ಮಂಗಳೂರು : ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಕಾರ್ಮಿಕನ ತಲೆ ಕೆಳಗಾಗಿಸಿ ಕೈ ಕಾಲು ಕಟ್ಟಿ ಹಲ್ಲೆ ನಡೆಸಿದ ಅಮಾನವೀಯ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊಂಡೂರು ಪೋಲಯ್ಯ (ಪ್ರಾಯ 23 ವರ್ಷ), ಅವುಲ ರಾಜ್ ಕುಮಾರ್ (ಪ್ರಾಯ 26 ವರ್ಷ), ಕಾಟಂಗರಿ ಮನೋಹರ್ (ಪ್ರಾಯ 21 ವರ್ಷ), ವೂಟುಕೋರಿ ಜಾಲಯ್ಯ (ಪ್ರಾಯ 30 ವರ್ಷ), ಕರಪಿಂಗಾರ ರವಿ ಪ್ರಾಯ 27 ವರ್ಷ, ಪ್ರಲಯಕಾವೇರಿ ಗೋವಿಂದಯ್ಯ (ಪ್ರಾಯ 47 ವರ್ಷ) ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ: ದಿನಾಂಕ 14-12-2021 ರಂದು ರಾತ್ರಿ ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿರುವ ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಾಟಮ್ವಾರಿ ಪಾಲೆಮ್ ನಿವಾಸಿ ವೈಲ ಶೀನು ( 32) ಎಂಬಾತ ಮಂಗಳೂರು ದಕ್ಕೆಯಲ್ಲಿ ನಿಲ್ಲಿಸಿದ್ದ JOHN SHAILESH 2 ” ಎಂಬ ಬೋಟಿಗೆ ಹೋಗಿ ವಾಪಾಸು ತಾನು ಕೆಲಸ ಮಾಡುವ ಬೋಟಿನಲ್ಲಿ ಮಲಗಿದ್ದ.
ದಿನಾಂಕ : 15-12-2021 ರಂದು JOHN SHAILESH 2 ಬೋಟಿನಲ್ಲಿ ಕೆಲಸ ಮಾಡುತ್ತಿರುವ ಆರು ಜನ ಆರೋಪಿಗಳು ವೈಲಾ ಶೀನು ಬಳಿಗೆ ಬಂದು ನಿನ್ನ ರಾತ್ರಿ ಬೋಟಿಗೆ ಬಂದವನು ಮೊಬೈಲ್ ಕಳ್ಳತನ ಮಾಡಿದ್ದೀಯಾ ಎಂದು ಹೇಳಿ, ಬೆಳಿಗ್ಗೆ 11-15 ಗಂಟೆಗೆ ವೈಲಾ ಶೀನುನನ್ನು ಅಪಹರಿಸಿಕೊಂಡು JOHN SHAILESH 2 ಬೋಟಿಗೆ ಹೋಗಿ, ಎಲ್ಲರು ಸೇರಿಕೊಂಡು ವೈಲಾ ಶಿನುನ ಕೈ ಕಾಲುಗಳನ್ನು ಹಿಡಿದು, ಬೊಬ್ಬೆ ಹಾಕದಂತೆ ಬಾಯಿ ಮುಚ್ಚಿ, ಎರಡೂ ಕಾಲುಗಳನ್ನು ಜೋಡಿಸಿ ಹಗ್ಗದಿಂದ ಕಟ್ಟಿ ಬಳಿಕ ಕಾಲಿಗೆ ಕಟ್ಟಿದ ಹಗ್ಗವನ್ನು ಬೋಟ್ ನ ಆರಿಯ ಕೊಕ್ಕೆಗೆ ಸಿಕ್ಕಿಸಿ ತಲೆ ಕೆಳಗಡೆ ಮಾಡಿ ವೈಲ ಶೀನು ರವರನ್ನು ನೇತಾಡಿಸಿ ಕೈಗಳಿಂದ, ಮರದ ರೀಪಿನಿಂದ ಹಾಗೂ ಕಬ್ಬಿಣದ ಸರಳವಳಿಯಿಂದ ಹಲ್ಲೆ ನಡೆಸಿ ಕೊಲೆ ನಡೆಸಲು ಪ್ರಯತ್ನಿಸಿದ್ದಾರೆ.
ಆರೋಪಿಗಳು ವೈಲಾ ಶೀನುವಿನ ಕಾಲುಗಳನ್ನು ಕಟ್ಟಿ, ಸಮುದ್ರಕ್ಕೆ ಬಿಸಾಡಿ ಕೊಲೆ ನಡೆಸಲು ಮಾತುಕತೆ ನಡೆಸಿದ್ದು, ಆ ಸಮಯ ಸಾರ್ವಜನಿಕರು ಬಂದು ಮೈಲು ಶೀನುವನ್ನು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅಪಹರಣ ಹಾಗೂ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಇದೀಗ ಮಂಗಳೂರು ದಕ್ಕೆ ಬಳಿಯಿಂದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ಕೃತ್ಯಕ್ಕೆ ಬಳಸಿದ ಮರದ ರೀಪು, ಕಬ್ಬಿಣದ ಸರಪಳಿ, ಹಗ್ಗ ಹಾಗೂ ಮೊಬೈಲ್ ಹ್ಯಾಂಡ್ ಸೆಟ್ಟನ್ನು ವಶಕ್ಕೆ ಪಡೆದಿದ್ದಾರೆ
Six accused arrested
Discussion about this post