ಬೆಂಗಳೂರು : ದಿನ ಕಳೆದಂತೆ ಓಮಿಕ್ರಾನ್ ಜೊತೆಗೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಳವಾಗುತ್ತಿದೆ. ಹೊಸ ವರ್ಷದ ಮೊದಲ ದಿನವೇ ಬರೋಬ್ಬರಿ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಈ ನಡುವಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಜೊತೆಗೆ ಕೊರೊನಾ ಹೆಚ್ಚಳ ಪೋಷಕರಲ್ಲಿ ಆತಂಕ ಮೂಡಿಸಿದ್ದು, ಮತ್ತೆ ಶಾಲೆಗಳು ಬಂದ್ ಅಗಲಿದೆ. ಈಗಾಗಲೇ ಶಾಲೆ, ಕಾಲೇಜುಗಳನ್ನು ಬಂದ್ ಮಾಡುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಸಲಹೆಯನ್ನು ನೀಡಿದೆ.
ಕರ್ನಾಟಕದಲ್ಲಿ ದಿನಂಪ್ರತಿ ಕೊರೊನಾ ಸೋಂಕಿನ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ.
ರಾಜ್ಯದಲ್ಲಿ ಹೊಸ ವರ್ಷದ ಮೊದಲ ದಿನವೇ ಬರೋಬ್ಬರಿ 1033 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 810 ಮಂದಿಗೆ ಸೋಂಕು ದೃಢಪಟ್ಟಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 86, ಮೈಸೂರಿನಲ್ಲಿ 29, ಉಡುಪಿ ಯಲ್ಲಿ 28, ಮಂಡ್ಯದಲ್ಲಿ 23 ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 30,08,370 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ 9386 ಸಕ್ರೀಯ ಕೋವಿಡ್ ಪ್ರಕರಣಗಳಿವೆ. ಅಲ್ಲದೇ ಇದುವರೆಗೆ ಒಟ್ಟು 38,340 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣ ಹೆಚ್ಚುತ್ತಿರುವ ಜೊತೆಗೆ ಪಾಸಿಟಿವಿಟಿ ರೇಟ್ ಕೂಡ ಏರಿಕೆ ಕಾಣುತ್ತಿದೆ. ಕರ್ನಾಟಕದಲ್ಲಿ ಸದ್ಯ ಶೇ.0.86 % ಕೊರೊನಾ ಪಾಸಿಟಿವಿಟಿ ದರವಿದ್ದು, ಮರಣ ಪ್ರಮಾಣ ಶೇ.0.48% ದಷ್ಟಿದೆ. ಕರ್ನಾಟಕದಲ್ಲಿ ಕೋವಿಡ್, ಕೋವಿಡ್ ರೂಪಾಂತರಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಜೊತೆ ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಸಾಧ್ಯತೆಯಿದೆ. ಅದ್ರಲ್ಲೂ ಕಳೆದ ಒಂದು ವಾರದಿಂದಲೂ ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯನ್ನು ಕಾಣುತ್ತಲೇ ಇದೆ. ಅದ್ರಲ್ಲೂ ರಾಜಧಾನಿ ಬೆಂಗಳೂರು ಮತ್ತೆ ಕೊರೊನಾ ಹಾಟ್ಸ್ಪಾಟ್ ಆಗುವ ಲಕ್ಷಣ ಗೋಚರಿಸುತ್ತಿದೆ. ಈ ನಡುವಲ್ಲೇ ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ನೀಡಿದ್ದು, ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಕೊರೊನಾ ತಪಾಸಣೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯಷ್ಟೆ ಆರಂಭವಾಗಿದ್ದ ಶೈಕ್ಷಣಿಕ ಚಟುವಟಿಕೆ ಮತ್ತೆ ಸ್ತಬ್ದವಾಗುವ ಭೀತಿ ಎದುರಾಗಿದೆ. ಈಗಾಗಲೇ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಮೈಸೂರು ಜಿಲ್ಲೆಗಳಲ್ಲಿ ಸೋಂಕು ಉಲ್ಬಣವಾಗುವ ಸೂಚನೆ ದೊರೆತಿದೆ. ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೋವಿಡ್ ತಾಂತ್ರಿಕ ಸಮಿತಿಯ ಸಭೆಯನ್ನು ನಡೆಸಿದ್ದಾರೆ.
ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಮಿತಿಯ ಬಣ್ಣಗಳ ಆಧಾರದ ಮೇಲೆ ರಾಜ್ಯದಲ್ಲಿ ಲಾಕ್ಡೌನ್ ಹೇರಿಕೆ ಮಾಡುವಂತೆ ಸಲಹೆಯನ್ನು ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ.1ಕ್ಕಿಂತಲೂ ಕಡಿಮೆಯಿದೆ. ಒಂದೊಮ್ಮೆ ಶೇ.1ರಷ್ಟು ಕೊರೊನಾ ಸೋಂಕಿನ ಪ್ರಮಾಣ ದಾಖಲಾದ್ರೆ ಯೆಲ್ಲೋ ಅಲರ್ಟ್ ಘೋಷಣೆ ಮಾಡುವಂತೆ ಕೋವಿಡ್ ತಾಂತ್ರಿಕ ಸಮಿತಿ ಸೂಚಿಸಿದೆ. ಮದುವೆ, ಸಭೆ ಸಮಾರಂಭ ಹಾಗೂ ಅಂತ್ಯಕ್ರೀಯೆ ಸೇರಿದಂತೆ ಕೆಲವು ನಿರ್ಬಂಧಗಳನ್ನು ಹೇರಲಾಗುತ್ತದೆ.
