ಮೈಸೂರು: ಇಲ್ಲಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಿಂಗ್ ರಸ್ತೆಯಲ್ಲಿರುವ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಅಭಿವೃದ್ಧಿ ಆಯುಕ್ತರ (ಕರಕುಶಲ) ಇಲಾಖೆ ವತಿಯಿಂದ ಅ.31ರವರೆಗೆ ಕರಕುಶಲ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಗಾಂಧಿ ಶಿಲ್ಪ ಬಜಾರ್ ಹೆಸರಿನಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿರುವ ಹಲವು ಬಗೆಯ ವಸ್ತುಗಳು ಕಣ್ಮನ ಸೆಳೆಯುತ್ತಿವಿವೆ.
ಆಲಂಕಾರಿಕ, ಕಾಗದ, ಬಟ್ಟೆಗಳಿಂದ ತಯಾರಿಸಿರುವ ಹೂಗಳ ಅಪಾರ ಸಂಗ್ರಹ, ಗೋಡೆಗಳಲ್ಲಿ ನೇತುಹಾಕುವಂಥ ಹೂಗಳು, ಟೇಬಲ್ಗಳ ಮೇಲೆ ಇರಿಸುವಂಥ, ನೆಲದಲ್ಲಿ ಇಡುವಂಥ ಹೂದಾನಿಗಳು ಆಕರ್ಷಕವಾಗಿವೆ. ವಿವಿಧ ವಿನ್ಯಾಸ, ವಿವಿಧ ಗಾತ್ರದ ಬೆಡ್ ಸ್ಪ್ರೆಡ್, ಬೆಡ್ ಕವರ್ಗಳು, ಹಾಸಿಗೆಗಳ ಮಳಿಗೆ ಆಕರ್ಷಿಸುತ್ತದೆ. ಸೆಣಬಿನಿಂದ ತಯಾರಿಸಲಾದ ವಿವಿಧ ಪೀಠೋಪಕರಣಗಳು. ಸೆಣಬಿನ ದಾರಗಳಿಂದ ಸೊಗಸಾಗಿ ಹೆಣೆದು ವಿನ್ಯಾಸ ಮಾಡಿರುವ ಪರಿಕರಗಳು ವಿವಿಧ ವಿನ್ಯಾಸಗಳಲ್ಲಿವೆ. ಸೋಫಾ ಸೆಟ್ಗಳು, ಬ್ಯಾಸ್ಕೆಟ್ಗಳು, ಟಿಪಾಯಿಗಳು, ಕುರ್ಚಿಗಳು ಆಕರ್ಷಕವಾಗಿವೆ.
ಕೇರಳದ ಕುಶಲಕರ್ಮಿಗಳು ತಯಾರಿಸಿರುವ ವಿವಿಧ ಕರಕುಶಲ ವಸ್ತುಗಳು, ಮರದ ಕೆತ್ತನೆಗಳು, ವುಡ್ ಕಾರ್ವಿಂಗ್ನಿಂದ ದೇವರ ಚಿತ್ರಗಳು, ವುಡ್ ಪೈರೋಗ್ರಫಿ, ಕಾರ್ವಿಂಗ್ಗಳು ಸೊಗಸಾಗಿವೆ. ಮರದ ಆಲಂಕಾರಿಕ ವಸ್ತುಗಳು, ಬಿದಿರಿನಿಂದ ತಯಾರಿಸಿದ ವಸ್ತುಗಳ ಸಂಗ್ರಹವoತೂ ಅಪಾರವಾಗಿದೆ. ಕೇರಳದ ಸಾಂಪ್ರದಾಯಿಕ ಬೋಟ್ ಹೌಸ್ನ ಪ್ರತಿಕೃತಿ, ಎತ್ತಿನಗಾಡಿ, ಹೂದಾನಿಗಳ ಸಂಗ್ರಹವೂ ಇದೆ.
ಕೊಲ್ಹಾಪುರ ಚರ್ಮದ ಚಪ್ಪಲಿಗಳು, ವಿವಿಧ ಬಗೆಯ ಮಣಿಗಳಿಂದ ತಯಾರಿಸಲಾದ ಸರಗಳು, ಪಾರಂಪರಿಕ ಮಾದರಿಯ ಸರಗಳು, ವಿವಿಧ ಸ್ಟೋನ್ಗಳಿಂದ ತಯಾರಿಸಲಾದ ಆಭರಣಗಳೂ ಇವೆ. ಮಾರ್ಬಲ್ನಿಂದ ತಯಾರಿಸಲಾದ ಆಲಂಕಾರಿಕ ವಸ್ತುಗಳು ಇವೆ. ಬಿದಿರಿನಿಂದ ತಯಾರಿಸಲಾದ ಆಲಂಕಾರಿಕ ವಸ್ತುಗಳು, ಬುಟ್ಟಿಗಳೂ ಇವೆ. ಕೈಮಗ್ಗದ ವಸ್ತುಗಳೂ ಇವೆ. ವಿವಿಧ ಬಗೆಯ ಡ್ರೆಸ್ಮೆಟೀರಿಯಲ್ಗಳು, ಕೈಮಗ್ಗದ ಸೀರೆಗಳ ಅಪಾರ ಸಂಗ್ರಹವoತೂ ಮಹಿಳೆಯರ ಮನತಣಿಸುತ್ತಿದೆ.
