, ತೈಲ ಬೆಲೆ ಏರಿಕೆ, ಬಗ್ಗೆ ಆಡಳಿತ ಸರ್ಕಾರವನ್ನು ಪ್ರಶ್ನಿಸಿದ್ದಲ್ಲಿ ವಿಪಕ್ಷಗಳತ್ತ ಆರೋಪ ಮಾಡುತ್ತದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಜನರು ಜಾಗೃತರಾಗಬೇಕಿದೆ. ದೇಶದಲ್ಲಿ ಬದಲಾವಣೆಯ ಸಮಯ ಹತ್ತಿರವಾಗುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಟಿದ್ದು, ಆಂತರಿಕ ಭದ್ರತೆಯೂ ಇಲ್ಲದಂತಾಗಿದೆ, ಉದ್ಯೋಗ ಖಾತ್ರಿ ಯೋಜನೆ ಸರಿಯಾಗಿ ಅನುಷ್ಠಾನಗೊಂಡಿಲ್ಲ, ಬಿಜೆಪಿ ತನ್ನ ಕುಟಿಲ ನೀತಿ ಅನುಸರಿಸುವ ಮೂಲಕ ಜನರನ್ನು ಶೋಷಣೆ ಮಾಡುತ್ತಿದೆ. ದೇಶದಲ್ಲಿ ಬದಲಾವಣೆ ತರುವ ಕಾಲ ಹತ್ತಿರವಾಗುತ್ತಿದ್ದು ಇದರಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಜವಾಬ್ದಾರಿ ದೊಡ್ಡದಿದೆ. ಪಕ್ಷದ ಕಾರ್ಯಕರ್ತರೆಲ್ಲರೂ ಮತ್ತಷ್ಟು ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು.
ಸಿಪಿಐನ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ಹಾಗೂ ಕಾರ್ಪೋರೇಟ್ ಸ್ನೇಹಿ ಸರ್ಕಾರವಿದ್ದು, ಬಂಡವಾಳ ಷಾಹಿಗಳ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿದೆ ಎಂದು ದೂಷಿಸಿದರು.
ದೇಶದಲ್ಲಿ ಬೆಲೆ ಏರಿಕೆ, ಲಾಕ್ಡೌನ ಸಂಕಷ್ಟದಿಂದ ಎಲ್ಲಾ ಕೂಲಿ ಕಾರ್ಮಿಕರು, ಮಹಿಳೆಯರು, ಕೃಷಿಕರು ಒಳಗೊಂಡಂತೆ ಎಲ್ಲಾ ವರ್ಗದ ಜನರು ಆರ್ಥಿಕವಾಗಿ ಸಂಕಷ್ಟ ಅನುಭವಿಸಿದರು. ಇದೀಗ ಕರಾಳ ಕೃಷಿ ಮಸೂದೆಗಳನ್ನು ಜಾರಿಗೊಳಿಸಿ ಜನರನ್ನು ಬೀದಿಪಾಲು ಮಾಡುವ ಹುನ್ನಾರ ಅಡಗಿದೆ ಇದರ ವಿರುದ್ದ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ ಮಾತನಾಡಿ ಬಿಜೆಪಿ ಆಡಳಿತ ಅವಧಿಯಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ಇಲ್ಲವಾಗಿದೆ. ಸಂವಿಧಾನಿಕ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಇದೊಂದು ನೀಚ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಹಿಂದೂತ್ವ ಪ್ರತಿಪಾದಿಸಿ, ರೈತರು, ದಲಿತ ಪರ ಎಂದು ಬಿಂಬಿಸಿಕೊಂಡು ಆಡಳಿತ ನಡೆಸುವ ಬಿಜೆಪಿ ಸರ್ಕಾರ ರೈತರನ್ನು ವಿಶ್ವಾಸಕ್ಕೆ ಪಡೆಯದೇ ಮಸೂದೆಗಳನ್ನು ಯಾರ ಹಿತಕ್ಕಾಗಿ ಜಾರಿಗೊಳಿಸಿದೆ ಎಪಿಎಂಸಿಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ ಬಲಗೊಳಿಸುವ ಬದಲಾಗಿ ತಿದ್ದುಪಡಿ ಮೂಲಕ ಅದನ್ನು ಕಿತ್ತೊಗೆಯುವ ನಿಯಮ ರೂಪಿಸಿದೆ ಇದು ಮುಂದಿನ ದಿನಗಳಲ್ಲಿ ರೈತರಿಗೆ ಮಾರಕವಾಗಿ ಪರಿಣಮಿಸಲಿ. ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿ ಆಡಳಿತ ನಡೆಸುತ್ತಿರುವ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಅದಕ್ಕಾಗಿ ಎಲ್ಲರೂ ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಗುಣಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ಬಿ.ಅಮ್ಜದ್, ವಿಜಯ್ಕುಮಾರ್, ರಾಧಾ ಸುಂದರೇಶ್, ಹಾಗೂ ಪಕ್ಷದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
Discussion about this post