ಒಂದೊಮ್ಮೆ ಶೇ.2ರಷ್ಟು ಕೊರೊನಾ ಪಾಸಿಟಿವಿಟಿ ದರ ದಾಖಲಾದ್ರೆ ಆಗ ಆರೆಂಜ್ ಅಲರ್ಟ್ ಘೋಷಿಸಲಾಗುತ್ತದೆ. ಆರೆಂಜ್ ಅಲರ್ಟ್ ಘೋಷಣೆಯಾದ್ರೆ ಶಾಲೆ, ಕಾಲೇಜುಗಳಿಗೆ ಶೇ.50ರಷ್ಟು ಹಾಜರಾತಿಯ ನಿರ್ಬಂಧವನ್ನು ಹೇರಲಾಗುತ್ತದೆ. ಒಂದೊಮ್ಮೆ ಶೇ.5ರಷ್ಟು ಪಾಸಿಟಿವಿಟಿ ದರ ಅಥವಾ ಶೇ.೪೦ರಷ್ಟು ಐಸಿಯು ಬೆಡ್ಗಳು ಭರ್ತಿಯಾದ್ರೆ, ಕೂಡಲೇ ಲಾಕ್ಡೌನ್ ಜಾರಿ ಮಾಡುವಂತೆ ಕೋವಿಡ್ ತಾಂತ್ರಿಕ ಸಮಿತಿ ಸಲಹೆ ನೀಡಿದೆ.
ರಾಜ್ಯದಲ್ಲಿ ಶೇ.3ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ದಾಖಲಾದ್ರೆ ಶಾಲೆ ಹಾಗೂ ಕಾಲೇಜುಗಳು ಬಂದ್ ಆಗೋದು ಖಚಿತ. ಕೋವಿಡ್ ತಾಂತ್ರಿಕ ಸಮಿತಿ ನೈಟ್ ಕರ್ಪ್ಯೂ ಅವಧಿಯನ್ನು ಸಂಜೆ 7ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಗೆ ತರುವಂತೆಯೂ ಸೂಚಿಸಿದೆ. ಜೊತೆಗೆ ಮಾಸ್ಕ್, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸುವ ಜೊತೆಗೆ ಕೋವಿಡ್ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವಂತೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ ಸಕ್ರೀಯ ಪ್ರಕರಣಗಳ ಸಂಖ್ಯೆ ಹತ್ತು ಸಾವಿರದ ಅಂಚಿನಲ್ಲಿದೆ. ಓಮಿಕ್ರಾನ್ ಸೋಂಕು ಉಲ್ಬಣವಾಗುತ್ತಿದ್ದು, ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿದೆ. ಈಗಾಗಲೇ ಶಾಲೆ, ಕಾಲೇಜುಗಳಲ್ಲಿಯೂ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದ್ದು, ರಾಜ್ಯ ಸರಕಾರ ಸದ್ಯಕ್ಕೆ ಮೈ ಮರೆಯುವಂತಿಲ್ಲ. ದಿನಂಪ್ರತಿ ಸಾವಿರಕ್ಕೂ ಅಧಿಕ ಸೋಂಕು ದಾಖಲಾದ್ರೆ ಆರಂಭಿಕ ಹಂತದಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಸಾಧ್ಯತೆಯಿದೆ.
ಮಹಾರಾಷ್ಟ್ರದಲ್ಲಿ ಈಗಾಗಲೇ ಭಾಗಶಃ ಲಾಕ್ಡೌನ್ ಜಾರಿ ಮಾಡಿದ್ರೆ, ತಮಿಳುನಾಡು ಸರಕಾರ ಶಾಲೆಗಳನ್ನು ಬಂದ್ ಮಾಡಿದೆ. ಶಾಲೆಗಳಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ಹಾಕಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ ಆದ್ರೂ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಓಮಿಕ್ರಾನ್ ಸ್ಪೋಟ ಸಂಭವಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಲ್ಲಿ ಕೈಗೊಳ್ಳಬೇಕಾದ ನಿರ್ಬಂಧಗಳ ಕುರಿತು ಚಿಂತನೆ ನಡೆಸಿದ್ದಾರೆ. ಇನ್ನೊಂದೆಡೆಯಲ್ಲಿ ಶಿಕ್ಷಣ ಸಚಿವರು ಕೂಡ ಶಾಲೆಗಳಲ್ಲಿನ ಪರಿಸ್ಥಿತಿಯನ್ನು ಅರಿಯುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಏರಿಕೆಯಾದ್ರೆ ಶಾಲೆ, ಕಾಲೇಜುಗಳು ಬಂದ್ ಆಗೋದು ಖಚಿತ.
Schools shut down again!!!
Discussion about this post