ಚಿಕ್ಕಮಗಳೂರು: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ನಾವೆಲ್ಲ ಕನ್ನಡಿಗರು ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಗೌರವವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಮೊದಲು, ನಂತರ ಬೇರೆ ಭಾಷೆ ಎಂಬ ನಿಲುವನ್ನು ಗಟ್ಟಿಯಾಗಿ ತಾಳಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದರು.
ತುಮಕೂರಿನ ಗುಬ್ಬಿಯಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಲುಕ್ಯ ಹೈಟೆಕ್ ಆಸ್ಪತ್ರೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ನಮ್ಮ ರಾಜ್ಯ ಸೇರಿದಂತೆ ದೇಶ ವಿದೇಶಗಳ ಹಲವೆಡೆ 66ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ತಮ್ಮೆಲ್ಲರಿಗೂ ರಾಜ್ಯೋತ್ಸವದ ಶುಭ ಹಾರೈಕೆಗಳು. ಇಂದಿಗೆ ಕನ್ನಡ ನಾಡು ಏಕೀಕರಣಗೊಂಡು 65 ವಸಂತಗಳು ತುಂಬಿವೆ. 1956 ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ನಾಡು ಹಾಗೂ ಬೇರೆ ಬೇರೆ ರಾಜ್ಯಗಳ ಜನರೊಂದಿಗೆ ಸೇರಿಹೋಗಿದ್ದ ಕನ್ನಡಿಗರು ಒಂದು ರಾಜ್ಯವಾಗಿ ಒಂದಾದ ದಿನ. ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಕರ್ನಾಟಕ ಏಕೀಕರಣಗೊಂಡಿತು. ಅದಕ್ಕೂ ಮೊದಲು ಮೈಸೂರು ಸಂಸ್ಥಾನ, ಮೈಸೂರು ರಾಜ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂದರು.
1973 ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ಕನ್ನಡ ರಾಜ್ಯೋತ್ಸವ, ಕರ್ನಾಟಕ ರಾಜ್ಯೋತ್ಸವ ಎಂಬುದಾಗಿ ಆಚರಣೆ ಮಾಡುತ್ತಿದ್ದೇವೆ. ನಾವೆಲ್ಲ ಕನ್ನಡಿಗರು ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಗೌರವವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಮೊದಲು, ನಂತರ ಬೇರೆ ಭಾಷೆ ಎಂಬ ನಿಲುವನ್ನು ಗಟ್ಟಿಯಾಗಿ ತಾಳಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡದಲ್ಲಿ ಮಾತನಾಡಿದರೆ, ಕನ್ನಡ ಮಾಧ್ಯಮದಲ್ಲಿ ಓದಿದರೆ ನಾವು ಎರಡನೇ ದರ್ಜೆ ನಾಗರಿಕರು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇಂಗ್ಲಿಷ್ ಭಾಷೆಯಲ್ಲಿ ಮಕ್ಕಳು ಮಾತನಾಡಿದರೆ ಹಲವು ತಂದೆ ತಾಯಂದಿರಿಗೆ ಒಂದು ರೀತಿ ಖುಷಿ. ನಾವು ಹುಟ್ಟಿನಿಂದ ಕಲಿತ ಭಾಷೆ ಕನ್ನಡ, ಓದುವಾಗ ಹಲವು ಭಾಷೆ ಕಲಿತಿರಬಹುದು. ಆ ಕಾರಣದಿಂದ ನಾವು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು.
