ಚಿಕ್ಕಮಗಳೂರು: “ಒಂದು ಸಣ್ಣ ಪರಂಪರೆ ಆಳಿದರೆ, ಕಾಲವೆಂಬುದು ನಾಳೆ ದೊಡ್ಡದೊಂದು ಬಲಿ ಕೇಳುತದೆ” ವಿಶ್ವದಲ್ಲಿ ನಾಶವಾಗುತ್ತಿರುವ ಮತ್ತು ಅಳಿವಿನಂಚಿಗೆ ತಳ್ಳಲ್ಪಡುತ್ತಿರುವ ಭಾಷೆಗಳ ಪೈಕಿ ಭಾರತೀಯ ಭಾಷೆಗಳದ್ದೆ ಸಿಂಹಪಾಲಾಗಿದ್ದು ಅದರಲ್ಲಿ ಕನ್ನಡ ಭಾಷೆಯು ಒಂದು ಎನ್ನುವುದು ಇದೊಂದು ವಿಪರ್ಯಾಸದ ಸಂಗತಿ ಎಂದು ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ, ಎಂ, ಮಂಜುನಾಥಸ್ವಾಮಿ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ವಸ್ತಾರೆ ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಯಾವುದೇ ಭಾಷೆ ಎನ್ನುವುದು, ಜನಾಂಗದ, ಸಮುದಾಯದ, ಸಂಸ್ಕೃತಿಯ ಸೂಚಕ, ಭಾಷೆ ಕಳೆದುಹೋದರೆ ಪರಂಪರೆಯೊಂದರ ಸೃಜನಶೀಲತೆ ಕಣ್ಮರೆಯಾಗಿ ಸಂಸ್ಕೃತಿಯೊಂದರ ಅವನತಿಗೆ ಕಾರಣವಾಗುತ್ತದೆ. ಗುಲಾಮಗಿರಿಯನ್ನು ಹೊತ್ತುಕೊಂಡೆ ಸಾಗುವುದು ಕನ್ನಡಿಗರ ಜಾಯಮಾನವಲ್ಲ, ಬಹು ಸಂಸ್ಕೃತಿಯ ಈ ನಾಡಿನಲ್ಲಿ ಏಕ ಸಂಸ್ಕೃತಿಯ ಪ್ರತಿಪಾದನೆ ಮಾಡುವವರು, ಶ್ರೇಷ್ಠ ಭಾರತದ ಪ್ರಚಾರಕರು ಕನ್ನಡದ ಅಸ್ಮಿತೆ, ಅ ಅಸ್ಮಿತಿಯಲ್ಲಿರುವ ಕನ್ನಡದ ಜ್ಯಾತ್ಯತೀತವಾದ ಬಹುತ್ವವೊಂದರ ಆತ್ಮವನ್ನು ಈ ಹೊತ್ತಿನಲ್ಲಿ ಅರಿಯಬೇಕಾಗಿದೆ ಎಂದರು.
ವಸ್ತಾರೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಧುಸೂದನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿ ಮಾತೃ ಭಾಷೆಗೂ ಕೃಷಿಗೂ ಸಂಬಂಧವಿದೆ, ಆಡು ಭಾಷೆಯೇ ಆಡಳಿತ ಭಾಷೆಯಾಗಬೇಕು, ಪಾರಂಪರಿಕ ಕೃಷಿ ಪದ್ಧತಿ ನಾಶವಾದರೆ ಒಂದು ಭಾಷೆ ನಾಶವಾಗುತ್ತಾ ಸಾಗುತ್ತದೆ, ಭಾಷೆ ನಾಶವಾದರೆ ಸಂಸ್ಕೃತಿ ಕಣ್ಮರೆಯಾಗುತ್ತದೆ, ಹಾಗಾಗಿ ಶ್ರೇಷ್ಠವಾದದ್ದನ್ನು ಉಳಿಸಿ ಬೆಳಸಿ ಮುಂದಿನ ತಲಾಮಾರಿಗೆ ಬಿಟ್ಟುಹೋಗದಿದ್ದರೆ ಭವಿಷ್ಯದ ಭಾರತ ನಮ್ಮನ್ನು ಕ್ಷಮಿಸುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಯುವ ಮುಖಂಡ ರಂಜಿತ್, ಗ್ರಾಮ ಪಂಚಾಯ್ತಿ ಸದಸ್ಯರಾದ ಆಶಾ, ಶಶಿಕಲಾ, ಮುಖ್ಯ ಶಿಕ್ಷಕಿ ಜೇಸಿಂತಾ,ಅಂಗನವಾಡಿ ಕಾರ್ಯಕರ್ತೆ ಶಾರದಮ್ಮ, ಇಂದುಮತಿ, ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಶಿಕ್ಷಕರಾದ ಅಸಿಫ್ ಅಲಿ ಕಾರ್ಯಕ್ರಮ ನಿರೂಪಿಸಿ, ನೇತ್ರಾವತಿ ಸ್ವಾಗತಿಸಿ, ಪವಿತ್ರ ವಂದಿಸಿದರು.
Discussion about this post