ಮುಂಬೈ: ದಿನ ದಿನಕ್ಕೆ ಹೊಸ ತಿರುವು ಪಡೆಯುತ್ತಿರುವ ವಿಹಾರ ನೌಕೆಯಲ್ಲಿ ಡ್ರಗ್ಸ್ ಸೇವಿಸಿದ ಪ್ರಕರಣದ ಸಂಬಂಧ ಮಹಾರಾಷ್ಟ್ರದ ಸಚಿವ ಮತ್ತು ಎನ್ಸಿಪಿ ಮುಖಂಡ ನವಾಬ್ ಮಲಿಕ್ ಹೊಸ ಆರೋಪ ಮಾಡಿದ್ದಾರೆ. ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ನನ್ನು ಡ್ರಗ್ಸ್ ಕೇಸ್ನಲ್ಲಿ ಸಿಲುಕಿಸುವ ದೊಡ್ಡ ಸಂಚನ್ನು ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ನಡೆಸಿದ್ದಾರೆ. ಇದಕ್ಕೆ ಮಾದಕವಸ್ತು ನಿಯಂತ್ರಣ ದಳದ (ಎನ್ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಸಾಥ್ ನೀಡಿದ್ದಾರೆ ಎಂದು ಮಲಿಕ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದ್ದಾರೆ.
ಮೂಲತಃ ಇದು ಹಣಕ್ಕಾಗಿ ಆರ್ಯನ್ ಖಾನ್ರನ್ನು ಅಪಹರಿಸುವ ಪಿತೂರಿಯ ಪ್ರಕರಣ. ಇದರ ಸೂತ್ರಧಾರ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್. ಆದರೆ, ಇದನ್ನು ಒಂದು ಸೆಲ್ಫಿ ಹಾಳು ಮಾಡಿತು ಎಂದಿದ್ದಾರೆ.
ಮುಂಬೈನಿಂದ ಗೋವಾಕ್ಕೆ ಅ.2ರಂದು ಹೋಗುತ್ತಿದ್ದ ಐಷಾರಾಮಿ ನೌಕೆಯಲ್ಲಿ ಪಯಣಿಸಲು ಆರ್ಯನ್ ಖಾನ್ ಟಿಕೆಟ್ ಖರೀದಿಸಿರಲಿಲ್ಲ. ಆದರೆ, ಪ್ರತೀಕ್ ಗಾಬಾ ಮತ್ತು ಅಮಿರ್ ಫರ್ನೀಚರ್ವಾಲಾ ಅವರ ಬಲವಂತದಿಂದಾಗಿ ಹೋಗಿದ್ದರು. ಮೋಹಿತ್ ಕಾಂಬೋಜ್ ಸೂಚನೆಯಂತೆ ಅವರು ಆರ್ಯನ್ನನ್ನು ಕರೆತಂದಿದ್ದರು.
ಆರ್ಯನ್ ನೌಕೆ ಬಂದ ಮೇಲೆ 25 ಕೋಟಿ ರೂ. ಬೇಡಿಕೆ ಇರಿಸಲಾಯಿತು. ಚೌಕಾಸಿ ನಡೆದು 18 ಕೋಟಿ ರೂ.ಗೆ ಕುದುರಿತು. 50 ಲಕ್ಷ ರೂ. ಮುಂಗಡವಾಗಿ ಪಡೆಯಲಾಯಿತು. ಈ ಮಧ್ಯೆ, ಖಾಸಗಿ ಪತ್ತೇದಾರ ಕೆ.ಪಿ.ಗೋಸಾವಿ, ಆರ್ಯನ್ ಖಾನ್ ಜತೆಗೆ ತೆಗೆದುಕೊಂಡ ಸೆಲ್ಫಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕಾಂಬೋಜ್ ನಡೆಸಿದ ಪಿತೂರಿ ವಿಲವಾಯಿತು. ನಂತರ ಆರ್ಯನ್ ಮತ್ತು ಇತರರನ್ನು ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಬಂಧಿಸುವ ನಾಟಕ ಆರಂಭವಾಯಿತು ಎಂದು ಮಲಿಕ್ ಹೇಳಿದ್ದಾರೆ.
