ನಕ್ಸಲ್ ಚಳವಳಿ ಪ್ರಬಲವಾಗಿದ್ದ ಸ್ಥಳಗಳಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದು ಹಲವು ಪ್ರಮುಖ ನಾಯಕರನ್ನು ಬಂಧಿಸಲಾಗಿದೆ. ಸಾಕಷ್ಟು ಹಿರಿಯ ನಾಯಕರು ಎನ್ಕೌಂಟರ್ಗಳಲ್ಲಿ ಹತರಾಗಿದ್ದಾರೆ. ದೇಶದಲ್ಲಿ ನಕ್ಸಲೀಯರ ವಿರುದ್ಧದ ಹೋರಾಟ ನಿರ್ಣಾಯಕ ಹಂತಕ್ಕೆ ಬಂದಿದೆ ಎಂಬ ಮಾತುಗಳು ಹಲವೆಡೆ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ನಕ್ಸಲ್ ಚಳವಳಿಯ ಇತಿಹಾಸ ಮತ್ತು ರಕ್ತಸಿಕ್ತ ಅಧ್ಯಾಯದ ಇಣುಕುನೋಟವನ್ನು ಈ ಬರಹದಲ್ಲಿ ಕಟ್ಟಿಕೊಡಲಾಗಿದೆ.
ನಕ್ಸಲ್ವಾದವು ಸ್ವಾತಂತ್ರ್ಯಾನಂತರದ ಭಾರತದ ಅತಿ ದೊಡ್ಡ ಸವಾಲುಗಳಲ್ಲೊಂದಾಗಿದ್ದು ಸದ್ಯ ಅದರ ತೀವ್ರತೆ ಬಹುತೇಕ ಕಡಿಮೆಯಾಗಿದ್ದರೂ ಪೂರ್ಣವಾಗಿ ನಿಂತಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಕ್ಸಲ್ವಾದವನ್ನು ನಮ್ಮ ದೇಶವು ಹಿಂದೆಂದೂ ಎದುರಿಸದಂತಹಾ ದೊಡ್ಡ ಭದ್ರತಾ ಸವಾಲು ಎಂದು ಬಣ್ಣಿಸಿದ್ದರು. ಮೊದಮೊದಲು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ಆಕ್ರೋಶದ ರೂಪದಲ್ಲಿದ್ದ ಚಳುವಳಿಯು ಕಾಲಕ್ರಮೇಣ ಹಿಂಸಾಚಾರದ ರೂಪ ತಳೆಯಿತು.
ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ಕೇಂದ್ರ ಹಾಗೂ ರಾಜ್ಯಗಳಲ್ಲಿ ಜನರಿಂದ ಚುನಾಯಿತವಾದ ಪ್ರಜಾಸತ್ತಾತ್ಮಕ ಸರಕಾರಗಳು ಕಾರ್ಯಾರಂಭಮಾಡಿದವು. ದೇಶದ ರಾಜಕೀಯ ವ್ಯವಸ್ಥೆಯು ತನ್ನದೇ ಆದ ಲೋಪ-ದೋಷಗಳಿಂದ ಕೂಡಿದ್ದು ಭ್ರಷ್ಟಾಚಾರವೂ ತಲೆಯತ್ತಲು ಪ್ರಾರಂಭಿಸಿತು. ಎಡಪಂಥೀಯ ಪಕ್ಷವಾದ ಭಾರತೀಯ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷವು ಚೀನಾ ಹಾಗೂ ರಷ್ಯಾಗಳ ಸಮಾಜವಾದದಿಂದ ಹೆಚ್ಚು ಪ್ರಭಾವಿತವಾಗಿತ್ತು.