ಕರ್ನಾಟಕದಲ್ಲಿ ಬೇರೆ ಬೇರೆ ಭಾಷಿಕರು ನೆಲೆಸಿದ್ದಾರೆ. ಅವರು ಕನ್ನಡ ಕಲಿಯುವ ವಾತಾವರಣ ನಿರ್ಮಾಣ ಮಾಡಬೇಕಿರುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಆದರೆ ಉದಾರವಾದಿಗಳಾದ ನಾವು ಕನ್ನಡಿಗರು ತಮಿಳಿನವರ ಜೊತೆ ತಮಿಳು, ತೆಲುಗಿನವರ ಜೊತೆ ತೆಲುಗು ಹೀಗೆ ಆಯಾ ಭಾಷೆಯ ಜನರ ಜೊತೆ ಅವರ ಭಾಷೆಯೊಂದಿಗೆ ಮಾತನಾಡುತ್ತೇವೆ. ಇದು ಸರಿಯಲ್ಲ. ಪ್ರಾಥಮಿಕ ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುತ್ತೇವೆ, ನಾವು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುತ್ತೇವೆ ಎಂಬ ಶಪಥವನ್ನು ಈ ದಿನ ಮಾಡಬೇಕು. ಅದೇ ನಾವು ನಾಡು ನುಡಿಗೆ ಸಲ್ಲಿಸುವ ಗೌರವ ಎಂದು ಕರೆ ನೀಡಿದರು.
ನಟ ಪುನೀತ್ ಸ್ಮರಿಸಿದ ಸಿದ್ದರಾಮಯ್ಯ
ಪುನೀತ್ ಅವರು ಡಾ. ರಾಜ್ಕುಮಾರ್ ಅವರ ಮಗ. ಮೊನ್ನೆ 29 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ ಸಾಯುವ ವಯಸ್ಸು ಆಗಿರಲಿಲ್ಲ, ಒಬ್ಬ ಪ್ರತಿಭಾವಂತ ನಟನಾಗಿದ್ದರು. ಕಲೆ ಅವರಲ್ಲಿ ರಕ್ತಗತವಾಗಿ ಬಂದಿತ್ತು. ಅವರ ತಂದೆ ದೇಶ ಕಂಡ ಶ್ರೇಷ್ಠ ನಟ, ಹಾಗಾಗಿಯೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿತ್ತು. ಇತ್ತೀಚೆಗೆ ತಮಿಳು ನಟ ರಜನೀಕಾಂತ್ ಗೆ ಸಿಕ್ಕಿದೆ. ಅವರೂ ಕೂಡ ಕನ್ನಡಿಗನೆ. ರಾಜ್ ಕುಮಾರ್ ದೊಡ್ಡ ಹೆಸರು ಮಾಡಿದ್ದರು. ಅತ್ಯಂತ ಸರಳ, ಸಜ್ಜನಿಕೆ, ವಿನಯವಂತಿಕೆ ಹೊಂದಿದ್ದ ವ್ಯಕ್ತಿ. ತಂದೆಯ ಗುಣಗಳು ಪುನೀತ್ ಅವರಲ್ಲಿತ್ತು. ಮನುಷ್ಯ ಬೆಳೆದಂತೆಲ್ಲಾ ಇತರರನ್ನು ಪ್ರೀತಿಸುವುದು ಹೆಚ್ಚಾಗಬೇಕು. ಇದು ನಿಜವಾದ ಮನುಷ್ಯತ್ವ. ಅದು ರಾಜ್ ಕುಮಾರ್ ಕುಟುಂಬಸ್ಥರಲ್ಲಿದೆ ಎಂದು ಸ್ಮರಿಸುವ ಮೂಲಕ ಪುನೀತ್ ರಾಜ್ಕುಮಾರ್ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಮನುಷ್ಯ ಎತ್ತರಕ್ಕೆ ಬೆಳೆದಂತೆ ಬೇರೆಯವರನ್ನು ಪ್ರೀತಿಸುವ ಮಾನವೀಯ ಮೌಲ್ಯವನ್ನು ರಾಜ್ ಕುಮಾರ್ ಬೆಳೆಸಿಕೊಂಡು ಬಂದಿದ್ದರು, ಅದನ್ನು ಪುನೀತ್ ಕೂಡ ಪಾಲನೆ ಮಾಡಿದ್ದರು. ಚಿಕ್ಕ ಪ್ರಾಯದಲ್ಲೇ ಅಪಾರ ಜನರ ಪ್ರೀತಿ ಗಳಿಸಿದ್ದ ನಟ ಪುನೀತ್. ಇದೇ ಕಾರಣಕ್ಕೆ 20 ಲಕ್ಷಕ್ಕೂ ಹೆಚ್ಚಿನ ಜನ ಅವರ ಪಾರ್ಥಿವ ಶರೀರವನ್ನು ನೋಡಿದರು. ಇಂತಹ ಸಜ್ಜನ, ಸರಳತೆಯ ಮನುಷ್ಯನ ಅಂತ್ಯಸಂಸ್ಕಾರ ನಿನ್ನೆ ನೆರವೇರಿತು.