ಸಚಿವ ಅಸ್ಲಾಂ ಶೇಖ್ ಅವರ ಪುತ್ರ ಖಾಶಿಸ್ ಖಾನ್ರನ್ನೂ ಅಪಹರಣ ಮಾಡಲು ಹಡಗಿಗೆ ಕರೆತರಬೇಕೆಂಬ ಸಂಚನ್ನು ಮಾಡಲಾಗಿತ್ತು. ಈ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಅಪಮಾನ ಮಾಡುವ ಹುನ್ನಾರವನ್ನು ಕಾಂಬೋಜ್ ಮಾಡಿದ್ದರು ಎಂದು ಮಲಿಕ್ ತಿಳಿಸಿದ್ದಾರೆ.
ಕಾಗಕ್ಕ, ಗುಬ್ಬಕ್ಕನ ಕಥೆ
ಸಚಿವ ನವಾಬ್ ಮಲಿಕ್ ಆರೋಪವನ್ನು ಬಾಲಿಶ ಎಂದು ಹೇಳಿರುವ ಬಿಜೆಪಿ ಮುಖಂಡ ಮೋಹಿತ್ ಕಾಂಬೋಜ್, ಈ ಕಾಗಕ್ಕ, ಗುಬ್ಬಕ್ಕನ ಕಥೆ ನಂಬಲಾರ್ಹವೆ? ಇದರಲ್ಲಿ ಏನಾದರೂ ತರ್ಕ, ಕಾರ್ಯಾಕಾರಣ ಸಂಬಂಧ ಇದೆಯೇ? ಈ ಪ್ರಕರಣ ನಡೆದಾಗಿನಿಂದ ಮಲಿಕ್, ಅಧಿಕಾರಿ ಸಮೀರ್ ವಾಖೆಂಡೆ ಮತ್ತು ತಮ್ಮನ್ನು ಗುರಿಯಾಗಿಟ್ಟುಕೊಂಡು ಪುಂಖಾನುಪುಂಖ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ನಟ ಶಾರುಕ್ ಖಾನ್ರಿಂದ ಹಣ ವಸೂಲಿ ಮಾಡಲು ಮಹಾರಾಷ್ಟ್ರದ ಸಚಿವರು ಹೂಡುತ್ತಿರುವ ಆಟ ಎಂದು ಮೋಹಿತ್ ಪ್ರತ್ಯಾರೋಪ ಮಾಡಿದ್ದಾರೆ.
ಮಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ
ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ವಿರುದ್ಧ ಎನ್ಸಿಪಿ ಅಧಿಕಾರಿ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನದೇವ್ ಕಚ್ರುಜಿ ವಾಂಖೆಡೆ ಮಾನನಷ್ಟ ದಾವೆ ಹೂಡಿದ್ದಾರೆ. ಇಲ್ಲಸಲ್ಲದ ಆರೋಪ ಮಾಡಿ ತಮ್ಮ ಮಗ ಮತ್ತು ತಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿರುವ ಅವರಿಂದ 1.25 ಕೋಟಿ ರೂಪಾಯಿ ಪರಿಹಾರ ಕೊಡಿಸಿಸುಂತೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಪುತ್ರ ಸಮೀರ್ ಮತ್ತು ತಮ್ಮ ಕುಟುಂಬದ ವಿರುದ್ಧ ಯಾವುದೇ ಹೇಳಿಕೆ, ಬರಹಗಳನ್ನು ಪ್ರಟಿಸದಂತೆ ತಡೆ ನೀಡಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ.
Plan to kidnap Aran khan ruined by selfie Alleges Navab Malik
ಇದನ್ನೂ ಓದಿ: ಕಡೆಗೂ ಬಿಡುಗಡೆ: 28 ದಿನಗಳ ಬಳಿಕ ಮನೆಗೆ ಬಂದ ಆರ್ಯನ್ ಖಾನ್
Discussion about this post