ಧರ್ಮಸ್ಥಳ: ಎತ್ತನೋಡಿದರೂ ಬೆಳಕಿನ ಸರಮಾಲೆ, ಸಹಸ್ರಾರು ಭಕ್ತರು, ನಾನಾ ರೀತಿಯ ಹೂವುಗಳಿಂದ ಅಲಂಕೃತಗೊಂಡ ದೇವಾಲಯದ ಮುಖ್ಯದ್ವಾರ ಮತ್ತು ಪುಷ್ಪಗಳಿಂದಲೇ ನಿರ್ಮಾಣವಾದ ಶಿವಲಿಂಗ ಇವೆಲ್ಲವೂ ಧರ್ಮಸ್ಥಳ ಲಕ್ಷದೀಪೋತ್ಸವದ ನಾಲ್ಕನೇ ದಿನದ ವಿಶೇಷ ನೋಟ.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ನಾಲ್ಕನೇ ದಿನ ಧರ್ಮಸ್ಥಳೇಶನಿಗೆ ಕಂಚಿಮಾರುಕಟ್ಟೆ ಉತ್ಸವದ ವೈಭವ. ದೇವಾಲಯದ ಪ್ರಾಂಗಣದಲ್ಲಿ ಪ್ರದಕ್ಷಿಣಾ ಪಥದಲ್ಲಿ ಸ್ವರ್ಣಪಲ್ಲಕ್ಕಿಯಲ್ಲಿ ಹದಿನಾರು ಸುತ್ತು ಸುತ್ತಿದ ಸ್ವಾಮಿಯ ಉತ್ಸವ ಮೂರ್ತಿ, ನಂತರ ಬೆಳ್ಳಿಯ ನಂದಿ ಮಂಟಪದಲ್ಲಿ ರಥ ಬೀದಿಯ ಮೂಲಕ ಕಂಚಿ ಮಾರುಕಟ್ಟೆಗೆ ಹೊರಟಿತು.
ದೇವಸ್ಥಾನದ ಆನೆ ಲತಾ, ಬಸವ ಗಿರೀಶ, ವಿವಿಧ ವಾದ್ಯಗಳು ಹಾಗೂ ಸಾವಿರಾರು ಭಕ್ತ ವೃಂದದೊಟ್ಟಿಗೆ ಸ್ವಾಮಿಯ ವಿರಾಜಮಾನನಮೂರ್ತಿ ಕಂಚಿ ಮಾರುಕಟ್ಟೆ ತಲುಪಿತು. ಕಂಚಿಮಾರುಕಟ್ಟೆ ತಲುಪಿದ ಮೇಲೆ ವಾಡಿಕೆಯ ವಿಧಿ ವಿಧಾನಗಳು ನೆರವೇರಿದವು. ಆರತಿ, ಪೂಜೆ, ವಾದ್ಯ ಸೇವೆ ನೆರವೇರಿದ ನಂತರ ಆರಾಧ್ಯ ಮೂರ್ತಿಯನ್ನು ದೇವಾಲಯಕ್ಕೆ ಕರೆತರಲಾಯಿತು. ದೇವಸ್ಥಾನದ ಹೊರವಲಯದಲ್ಲಿ ಬೆಳ್ಳಿಯ ರಥದಲ್ಲಿ ರಥೋತ್ಸವ ಸೇವೆಯ ಮೂಲಕ ಉತ್ಸವ ಸಂಪನ್ನಗೊಂಡಿತು.
ಪಾದಯಾತ್ರೆಯ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ದೊರೆತಿತ್ತು..
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಜರುಗುವ ಲಕ್ಷದೀಪೋತ್ಸವಕ್ಕೆ ಸೋಮವಾರ (ನವೆಂಬರ್ 29)ರಂದು ಪಾದಯಾತ್ರೆಯ ಮೂಲಕ ಚಾಲನೆ ದೊರೆಯಿತು. ಸುಮಾರು ಹತ್ತು ಸಾವಿರ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಾಡಿನ ವಿವಿಧ ಭಾಗದಿಂದ ಆಗಮಿಸಿದ ಭಕ್ತರು ಕಾಲ್ನಡಿಗೆಯ ಮೂಲಕ ಧರ್ಮಸ್ಥಳದೆಡೆಗೆ ಸಾಗಿದರು.
ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ಮುಂಬಾಗದಿಂದ ಪಾದಯಾತ್ರೆ ಆರಂಭಗೊಂಡಿತು. ಸಾಗರೋಪಾದಿಯಲ್ಲಿ ಜನರು ಸಾಲುಗಟ್ಟಿ ಕಾಲ್ನಡಿಗೆಯ ಮೂಲಕ ಸಾಗುತ್ತಿದ್ದಾಗ ಭಕ್ತಿ ಮತ್ತು ಶಕ್ತಿ ಪಾದಯಾತ್ರಿಗಳಲ್ಲಿ ಎದ್ದು ತೋರುತ್ತಿತ್ತು. ಹಲವಾರು ತಂಡಗಳು ವಿವಿಧ ರೂಪಕ ಮತ್ತು ಮೆರವಣಿಗೆಯೊಟ್ಟಿಗೆ ಗೋವಿಂದ, ಮಂಜುನಾಥ ಹೀಗೆ ದೇವರ ಸ್ಮರಣೆ ಮಾಡುತ್ತಾ 10 ಕಿಮೀ ದೂರ ಸಾಗಿದರು.
ವರದಿ: ಸುಮಾ.ಕಂಚೀಪಾಲ್
ಇದನ್ನೂ ಓದಿ: Malnutrition: ಭಾರತದಲ್ಲಿ 33 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಆರ್ಟಿಐ ಅಡಿ ಮಾಹಿತಿ ಬಹಿರಂಗ
Discussion about this post