ದೇಶಕ್ಕೆ ಸ್ವಾತಂತ್ರ್ಯ ಬಂದು ಎರಡು ದಶಕಗಳೇ ಕಳೆದಿದ್ದರೂ (1967-68 ) ಜನರ ಸ್ಥಿತಿ-ಗತಿಗಳಲ್ಲಿ ಗಮನಾರ್ಹ ಬದಲಾವಣೆಯೇನೂ ಆಗಿರಲಿಲ್ಲ. ಇಂತಹ ಸಮಯದಲ್ಲಿ ಕಮ್ಯುನಿಸ್ಟ್ ಪಕ್ಷದ ಕೆಲ ನಾಯಕರಲ್ಲಿ ಅಸಹನೆ ಪ್ರಾರಂಭವಾಗಿ ಪಕ್ಷದಲ್ಲಿನ ಹೆಚ್ಚಿದ ಸಂಸದೀಯ ರಾಜಕೀಯ ಶೈಲಿಯನ್ನು ವಿರೋಧಿಸಲಾರಂಭಿಸಿದರು. ಪಕ್ಷದ ಮೂಲಸಿದ್ಧಾಂತಗಳನ್ನು ಪರಿಸ್ಥಿತಿಗೆ ತಕ್ಕಂತೆ ಸುಧಾರಣೆ ಮಾಡಿಕೊಳ್ಳಲು ಮುಂದಾದ ನಾಯಕರೊಂದಿಗೆ ಮೂಲಸಿದ್ಧಾಂತಗಳ ಪ್ರತಿಪಾದಕರು ಭಿನ್ನಮತ ಹೊಂದಿದ ಕಾರಣ ದೊಡ್ಡದೊಂದು ಚರ್ಚೆ ಪ್ರಾರಂಭವಾಯಿತು.
ಅಂತಿಮವಾಗಿ ಪಕ್ಷವು ಭಿನ್ನಮತೀಯರನ್ನು ಉಚ್ಚಾಟಿಸಿದ ನಂತರ ಅವರೆಲ್ಲಾ ಸೇರಿ ಸಿಪಿಐ (ಎಮ್ಎಲ್) ಎಂಬ ಹೊಸ ಸಂಘಟನೆಯನ್ನು ಹುಟ್ಟುಹಾಕಿಕೊಂಡರು. ಹೊಸದಾಗಿ ಉದಯಿಸಿದ ಈ ಸಂಘಟನೆಯು ಚುನಾವಣಾ ರಾಜಕೀಯದಲ್ಲಿ ಪಾಲ್ಗೊಳ್ಳಲು ನಿರಾಕರಿಸಿ ಶಸ್ತ್ರಸಜ್ಜಿತ ಚಳುವಳಿಯನ್ನು ಪ್ರತಿಪಾದಿಸಿತು. ಈ ಸಂಘಟನೆಯ ನಾಯಕತ್ವವನ್ನು ಪಶ್ಚಿಮಬಂಗಾಳದ ಉತ್ತರಭಾಗದ ಸಿಪಿಎಮ್ನ ಎಡಪಂಥೀಯ ನಾಯಕರಾದ ಚಾರು ಮಜುಮ್ದಾರ್ ಹಾಗೂ ಸರೋಜ್ ದತ್ತ ವಹಿಸಿದರು. ಪಕ್ಷದ ಇತರ ನಾಯಕರಾದ ಸನ್ಯಾಲ್ ಹಾಗೂ ಜೊಂಗಲ್ ಸಂಥಾಲ್ ಹಾಗೂ ಅವರ ಬೆಂಬಲಿಗರು ಪಶ್ಚಿಮಬಂಗಾಳದ ನಕ್ಸಲ್ಬಾರಿ ನಗರದಲ್ಲಿ ಗ್ರಾಮೀಣ ರೈತ ಕಾರ್ಮಿಕರ ಚಳುವಳಿಯನ್ನು ಹುಟ್ಟುಹಾಕಿದರಲ್ಲದೇ ಮುಂದೆ ಇದು ಬಹುತೇಕ ಸಂಥಾಲ್ ಬುಡಕಟ್ಟು ಜನರಿಂದ ಕೂಡಿದ ಶಸ್ತ್ರಸಜ್ಜಿತ ಬಂಡುಕೋರರ ಚಳುವಳಿಯಾಗಿ ರೂಪಾಂತರವಾಯಿತು. ನಕ್ಸಲ್ಬಾರಿ ಎಂಬ ಹೆಸರಿನ ಊರಿನಲ್ಲಿ ಇದು ಪ್ರಾರಂಭವಾದ ಕಾರಣ ಇದನ್ನು ನಕ್ಸಲ್ ಚಳುವಳಿ ಎಂದೇ ಕರೆಯಲಾಯಿತು ಹಾಗೂ ಇದರ ಸದಸ್ಯರನ್ನು ನಕ್ಸಲೈಟ್ಗಳು, ನಕ್ಸಲರು, ನಕ್ಸಲ್ವಾದಿಗಳು ಎಂಬೆಲ್ಲಾ ಹೆಸರುಗಳಿಂದ ಕರೆಯಲಾಯಿತು.
