ಬೆಂಗಳೂರು: ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಂಗಳವಾರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿಯವರು 2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಲಿದ್ದು ರಾಜ್ಯದ ಜನತೆ ಪೂರ್ಣ ಬಹುಮತ ನೀಡಿದರೆ ನನ್ನ ಕನಸಿನ 5 ಅಂಶಗಳ ಕಾರ್ಯಕ್ರಮ “ಪಂಚರತ್ನ” ವನ್ನು ಜಾರಿಗೊಳಿಸಿ ರಾಜ್ಯದ ಸರ್ವತೋಮುಖ ಏಳಿಗೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಎಲ್ಲರಿಗೂ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ, ವಸತಿ ಯೋಜನೆ, ರೈತಕಲ್ಯಾಣ, ಹಾಗೂ ಉದ್ಯೋಗ ಯೋಜನೆಗಳನ್ನೊಳಗೊಂಡ “ಪಂಚರತ್ನ” ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದರೆ ಮತದಾರರ ಸಂಪೂರ್ಣ ಆಶೀರ್ವಾದ ಹಾಗೂ ಬೆಂಬಲದ ಬಹುಮತ ಸಿಗಬೇಕು.
“ಬಹುಮತವಿಲ್ಲದಿದ್ದರೂ ದೇವರ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ಈಗಾಗಲೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವ ನಾನು ಮುಖ್ಯಮಂತ್ರಿ ಸ್ಥಾನಕ್ಕಾಗಿ ಅಥವಾ ಅಧಿಕಾರಕ್ಕಾಗಿ ನಿಮ್ಮ ಬೆಂಬಲ ಕೇಳುತ್ತಿಲ್ಲ, ಬದಲಾಗಿ ರಾಜ್ಯದ ಸಂಪೂರ್ಣ ಅಭಿವೃದ್ಧಿಯ ಕನಸನ್ನು ನನಸು ಮಾಡಲು ನಿಮ್ಮ ಬೆಂಬಲ ಕೇಳುತ್ತಿದ್ದೇನೆ” ಎಂದರು.
ರಾಜ್ಯದ ಅಭಿವೃದ್ಧಿಯನ್ನು ನಾನು ಸವಾಲಾಗಿ ಸ್ವೀಕರಿಸಿ ಮುನ್ನಡೆಯುತ್ತಿದ್ದು ಸಂಪೂರ್ಣ 5 ವರ್ಷಗಳ ಅವಧಿಯ ಸ್ಪಷ್ಟ ಬಹುಮತವನ್ನು ನೀಡಬೇಕೆಂದು ತಮ್ಮಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆಂದರು. ಜೆಡಿಎಸ್ ಈಗಾಗಲೇ “ಮಿಷನ್ 123” ಗುರಿಯ ಘೋಷಣೆ ಮಾಡಿದ್ದು ಕನಿಷ್ಠ 123 ಸ್ಥಾನಗಳಲ್ಲಿ ಜಯ ಸಾಧಿಸಿ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿಯುವ ಸಂಕಲ್ಪ ಮಾಡಿದೆ.
ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದನ್ನು ನೆನಪಿಸಿಕೊಂಡ ಕುಮಾರಸ್ವಾಮಿ ಹಾನಗಲ್ನ ಫಲಾನುಭವಿ ರೈತನೊಬ್ಬ ತನ್ನ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದನ್ನೂ ಸ್ಮರಿಸಿದರು. ಆದರೆ, ಮತ ನೀಡುವ ಸಮಯ ಬಂದಾಗ ಮಾತ್ರ ನಮ್ಮ ರೈತರು “ಕುಮಾರಣ್ಣ”ನನ್ನು ಮರೆತೇಬಿಡುತ್ತಾರೆಂದರು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಆಡಳಿತವನ್ನು ಈಗಾಗಲೇ ನೋಡಿರುವ ನೀವು ನನ್ನನ್ನು ನಂಬಿ ನಮ್ಮ ಪಕ್ಷಕ್ಕೆ ಒಂದೇ ಒಂದು ಅವಕಾಶ ಕೊಡಿ, “ಪಂಚರತ್ನ” ಕಾರ್ಯಕ್ರಮವನ್ನು ನಿಮ್ಮ ನಿರೀಕ್ಷೆಗೆ ತಕ್ಕಂತೆ ಕಾರ್ಯರೂಪಕ್ಕೆ ತರಲು ವಿಫಲನಾದಲ್ಲಿ ಇನ್ನೆಂದೂ ನಮ್ಮ ಪಕ್ಷದ ಪರವಾಗಿ ಮತಯಾಚನೆ ಮಾಡಲು ನಿಮ್ಮ ಬಳಿ ಬರುವುದಿಲ್ಲವೆಂದರು.
ರಾಜಕೀಯದ ಕನಿಷ್ಠ ಜ್ಞಾನವುಳ್ಳವರಿಗೂ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ಸಹಾಯಕರೊಬ್ಬರ ಮತ್ತು ನೀರಾವರಿ ಇಲಾಖೆ ಗುತ್ತಿಗೆದಾರರ ಮೇಲೆ ನಡೆದ ಆದಾಯ ತೆರಿಗೆ ದಾಳಿಗಳು ಯಡಿಯೂರಪ್ಪನವರನ್ನು ನಿಯಂತ್ರಿಸುವ ಉದ್ದೇಶದಿಂದಲೇ ನಡೆಸಲಾಗಿದೆಯೆಂಬುದು ತಿಳಿಯುತ್ತದೆ. ಇದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಯಡಿಯೂರಪ್ಪನವರು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು ಇದರ ಮಾಹಿತಿ ಬಿಜೆಪಿಯ ಕೇಂದ್ರದ ನಾಯಕರಿಗೂ ಇದ್ದು ಅವರು ಸೂಕ್ತ ಕ್ರಮಗಳನ್ನು ಕೈಗೊಂಡಿರುತ್ತಾರೆಂದು ತಿಳಿಸಿದರು.
JDS leader HD Kumarswamy declares 2023 will be his last assembly elections
ಇದನ್ನೂ ಓದಿ: NIMHANS Convocation: ನಿಮ್ಹಾನ್ಸ್ ಘಟಿಕೋತ್ಸವದಲ್ಲಿ ಕನ್ನಡಕ್ಕೆ 3ನೇ ಸ್ಥಾನ: ಕೆರಳಿದ ಹೆಚ್ ಡಿ ಕುಮಾರಸ್ವಾಮಿ
ಇದನ್ನೂ ಓದಿ: Politics: ಮನಗೂಳಿ ವ್ಯಕ್ತಿತ್ವಕ್ಕೆ ಮಸಿ ಬಳಿಯದಿರಿ: ಡಿಕೆ ಶಿವಕುಮಾರ್ ಹೇಳಿಕೆಗೆ ಎಚ್ಡಿ ಕುಮಾರಸ್ವಾಮಿ ಆಕ್ಷೇಪ
Discussion about this post