ನಾನು ಕೂಡ ಆ ಸಂದರ್ಭದಲ್ಲಿ ಹಾಜರಿದ್ದು, ಅಂತಿಮ ನಮನ ಅರ್ಪಿಸಿದ್ದೇನೆ. ಅವರ ಸಾವಿನಿಂದ ಕೋಟ್ಯಂತರ ಜನ ಆಘಾತಗೊಂಡಿದ್ದಾರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ನೂ ಕೆಲವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಷ್ಟು ಅಪಾರ ಪ್ರಮಾಣದ ಜನರ ಪ್ರೀತಿ ಗಳಿಸಿದ್ದ ಪುನೀತ್ ದುರಾದೃಷ್ಟವಶಾತ್ ಮೊನ್ನೆ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಗುಬ್ಬಿಗೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ನಾಗರಿಕರು ಮತ್ತು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದರೂ ಜನ ಬಹಳ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ತಮಗೆಲ್ಲ ನಾನು ಚಿರಋಣಿ ಎಂದು ಸ್ಮರಿಸಿದರು.
ನೂತನ ಆಸ್ಪತ್ರೆ ಕುರಿತು ಮಾತನಾಡಿ ಡಾ. ಮುರುಳೀಧರ ಹಾಗೂ ನಾಗಭೂಷಣ ಕುಟುಂಬದಲ್ಲಿ ಆರು ಮಂದಿ ವೈದ್ಯರಿದ್ದಾರೆ. ಅವರೆಲ್ಲರೂ ಸೇರಿ ಚಾಲುಕ್ಯ ಹೈಟೆಕ್ ಆಸ್ಪತ್ರೆಯನ್ನು ಆರಂಭ ಮಾಡಿದ್ದಾರೆ. ಮುರುಳೀಧರ ಅವರು ನನ್ನನ್ನು ಉದ್ಘಾಟಿಸುವಂತೆ ಕರೆದಿದ್ದರು. ಈ ಕಾರಣದಿಂದ ನಿಮ್ಮನ್ನೆಲ್ಲ ನೋಡುವ ಅವಕಾಶ ಸಿಕ್ಕಿದೆ. ರಾಜ್ಯೋತ್ಸವ ದಿನದಂದು ಆಸ್ಪತ್ರೆ ಉದ್ಘಾಟನೆ ಮಾಡಿರುವುದು ಹೆಚ್ಚಿನ ಸಂತೋಷ ಕೊಟ್ಟಿದೆ. ಆಸ್ಪತ್ರೆಯ ಹತ್ತು ಬೆಡ್ ಗಳನ್ನು ಬಡ ರೋಗಿಗಳ ಉಚಿತ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದೇವೆ ಎಂದಿದ್ದಾರೆ. ಅವರ ಈ ನಿರ್ಧಾರವನ್ನು ನಾನು ಸಂತೋಷದಿಂದ ಸ್ವಾಗತಿಸುತ್ತೇನೆ. ರೋಗ ಕೇವಲ ಶ್ರೀಮತರಿಗಷ್ಟೇ ಬರಲ್ಲ, ಬಡವರಿಗೂ ಬರುತ್ತದೆ. ಆದರೆ ಬಹಳಷ್ಟು ಬಡವರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಶಕ್ತಿ ಇರುವುದಿಲ್ಲ. ಅಂತಹ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿದರೆ ವೈದ್ಯ ವೃತ್ತಿಯನ್ನು ಆರಿಸಿಕೊಂಡದ್ದು ಸಾರ್ಥಕವಾಗುತ್ತದೆ ಎಂದರು.