ನಡೆದುಬಂದ ದಾರಿ
ಕಾಲಕ್ರಮೇಣ ಇದು ದೇಶದ ಇತರ ಭಾಗಗಳಾದ ಉತ್ತರಪ್ರದೇಶ, ಬಿಹಾರ, ಪಶ್ಚಿಮಬಂಗಾಳದ ಇತರ ಭಾಗಗಳು, ಒರಿಸ್ಸ, ಹಾಗೂ ಉತ್ತರ ಆಂಧ್ರಪ್ರದೇಶ (ಶ್ರೀಕಾಕುಳಮ್)ಗಳಲ್ಲೂ ವ್ಯಾಪಿಸಿತು ಹಾಗೂ ಈ ಎಲ್ಲಾ ಭಾಗಗಳಲ್ಲಿ ಶಸ್ತ್ರಸಜ್ಜಿತ ಗೆರಿಲ್ಲಾ ರೀತಿಯ ಹೋರಾಟಗಳು ಹಾಗೂ ಹಿಂಸಾಚಾರಗಳು ಪ್ರಾರಂಭವಾದವು. ಈ ಚಳುವಳಿಗೆ ಚೈನಾದ ನೈತಿಕ ಬೆಂಬಲವೂ ಸಿಕ್ಕಿತಲ್ಲದೇ ಚಳುವಳಿಗಳನ್ನು ಪ್ರಾರಂಭಿಸಲು ಸತತ ಪ್ರೋತ್ಸಾಹವೂ ಲಭಿಸಿತು. ಪ್ರದೀಪ್ ಬಸು ಅವರ ಪುಸ್ತಕ “ಟುವರ್ಡ್ಸ್ ನಕ್ಸಲ್ಬಾರಿ”ಯಲ್ಲಿ ಹೇಳಿರುವಂತೆ ಪಕ್ಷದ ಸಂಘಟನೆಯಲ್ಲಿ ಮೂಲಭೂತವಾದಿಗಳಲ್ಲೇ ಎರಡು ಕೇಂದ್ರಗಳುಂಟಾಗಿ ಕೋಲ್ಕತ್ತಾದ ಪರಿಮಳ ದಾಸ್ ಗುಪ್ತ ನಾಯಕತ್ವದ ಗುಂಪುತ ಪಕ್ಷದ ನಾಯಕತ್ವದ ಮನವೊಲಿಸಿ ಸುಧಾರಣಾವಾದದ ಲೋಪವನ್ನು ಪಕ್ಷದೊಳಗೇ ಚರ್ಚಿಸುವ ಮೂಲಕ ಪರಿಹರಿಸಿಕೊಳ್ಳುವ ನಿಲುವನ್ನು ತಾಳಿದರೆ ಚಾರು ಮಜುಮ್ದಾರ್ ಮತ್ತು ಕನು ಸನ್ಯಾಲ್ ನಾಯಕತ್ವದ ಉತ್ತರಬಂಗಾಳದ ಗುಂಪು ಶಸ್ತ್ರಸಜ್ಜಿತ ಬಂಡಾಯಗಳ ಮೂಲಕ ಅಪೇಕ್ಷಿತ ಬದಲಾವಣೆ ತರುವ ನಿಲುವನ್ನು ಹೊಂದಿದ್ದರು. ಪ್ರದೀಪ್ ಬಸುರ ಪ್ರಕಾರ ಉತ್ಸಾಹಿ ಹಾಗೂ ಹೋರಾಟದ ಮನೋಭಾವದ ಯುವಕರು ಮತ್ತು ವಿದ್ಯಾರ್ಥಿಗಳಿಂದ ಕೂಡಿದ ರಾಜಕೀಯ ವಾತಾವರಣವು ಸೌಮ್ಯವಾದಿಗಳ ಮೇಲೆ ಮೇಲುಗೈ ಸಾಧಿಸಿತು.
