ಬೆಂಗಳೂರು: ಭಾರತೀಯ ಯುವ ಕಾಂಗ್ರೆಸ್ ಘಟಕವು ಜನಪ್ರಿಯ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ದೆಹಲಿಯ ಸಂಸತ್ ಮಾರ್ಗದ ಪೋಲೀಸ್ ಠಾಣೆಯಲ್ಲಿ ಶನಿವಾರ (ನ.20) ದೇಶದ್ರೋಹದ ದೂರನ್ನು ದಾಖಲಿಸಿದೆ.
ತೀವ್ರ ವಿರೋಧದ ನಂತರ ಶುಕ್ರವಾರ ಪ್ರಧಾನಿ ಮೋದಿ ರೈತ ಕಾನೂನುಗಳನ್ನು ಹಿಂಪಡೆಯುವ ಘೋಷಣೆ ಮಾಡಿದ್ದರು. ಇದಾದ ಬಳಿಕ ತಮ್ಮ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದ ಖಾತೆಯಿಂದ “ಭಾರತ ಜಿಹಾದಿ ರಾಷ್ಟ್ರವಾಗಿದ್ದು ಸರ್ವಾಧಿಕಾರಿ ಆಡಳಿತದ ಅವಶ್ಯಕತೆಯಿದೆ ಎನ್ನುವ ಪೋಸ್ಟ್ ಹಾಕಿದ್ದಾರೆಂದು ಯುವ ಕಾಂಗ್ರೆಸ್ ಪೋಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದೆ.
ಯುವ ಕಾಂಗ್ರೆಸ್ನ ಕಾನೂನು ಘಟಕವು ಕಂಗನಾರ ವಿರುದ್ಧ ದೇಶದ್ರೋಹ ಹಾಗೂ ಶಾಂತಿಭಂಗ ಪ್ರಯತ್ನದ ದೂರು ದಾಖಲಿಸಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಯುವ ಕಾಂಗ್ರೆಸ್ನ ರಾಷ್ಟ್ರೀಯ ಘಟಕದ ಕಾರ್ಯದರ್ಶಿ ಅಮ್ರೀಶ್ ರಂಜನ್ ಪಾಂಡೆ ಹಾಗೂ ಘಟಕದ ಕಾನೂನು ವಿಭಾಗದ ಸಂಯೋಜಕ ಅಂಬುಜ್ ದೀಕ್ಷಿತ್ ಈ ದೂರನ್ನು ದಾಖಲಿಸಿದ್ದಾರೆ.
ಕಂಗನಾ ರಣಾವತ್ ಬಾಲಿವುಡ್ನ ಜನಪ್ರಿಯ ನಟಿಯಾಗಿರುವುದಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದು 78 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಕಾರಣ ಅವರ ಈ ಹೇಳಿಕೆಗಳು ವಿವಿಧ ಸಮುದಾಯಗಳಲ್ಲಿ ದೇಶದ ವಿರುದ್ಧ ಅಸಮಾಧಾನ ಹಾಗೂ ದ್ವೇಷದ ಭಾವನೆಗಳನ್ನು ಉಂಟುಮಾಡುವ ಸಾಧ್ಯತೆಗಳಿವೆಯೆಂದು ಯುವ ಕಾಂಗ್ರೆಸ್ ತನ್ನ ದೂರಿನಲ್ಲಿ ಆತಂಕ ವ್ಯಕ್ತಪಡಿಸಿದೆ.
ಕಂಗನಾ ವಿರುದ್ಧ ಭಾರತೀಯ ದಂಡಸಂಹಿತೆಯ 124ಎ (ದೇಶದ್ರೋಹ), 504 (ಉದ್ದೇಶಪೂರ್ವಕವಾಗಿ ಅವಮಾನ ಹಾಗೂ ತನ್ಮೂಲಕ ಶಾಂತಿಭಂಗ ಉಂಟುಮಾಡುವ ಪ್ರಯತ್ನ), ಹಾಗೂ 505 (ಸಾರ್ವಜನಿಕ ಉಪದ್ರವದ ಹೇಳಿಕೆ) ಕಲಂಗಳ ಅನ್ವಯ ದೂರನ್ನು ದಾಖಲಿಸಿ ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸಬೇಕೆಂದು ಮನವಿ ಮಾಡಲಾಗಿದೆ ಎಂದು ಯುವ ಕಾಂಗ್ರೆಸ್ನ ಕಾರ್ಯದರ್ಶಿ ಅಮ್ರೀಶ್ ರಂಜನ್ ಪಾಂಡೆ ತಿಳಿಸಿದ್ದಾರೆ.
ಇದೇ ವೇಳೆ, ದೆಹಲಿಯ ಸಿಖ್ ಗುರುದ್ವಾರ ಪ್ರಬಂಧನಾ ಸಮಿತಿಯ ಅಧ್ಯಕ್ಷ ಹಾಗೂ ಶಿರೋಮಣಿ ಅಕಾಲಿದಳದ ನಾಯಕ ಮನ್ಜಿಂದರ್ ಸಿಂಗ್ ಸಿರ್ಸಾ ಸಹ ಕಂಗನಾ ನೀಡಿದ್ದಾರೆನ್ನಲಾಗಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು ಅವರ ಈ ಹೇಳಿಕೆ ಸಿಖ್ಖರನ್ನು ಗುರಿಯಾಗಿಟ್ಟು ನೀಡಲಾಗಿರುವ ಕಾರಣ ಅವರ ವಿರುದ್ಧ ಸರಕಾರವು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅವರನ್ನು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಬೇಕು ಅಥವಾ ಬಂಧಿಸಬೇಕೆಂದು ಸಿರ್ಸಾ ತಮ್ಮ ಟ್ವೀಟ್ನಲ್ಲಿ ಆಗ್ರಹಿಸಿದ್ದಾರೆ.
Youth Congress Files a Police Complaint against actress Kangana Ranaut for her alleged posts on Instagram
ಇದನ್ನೂ ಓದಿ: ಕಂಗನಾ ರನೌತ್ ಹೇಳಿಕೆಗೆ ಜಾವೇದ್ ಅಖ್ತರ್ ತಿರುಗೇಟು
ಇದನ್ನೂ ಓದಿ: Kangana Ranaut: ಕಂಗನಾ ರಾಣಾವತ್ ಹೇಳಿಕೆ ಬೌದ್ಧಿಕ ದಿವಾಳಿತನದ ಹೇಳಿಕೆ
Discussion about this post