ಕೋವಿಡ್ ವೇಳೆ ರಾಜ್ಯದ ನಡೆಯ ಬಗ್ಗೆ ಸಿದ್ದು ಕಿಡಿ
ಕೊರೊನಾ ಬಂದಾಗ ಎರಡನೇ ಅಲೆಯಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದ ಲಕ್ಷಾಂತರ ಜನ ಸಾವನ್ನಪ್ಪಿದರು. ಸಮೀಕ್ಷೆಯೊಂದರ ಪ್ರಕಾರ ರಾಜ್ಯದಲ್ಲಿ ಕನಿಷ್ಠ 4 ಲಕ್ಷ, ದೇಶದಲ್ಲಿ 50 ಲಕ್ಷ ಮಂದಿ ಸತ್ತಿದ್ದಾರೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 36 ಜನ ಸತ್ತಿದ್ದರು. ಆರೋಗ್ಯ ಸಚಿವ ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ವೈದ್ಯರ ಜೊತೆ ಚರ್ಚಿಸಿ, ಕೇವಲ ಮೂರು ಜನ ಸತ್ತಿದ್ದಾರೆ ಎಂದು ಮಾಧ್ಯಮದೆದುರು ಹೇಳಿದರು. ಮರುದಿನ ನಾನು ಹೋಗಿ ಕೇಳಿದಾಗ ಸತ್ತವರು ಮೂರಲ್ಲ, 36 ಎಂದು ಅಲ್ಲಿನ ವೈದ್ಯರೇ ಹೇಳಿದರು. ಇವರ ಸಾವಿಗೆ ಕಾರಣ ಯಾರು? ಸರ್ಕಾರ ಅಲ್ಲವೇ? ಸರ್ಕಾರದ ಪರವಾಗಿ ಸಾವಿನಲ್ಲೂ ಸುಳ್ಳು ಹೇಳುವುದಕ್ಕಿಂತ ಅಮಾನವೀಯ ಕೃತ್ಯ ಯಾವುದಿಲ್ಲ. ಅದಕ್ಕೆ ಬಿಜೆಪಿ ಸರ್ಕಾರವನ್ನು ಅಧಿವೇಶನದಲ್ಲಿ ಕೊಲೆಗಡುಕ ಸರ್ಕಾರ ಎಂದು ಕರೆದಿದ್ದೆ ಅಂತಾ ಕಿಡಿಕಾರಿದರು.
ಕೊರೊನಾ ಸಂದರ್ಭದಲ್ಲಿ ಜನರಿಗೆ ನೆರವಾಗುವ ಮೂಲಕ ಬಹಳಷ್ಟು ಕಾಂಗ್ರೆಸ್, ಜೆಡಿಎಸ್ ಹಾಗೂ ಕೆಲವು ಬಿಜೆಪಿ ಶಾಸಕರು ಸರ್ಕಾರ ಮಾಡಬೇಕಾದ ಕೆಲಸ ಮಾಡಿದ್ದಾರೆ. ಶ್ರೀನಿವಾಸ್ ಅವರು ಕೂಡ ಲಾಕ್ ಡೌನ್ ವೇಳೆ ಜನರ ನೆರವಿಗೆ ಧಾವಿಸಿ, ಅವರಿಗೆ ಕೈಲಾದ ಸಹಾಯ ಮಾಡಿದ್ದರು. ಇದೇ ಕಾರಣಕ್ಕಾಗಿ ಅವರು ಕ್ಷೇತ್ರದಲ್ಲಿ ಜನಪ್ರಿಯ ನಾಯಕರಾಗಿದ್ದಾರೆ. ಈ ಹಿಂದೆಯೇ ಒಂದೆರಡು ಬಾರಿ ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಗೆ ಬರುವಂತೆ ಆಹ್ವಾನ ನೀಡಿದ್ದೆ. ಆದರೆ ಜೆಡಿಎಸ್ ಬಿಟ್ಟು ಬರಲ್ಲ ಎಂದು ಹೇಳಿದ್ದರು. ಮೊನ್ನೆ ಕುಮಾರಸ್ವಾಮಿ ಅವರು ಗುಬ್ಬಿಗೆ ಬಂದು ಶ್ರೀನಿವಾಸ್ ಅವರಿಗೆ ಹೇಳದೆ ಸಭೆ ನಡೆಸಿದ್ದಾರೆ. ಇಲ್ಲಿಂದ ನಾಲ್ಕು ಬಾರಿ ಶಾಸಕರು, ಮಂತ್ರಿ ಕೂಡ ಆಗಿದ್ದವರಿಗೆ ಸಭೆಗೆ ಕರೀಬೇಕು ಅಲ್ವಾ? ಇದನ್ನೇ ನಾನು ಹೇಳಿದ್ರೆ ನನ್ನ ಮಾತಿಗೆ ಜಾತಿ ಬಣ್ಣ ಕಟ್ಟುತ್ತಾರೆ.