ಇದಾದ ನಂತರ 1970ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಪಕ್ಷದ ಪ್ರಥಮ ಕಾಂಗ್ರೆಸ್ನಲ್ಲಿ ಕೇಂದ್ರೀಯ ಸಮಿತಿಯ ಆಯ್ಕೆಯಾಯಿತು. 1970ರ ದಶಕದ ಆರಂಭದಲ್ಲಿ ದೇಶದ ಪಶ್ಚಿಮ ಭಾಗವನ್ನು ಹೊರತುಪಡಿಸಿ ಮಿಕ್ಕೆಲ್ಲಾ ರಾಜ್ಯಗಳಲ್ಲೂ ವ್ಯಾಪಿಸಿದ ಚಳುವಳಿ ವೈಯಕ್ತಿಕ ವಿವಾದಗಳನ್ನು ಪರಿಹರಿಸುವ ಕಾರ್ಯಗಳಿಗೂ ಕೈಹಾಕಿತು. 1971ರಲ್ಲಿ ಸಾಮಾನ್ಯರನ್ನು ಕೊಲ್ಲುವ ಹಾಗೂ ಪ್ರಾದೇಶಿಕತೆಗಳಿಂದ ಜನವಿರೋಧವನ್ನು ಕಟ್ಟಿಕೊಳ್ಳುವುದರ ವಿರುದ್ಧ ಬಂಡೆದ್ದ ಸತ್ಯನಾರಾಯಣ ಸಿಂಗ್ ನಾಯಕತ್ವದ ಗುಂಪು ಮಜುಮ್ದಾರ್ ಗುಂಪಿನಿಂದ ಪ್ರತ್ಯೇಕಗೊಂಡಿತು. ಇದರಿಂದ ಆಘಾತಕ್ಕೊಳಗಾದ ಮಜುಮ್ದಾರ್ 1972ರಲ್ಲಿ ಪೋಲೀಸ್ ವಶದಲ್ಲಿದ್ದಾಗಲೇ ಅನಾರೋಗ್ಯದಿಂದ ಮೃತರಾದರು. ಅವರ ಮರಣಾನಂತರ 1970ರ ದಶಕದಲ್ಲಿವ ಸಂಘಟನೆಯು ಅನೇಕ ವಿಭಜನೆಗಳನ್ನು ಕಂಡಿತು.
