ಬೆಂಗಳೂರು: ಖ್ಯಾತ ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು ಮಂಗಳವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಬೆಂಗಳೂರು ಎಚ್ಎಸ್ಆರ್ ಲೇಔಟ್ನಲ್ಲಿರುವ ಮಗಳು ಸುಸ್ಮಿತಾ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಸಂಜೆ 5.30ರವರೆಗೂ ಅವಕಾಶ ಕಲ್ಪಿಸಲಾಗಿದೆ. ದೇಹವನ್ನು ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ದಾನ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಕುಟುಂಬ ಸದಸ್ಯರಿಂದ ಅಧಿಕೃತ ಪ್ರಕಟಣೆ ಹೊರಬರಬೇಕಿದೆ.
ಬೆಂಗಳೂರಿನಲ್ಲಿ 1937ರಲ್ಲಿ ಜನಿಸಿದ್ದ ರಾಜೇಶ್ವರಿ ಅವರು 1966ರಲ್ಲಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಮದುವೆಯಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂಎ ಓದುತ್ತಿದ್ದಾಗ ತೇಜಸ್ವಿ ಅವರ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.
ಹೊಲಿಗೆ, ಅಂಚೆಚೀಟಿ ಸಂಗ್ರಹ, ಕ್ರೋಶ ಹಾಕುವುದು ರಾಜೇಶ್ವರಿ ಅವರ ನೆಚ್ಚಿನ ಹವ್ಯಾಸವಾಗಿತ್ತು. ರಾಜೇಶ್ವರಿ ಅವರು ಬರೆದಿರುವ ‘ನನ್ನ ತೇಜಸ್ವಿ’ ಪುಸ್ತಕ ಈವರೆಗೆ ಐದು ಮುದ್ರಣಗಳನ್ನು ಕಂಡಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಎನ್ನುವ ಅವರ ಮತ್ತೊಂದು ಪುಸ್ತಕವೂ ಜನಪ್ರಿಯವಾಗಿದೆ. ಮೂಡಿಗೆರೆ ತಾಲ್ಲೂಕಿನ ಕಾಫಿತೋಟ ಮತ್ತು ಮನೆ ‘ನಿರುತ್ತರ’ದಲ್ಲಿ ತೇಜಸ್ವಿ ಅವರೊಂದಿಗೆ ವಾಸವಿದ್ದರು. ತೇಜಸ್ವಿ ನಿಧನದ ನಂತರವೂ ಅಲ್ಲಿಯೇ ವಾಸವಿದ್ದ ರಾಜೇಶ್ವರಿ ಅವರು ತೇಜಸ್ವಿ ಅವರ ಕೃಷಿ, ಸಾಹಿತ್ಯ ಹಾಗೂ ಹತ್ತಾರು ಹವ್ಯಾಸಗಳಿಗೆ ಹೆಗಲೆಣೆಯಾಗಿದ್ದವರು.
Rajeshwari Tejaswi Wife of Noted Writer KP Poornachandra Tejaswi Died in Bengaluru
ಇದನ್ನೂ ಓದಿ: ಮೊಗೆದಷ್ಟೂ ಅರಿವು, ತಿಳಿದಷ್ಟು ಬೆರಗು: ಪೂರ್ಣ ಚಂದ್ರ ತೇಜಸ್ವಿ ಸೊಬಗು !
Discussion about this post