ನಾನು ಮನುಷ್ಯ, ಎಲ್ಲಾ ಜಾತಿ ಧರ್ಮದವರನ್ನು ಪ್ರೀತಿಸುತ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನಾಲ್ಕು ಕೋಟಿಗೂ ಅಧಿಕ ಜನರಿಗೆ ಅನ್ನಭಾಗ್ಯದ ಅಕ್ಕಿ, ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಹಾಲು, ಕೃಷಿಭಾಗ್ಯ, ಕ್ಷೀರಧಾರೆ, ಸಾಲಮನ್ನಾ ಹೀಗೆ ಜಾತಿ ಧರ್ಮಗಳನ್ನು ಮೀರಿ ಜನರಿಗೆ ನೆರವಾಗಿದ್ದೆ. ಬಡತನಕ್ಕೆ ಜಾತಿ ಇಲ್ಲ. ಬಡತನ ಎಲ್ಲರಿಗೂ ಒಂದೇ. ಹಸಿವಿನಲ್ಲಿ ಜಾತಿ ಇದೆಯಾ? ಬಡವರಿಗೊಂದು ರೀತಿ, ಶ್ರೀಮಂತರಿಗೊಂದು ರೀತಿ ಹಸಿವಾಗುತ್ತಾ? ಅನ್ನ ಭಾಗ್ಯ ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ನಲ್ಲಿ ಏಕಿಲ್ಲ? ಎಂದು ಪ್ರಶ್ನಿಸಿದರು.
ಬೆಲೆ ಏರಿಕೆಗೆ ಸಿದ್ದು ಆಕ್ರೋಶ
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಇದ್ದರೆ ಕರ್ನಾಟಕದಲ್ಲಿ ಸ್ವರ್ಗ ಸೃಷ್ಟಿಯಾಗುತ್ತೆ ಎಂದು ಹೇಳಿದ್ದರು. ಈಗ ನರಕ ಸೃಷ್ಟಿಯಾಗಿದೆ. ಬಡವರಿಗೆ ಔಷಧಿ, ಆಂಬುಲೆನ್ಸ್, ಬೆಡ್ ಕೊಡಿಸುವ ಕೆಲಸ ಮಾಡಿದ್ದಾರೆ. ಇದಕ್ಕಿಂತ ಪುಣ್ಯದ ಕಾರ್ಯ ಬೇರೆ ಇಲ್ಲ. ಇಷ್ಟಲ್ಲಾ ಒಳ್ಳೆ ಕೆಲಸ ಮಾಡಿದರೂ ಜೆಡಿಎಸ್ ನವರು ಅವರನ್ನು ಪಕ್ಷದಿಂದ ಹೊರಕ್ಕೆ ತಳ್ಳುತ್ತಿದ್ದಾರೆ. ಕಾಂಗ್ರೆಸ್ ಸೇರುವುದು ಬಿಡುವುದು ಅವರಿಗೆ ಬಿಟ್ಟದ್ದು. ನಾನು ಅವರಿಗೆ ಆಹ್ವಾನ ನೀಡುವುದು ನೀಡಿದ್ದೇನೆ.