ಒಂದು ಅಂದಾಜಿನ ಪ್ರಕಾರ 1980ರಲ್ಲಿ ಸುಮಾರು 30 ನಕ್ಸಲ್ ಗುಂಪುಗಳು ಕಾರ್ಯಾಚರಿಸುತ್ತಿದ್ದು ಸುಮಾರು 30,000 ಸದಸ್ಯರನ್ನು ಹೊಂದಿದ್ದವು. ಇದೇ ಸಮಯದಲ್ಲಿ ದೇಶದ ದಕ್ಷಿಣ ಭಾಗಕ್ಕೂ ವಿಸ್ತರಿಸಿದ ಶಸ್ತ್ರಸಜ್ಜಿತ ಬಂಡಾಯ ಆಂಧ್ರಪ್ರದೇಶಕ್ಕೂ ಕಾಲಿಟ್ಟಿತು. ಏಪ್ರಿಲ್ 22, 1980ರಂದು ಕೊಂಡಪಲ್ಲಿ ಸೀತಾರಾಮಯ್ಯ ಪೀಪಲ್ಸ್ ವಾರ್ ಗ್ರೂಪ್ ಸಂಸ್ಥೆಯನ್ನು ಹುಟ್ಟುಹಾಕಿದರು. ಚಾರು ಮಜುಮ್ದಾರ್ರ ತತ್ವಗಳನ್ನು ಅನುಸರಿಸುತ್ತಿದ್ದ ಅವರು ಸುವ್ಯವಸ್ಥಿತ ಹಾಗೂ ಪರಿಣಾಮಕಾರಿ ದಾಳಿಗಳನ್ನು ನಡೆಸುವ ನಿಲುವನ್ನು ಹೊಂದಿದ್ದರು. ಇವರ ಚಳುವಳಿಯು 1978ರ ಹೊತ್ತಿಗೆ ಕರೀಮ್ನಗರ್ ಹಾಗೂ ಅದಿಲಾಬಾದ್ ಜಿಲ್ಲೆಗಳಿಗೆ ವ್ಯಾಪಿಸಿತು. ಶ್ರೀಮಂತ ಜಮೀನುದಾರರನ್ನು ಶಸ್ತ್ರಸಜ್ಜಿತರಾಗಿ ಅಪಹರಿಸಿ, ಅವರೇ ತಮ್ಮ ಅಪರಾಧಗಳನ್ನು ಒಪ್ಪಿಕೊಳ್ಳುವಂತೆ ಮಾಡಿ, ಗ್ರಾಮಸ್ಥರಿಂದ ಕ್ಷಮಾಪಣೆಯನ್ನು ಕೇಳುವ ಜೊತೆಗೆ ನಷ್ಟಪರಿಹಾರವನ್ನೂ ಕಟ್ಟಿಕೊಡುವಂತೆ ಮಾಡುತ್ತಿದ್ದರು. ಇವರ ಸಂಘಟನೆಯು 1980ರ ದಶಕದ ಪ್ರಾರಂಭಕ್ಕೆ ಉತ್ತರ ತೆಲಂಗಾಣ, ಹಾಗೂ ಒರಿಸ್ಸಾ ರಾಜ್ಯದ ಗಡಿಭಾಗದ ದಂಡಕಾರಣ್ಯದ ದಟ್ಟ ಕಾಡುಗಳ ಪ್ರದೇಶವನ್ನು ತಮ್ಮ ಆಶ್ರಯತಾಣ ಹಾಗೂ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು.
1985ರಲ್ಲಿ ಪೋಲೀಸರ ಮೇಲೂ ದಾಳಿಗಳನ್ನು ನಡೆಸಲು ಪ್ರಾರಂಭಿಸಿದ ನಕ್ಸಲರು ವಾರಂಗಲ್ನಲ್ಲಿ ಪೋಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರ ಹತ್ಯೆಯನ್ನು ಮಾಡಿದರು. ಇದರ ನಂತರ ಆಂಧ್ರಪ್ರದೇಶ ಹಾಗೂ ಒರಿಸ್ಸಾ ಸರಕಾರಗಳು ನಕ್ಸಲರ ವಿರುದ್ಧದ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದವು. ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರ ಮೇಲೆ 2003ರಲ್ಲಿ ದಾಳಿಯಾದ ನಂತರ ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಕ್ಸಲ್ ಚಳುವಳಿಯನ್ನು ಹತ್ತಿಕ್ಕಲು ಗಂಭೀರವಾಗಿ ಕಾರ್ಯಪ್ರವೃತ್ತವಾದವು. ಬಾಹ್ಯ ದಮನ ಹಾಗೂ ಆಂತರಿಕ ಒಗ್ಗಟ್ಟನ್ನು ಕಾಯ್ದುಕೊಳ್ಳಲು ವಿಫಲವಾದ ಚಳುವಳಿಯು ಕ್ಷೀಣಿಸತೊಡಗಿ ಪ್ರಾದೇಶಿಕತೆಗೆ ಸೀಮಿತವಾಗತೊಡಗಿತು.