ಕನ್ಯಾಕುಮಾರಿಯ ವಡಿವೇಲು ಅವರ ಮಳಿಗೆಯಲ್ಲಿ ಶಂಖ, ಕಪ್ಪೆ ಚಿಪ್ಪಿನಿಂದ ತಯಾರಿಸಿರುವ ವಿವಿಧ ಬಗೆಯ ಆಲಂಕಾರಿಕ ವಸ್ತುಗಳಿವೆ. ಅವುಗಳನ್ನು ತಯಾರಿಸುವ ವಿಧಾನಗಳನ್ನೂ ಕಾಣುವ ಅವಕಾಶವೂ ಇದೆ. ವಿವಿಧ ಬಗೆಯ ಸೀರೆಗಳು, ಡ್ರೆಸ್ ಮೆಟೀರಿಯಲ್ಗಳು, ಖಾದಿ ಬಟ್ಟೆಗಳು, ಕಾಶ್ಮೀರದ ಸೀರೆಗಳು, ಸಪ್ನಾ ಸಿಲ್ಕ್, ಷರ್ಟ್ಗಳು, ಪಂಚೆಗಳ ಸಂಗ್ರಹವೂ ಇದೆ. ಚರ್ಮದ ಬ್ಯಾಗ್ಗಳು, ಪರ್ಸ್ಗಳು, ಕಾರ್ಪೆಟ್ಗಳು ಇವೆ.
ಕೇರಳ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ನಾಗಾಲ್ಯಾಂಡ್, ತೆಲಂಗಾನ, ಆಂಧ್ರಪ್ರದೇಶ, ಗುಜರಾತ್, ಕಾಶ್ಮೀರ, ದೆಹಲಿ, ರಾಜಸ್ತಾನ, ಪಂಜಾಬ್, ಹರಿಯಾಣ ಸೇರಿದಂತೆ 22 ರಾಜ್ಯಗಳ 110 ಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಮೇಳವು ಅ.31ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯುತ್ತದೆ.
ಮೇಳದಲ್ಲಿರುವ 110 ಕುಶಲಕರ್ಮಿಗಳೂ ಕೇಂದ್ರ ಸರ್ಕಾರದ ಕರಕುಶಲ ಇಲಾಖೆಯಿಂದ ನೀಡಲಾಗಿರುವ ಕಾರ್ಡ್ ಹೊಂದಿದ್ದು, ಗ್ರಾಹಕರ ಬೆಲೆಗೆ ತಕ್ಕುದಾದ ಕಲಾಕೃತಿ, ವಸ್ತುಗಳನ್ನು ಪಡೆಯಬಹುದು. ‘ಮರದ ಕೆತ್ತನೆ, ಶಿಲಾಶಿಲ್ಪ, ಕಂಚಿನ ವಿಗ್ರಹ, ಮರದ ಕುಂದಣ ಕಲೆ, ರತ್ನಕಂಬಳಿ, ಹತ್ತಿ ಜಮಾಖಾನ, ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು, ತಂಜಾವೂರು, ಮೈಸೂರು ಶೈಲಿಯ ಚಿತ್ರಕಲೆ, ಕಲಾತ್ಮಕ ಚರ್ಮದ ಚಪ್ಪಲಿಗಳು, ಬಿದಿರುಬೆತ್ತದ ವಸ್ತುಗಳು, ಮಧುಬನಿ ಚಿತ್ರಕಲೆಗಳು, ಕಾಶ್ಮೀರದ ರತ್ನಕಂಬಳಿ, ಜಮಖಾನ, ಆಭರಣಗಳು, ಮೇಣದ ಕಲಾಕೃತಿಗಳು, ಬಿಹಾರದ ಮಧುಬನಿ ಚಿತ್ರಕಲೆ, ಉತ್ತರ ಪ್ರದೇಶದ ಲೋಹದ ವಸ್ತುಗಳು, ದೋಕ್ರಾ ಕಲೆ, ಚನ್ನಪಟ್ಟಣದ ಗೊಂಬೆಗಳು ಗಮನ ಸೆಳೆಯುತ್ತವೆ.
Gandhi Sculpture Bazaar Exhibition Attracting Attention
ಇದನ್ನೂ ಓದಿ: Children to school: ಮೂರ್ನಾಲ್ಕು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮಕ್ಕಳು ಶಾಲೆಗೆ
ಇದನ್ನೂ ಓದಿ: e Paper – October 27, 2021
Discussion about this post