ಬೆಂಗಳೂರು: ಕೋವಿಡ್ನಿಂದ ಬಳಲಿದ ಮಾತ್ರಕ್ಕೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಪೆರೋಲ್ ವಿಸ್ತರಿಸಲಾಗದು ಎಂದು ಹೈಕೋರ್ಟ್ ಹೇಳಿದೆ. ಮಾ.18ರಿಂದ ಪೆರೋಲ್ನಲ್ಲಿರುವ ರಿಷಿಕುಮಾರ್ ಅವರ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ಪೀಠವು ವಜಾ ಮಾಡಿದೆ.
ಅಪರಾಧಿಯು ಕೋವಿಡ್ನಿಂದ ಬಳಲುತ್ತಿದ್ದು, ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಲು ಅವರಿಗೆ ಮತ್ತೊಮ್ಮೆ ಪೆರೋಲ್ ವಿಸ್ತರಿಸಬೇಕು ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಲಾಗದು. ರೋಗಕ್ಕೆ ತುತ್ತಾಗಿರುವ, ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ಜೈಲು ಮತ್ತು ಇತರೆ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳು ದೊರೆಯುತ್ತವೆ ಎಂದು ಹೆಚ್ಚುವರಿ ಸರಕಾರಿ ವಕೀಲರು ಸಮರ್ಥಿಸಿದ್ದಾರೆ ಎಂದು ಪೀಠ ಹೇಳಿದೆ.
ಅರ್ಜಿದಾರರು ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದಾರೆ. ಒಂದು ತಿಂಗಳಿಗೆ ಅನ್ವಯವಾಗುವಂತೆ ಆರೋಪಿಯನ್ನು ಮಾರ್ಚ್ 19ರಂದು ಕಾರಾಗೃಹ ಪೊಲೀಸ್ ಮಹಾನಿರ್ದೇಶಕರು ಮತ್ತು ಕೇಂದ್ರೀಯ ಕಾರಾಗೃಹದ ಮುಖ್ಯ ಮೇಲ್ವಿಚಾರಕರ ಆದೇಶದ ಹಿನ್ನೆಲೆಯಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.
ಆ.5ರಂದು ಅಪರಾಧಿಗೆ ಪೆರೋಲ್ ವಿಸ್ತರಿಸಲಾಗಿತ್ತು. ಅಲ್ಲದೇ, ಆ.31ರಂದು ಎರಡನೆ ಬಾರಿಯೂ ಅಪರಾಧಿಯು ಪೆರೋಲ್ ವಿಸ್ತರಣೆಯ ಲಾಭ ಪಡೆದಿದ್ದು, ಅದು ಅ.5ಕ್ಕೆ ಅಂತ್ಯವಾಗಿತ್ತು. ಈ ನಡುವೆ ಅಪರಾಧಿಯು ಮೊದಲನೆ ಪ್ರತಿವಾದಿಗೆ ಎರಡು ತಿಂಗಳ ಕಾಲ ಪೆರೋಲ್ ವಿಸ್ತರಿಸುವಂತೆ ಸೆ.28ರಂದು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಅಪರಾಧಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.
ಜೈಲಿನಲ್ಲಿರುವವರಿಗೆ ಮಾನವೀಯ ನೆಲೆಯಲ್ಲಿ ತಾತ್ಕಾಲಿಕ ವಿರಾಮ ಕಲ್ಪಿಸುವುದಕ್ಕಾಗಿ ಪೆರೋಲ್ ನಿಬಂಧನೆಗಳನ್ನು ರೂಪಿಸಲಾಗಿದೆ. ಅಪರಾಧಿಯನ್ನು ಪೆರೋಲ್ನ ಮೇಲೆ ಬಿಡುಗಡೆ ಮಾಡುವುದು ಬಹುಮುಖ್ಯವಾಗಿ ತನ್ನ ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮತ್ತು ನಾಗರಿಕ ಸಮಾಜದ ಜೊತೆ ಸಂಪರ್ಕ ನಿರ್ವಹಣೆ ಮಾಡಿಕೊಂಡು ಹೋಗಲು.
ಆರೋಗ್ಯದ ದೃಷ್ಟಿಯಿಂದಲೂ ಪೆರೋಲ್ ನೀಡಲಾಗುತ್ತದೆ. ಪೆರೋಲ್ ಅನ್ನು ಹಕ್ಕು ಎನ್ನುವ ರೀತಿಯಲ್ಲಿ ಪ್ರತಿಪಾದಿಸಲಾಗದು. ಪದೇ ಪದೇ ಪೆರೋಲ್ ವಿಸ್ತರಿಸುವುದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಆಡಳಿತಕ್ಕೆ ಹಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅಲ್ಲದೇ, ಅರ್ಜಿದಾರರು ಈಗಾಗಲೇ ಹಲವು ಬಾರಿ ಪೆರೋಲ್ ವಿಸ್ತರಣೆಯ ಲಾಭ ಪಡೆದಿದ್ದಾರೆ ಎಂದು ಪೀಠ ಹೇಳಿದೆ.
ಹೀಗಾಗಿ, ಅ.11ರಂದು ಮಧ್ಯಾಹ್ನ 3.30ರ ಒಳಗೆ ಜೈಲಿಗೆ ಬಂದು ವರದಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ, ಬಂಧಿಸಿ ಜೈಲಿಗೆ ತಳ್ಳಲಾಗುವುದು ಎಂದು ಪೀಠವು ಆದೇಶದಲ್ಲಿ ಹೇಳಿದೆ.
Discussion about this post