ಕಾಲಕಾಲಕ್ಕೆ ನಡೆದ ರಕ್ಷಣಾಪಡೆಗಳ ಕಾರ್ಯಾಚರಣೆಗಳಿಂದಾಗಿ ಚಳುವಳಿಯು ಕುಗ್ಗುತ್ತಾ ಬರುತ್ತಿದ್ದರೂ ಪೂರ್ಣವಾಗಿ ಕೊನೆಗೊಂಡಿಲ್ಲ. ಕೆಲವೇ ದಿನಗಳ ಹಿಂದೆ ನಡೆದ ಇದುವರೆಗಿನ ಕಾರ್ಯಾಚರಣೆಗಳಲ್ಲೇ ಎರಡನೆಯ ಅತಿದೊಡ್ಡ ಕಾರ್ಯಾಚರಣೆ ಎನ್ನಲಾದ ಮಹಾರಾಷ್ಟ್ರದ ಗಢಚಿರೋಲಿ ಕಾರ್ಯಾಚರಣೆಯಲ್ಲಿ ನಕ್ಸಲರ ಪ್ರಮುಖ ನಾಯಕ ಮಿಲಿಂದ್ ತೇಲ್ತೊಂಬ್ಡೆ ಸೇರಿದಂತೆ 26 ನಕ್ಸಲರ ಹತ್ಯೆಯಾಯಿತು. ತದನಂತರ ನಕ್ಸಲರ ಇನ್ನೊಬ್ಬ ಪ್ರಮುಖ ನಾಯಕ ಕಿಶನ್ ದಾ ಕೂಡಾ ಝಾರ್ಖಂಡ್ನಲ್ಲಿ ಬಂಧಿತನಾಗಿದ್ದು ಇವನ ಸುಳಿವು ನೀಡಿದವರಿಗೆ 1 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿತ್ತು.
ಹೀಗೆ ಪ್ರಮುಖ ನಾಯಕರೆಲ್ಲಾ ಒಬ್ಬೊಬ್ಬರಾಗಿ ಪೋಲೀಸ್ ಕಾರ್ಯಾಚರಣೆಗಳಲ್ಲಿ ಹತರಾಗುತ್ತಲೋ ಅಥವಾ ಬಂಧಿತರಾಗುತ್ತಲೋ ಇದ್ದಾರೆ. ಹೀಗಾಗಿ ನಕ್ಸಲ್ ಚಳುವಳಿಯ ಭವಿಷ್ಯ ಅಸ್ಪಷ್ಟವಾಗಿದೆಯೆಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿದ್ದ ಹಲವು ನಾಯಕರು ಎನ್ಕೌಂಟರ್ಗಳಲ್ಲಿ ಸಾವನ್ನಪ್ಪಿದ್ದಾರೆ. ಹಲವು ಪ್ರಮುಖರು ಶರಣಾಗಿದ್ದಾರೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈಚೆಗೆ ಕೆಂಪು ಚಳವಳಿಯ ಕುರುಹು ಕಂಡುಬಂದಿಲ್ಲ.
Experts feel that Naxal Movement is deteriorating day by day due to arrests and deaths of their prominent leaders in police actions
ಇದನ್ನೂ ಓದಿ: Police Encounter: ಮಹಾರಾಷ್ಟ್ರ ಪೋಲೀಸರ ಎರಡನೇ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ 26 ಮಾವೋವಾದಿಗಳ ಹತ್ಯೆ
ಇದನ್ನೂ ಓದಿ: Naxal leader B G Krishnamurthy: ಕೇರಳದಲ್ಲಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ- ಸಾವಿತ್ರಿ ಬಂಧನ
Discussion about this post