ಯಡಿಯೂರಪ್ಪ ಅವರು ಹಣ ಹಾಕಿ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ರು, ಕೊನೆಗೆ ಅವರನ್ನೇ ಮೋದಿ ಮತ್ತು ಶಾ ಸೇರಿ ಅಧಿಕಾರದಿಂದ ಕಿತ್ತು ಬಿಸಾಕಿದರು. ಪಾಪ ಅವರು ಕಣ್ಣೀರು ಹಾಕ್ತಾ ರಾಜೀನಾಮೆ ನೀಡಿದರು. ಮೋದಿ ಮೋದಿ ಎಂದವರಿಗೆ ತಿರುಪತಿ ತಿಮ್ಮಪ್ಪನ ಮೂರು ನಾಮ ಹಾಕಿದ್ದಾರೆ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಹೇಳಿ ಅಧಿಕಾರಕ್ಕೆ ಬಂದು, ಉದ್ಯೋಗ ಕೇಳಿದವರಿಗೆ ಪಕೋಡ ಮಾರಲು ಹೋಗಿ ಎಂಬ ಸಲಹೆ ಕೊಡ್ತಿದ್ದಾರೆ. ಈಗ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ಇದಕ್ಕೆ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು ಕಾರಣ. ಅಚ್ಚೇ ದಿನ್ ಬರುತ್ತೆ ಅಂತ ಹೇಳ್ತಿದ್ರು, ಏಳು ವರ್ಷ ಆದರೂ ಅಚ್ಚೇ ದಿನ್ ಬಂದಿಲ್ಲ.
ಜನ ಸುಮ್ಮನಿದ್ದಾರೆ, ಸಿದ್ದರಾಮಯ್ಯ ಮಾತ್ರ ವಿರೋಧ ಮಾಡೋದು. ಜನರಿಗೆ ಬೆಲೆಯೇರಿಕೆ ಇಂದ ಸಮಸ್ಯೆ ಆಗಿಲ್ಲ, ಹಾಗಾಗಿ ಇನ್ನೂ ಬೆಲೆ ಹೆಚ್ಚಿಸಬಹುದು ಎಂದು ಕೇಂದ್ರ ಸಚಿವ ಖೂಬಾ ಅವರು ಹೇಳಿದ್ದಾರೆ. ಇದು ನಿಜವೇ? ನಿಮಗೆ ಬೆಲೆಯೇರಿಕೆ ಇಂದ ಸಮಸ್ಯೆ ಆಗಿಲ್ಲವೇ? ಜನರನ್ನು ಪ್ರಶ್ನಿಸಿದರು.
ಒಂದು ವೇಳೆ ಶ್ರೀನಿವಾಸ್ ಅವರು ನಮ್ಮ ಪಕ್ಷಕ್ಕೆ ಸೇರಿದರೆ ಅವರನ್ನೇ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಬಸವಕಲ್ಯಾಣದಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿ ಹಾಕಿದ್ದರಿಂದ ಆತ 7,500 ಮತ ಪಡೆದರು, ಇದರಿಂದ ಕಾಂಗ್ರೆಸ್ ಗೆ ನಷ್ಟವಾಗಿತ್ತು. ಈಗಲೂ ಅದೇ ರೀತಿ ಹಾನಗಲ್ ಮತ್ತು ಸಿಂದಗಿಯಲ್ಲಿ ಮುಸ್ಲಿಂರನ್ನು ನಿಲ್ಲಿಸಿದ್ದಾರೆ. ಸೋಲುವ ಕಡೆ ಜೆಡಿಎಸ್ ನವರು ಮುಸ್ಲಿಂರಿಗೆ ಟಿಕೇಟ್ ನೀಡ್ತಾರೆ, ಗೆಲ್ಲುವ ಕಡೆ ಕುಟುಂಬದವರಿಗೆ ಕೊಡ್ತಾರೆ ಎಂದು ಟೀಕಿಸಿದರು.
ಬಿಜೆಪಿ ಕೋಮುವಾದಿ ಪಕ್ಷ. ಧರ್ಮದ ಹೆಸರಿನಲ್ಲಿ ಅಧಿಕಾರ ಮಾಡ್ತಾರೆ. ಧರ್ಮ ಒಂದರಿಂದಲೇ ಪಾಪ ಬಡವರ ಹೊಟ್ಟೆ ತುಂಬೋದು ಹೇಗೆ? ಅಭಿವೃದ್ಧಿ ಕೆಲಸ ಆಗಬೇಕಲ್ಲವೇ? ಆದ್ದರಿಂದ ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಹಾಕಬೇಕು ಎಂದು ಜನರಲ್ಲಿ ಮನವಿ ಮಾಡಿದರು.
Discussion about this post