ಚಿಕ್ಕಮಗಳೂರು: 2022 ರ ಜನವರಿ ಅಥವಾ ಫೆಬ್ರವರಿ ಅಂತ್ಯದೊಳಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಶಾಸಕ ಸಿ.ಟಿ ರವಿ ಹೇಳಿದರು.
ನಗರದ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಗ್ರಾಮಾಂತರ ಮಂಡಲ ವತಿಯಿಂದ ಜನಸ್ವರಾಜ್ ಯಾತ್ರೆ ಹಾಗೂ ವಿಧಾನ ಪರಿಷತ್ ಚುನಾವಣೆ ಸಂಬಂಧ ಬಿಜಪಿ ಪ್ರಮುಖರು, ಹಾಗೂ ಪ್ರಭಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಡಿಸೆಂಬರ್ ೨೫ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ. ಉತ್ತಮ ಆಡಳಿತ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದೊಡ್ಡವರು ಮಾಡಿದ ಸಣ್ಣ ಕೆಲಸಗಳನ್ನು ದೊಡ್ಡದಾಗಿ ಪ್ರಚಾರ ನೀಡಿ ಬಿಂಬಿಸಲಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಣ್ಣ ಮಟ್ಟದಲ್ಲಿ ಎಲೆಮರೆ ಕಾಯಿಯಂತೆ ಇದ್ದು ದೊಡ್ಡ ಸಾಧನೆ ಮಾಡಿದ ಹಾಜಬ್ಬ, ಮಂಜಮ್ಮ ಜೋಗತಿ ಸೇರಿದಂತೆ ಅನೇಕ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯ ಮಾಡುತ್ತಿದೆ. ಅದೇ ಮಾದರಿಯಲ್ಲಿ ಜಿಲ್ಲೆಯ ಎಲ್ಲಾ ಬಿಜೆಪಿ ಶಕ್ತಿ ಕೇಂದ್ರಗಳಲ್ಲಿ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕೆಲಸವಾಗಬೇಕಿದೆ ಎಂದು ಸಲಹೆ ನೀಡಿದರು.
ನವೆಂಬರ್ ೧೩ ರಂದು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಗ್ರಾಮಪಂಚಾಯಿತಿಗಳ ಸದಸ್ಯರನ್ನು ಸಂಘಟಿಸಿ. ನ.೧೮ ಜನಸ್ವರಾಜ್ ಯಾತ್ರೆ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು, ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಂಘಟಿತರಾಗಬೇಕು. ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯಲ್ಲಿ ಅನದೀಕೃತವಾಗಿ ಸೇರ್ಪಡೆಗೊಂಡಿರುವವರನ್ನು ತೆಗೆದು ಹಾಕಿ, ಅಧೀಕೃತವಾದವರು, ಪಟ್ಟಿಯಲ್ಲಿ ಹೆಸರು ಇಲ್ಲದವರನ್ನು ಸೇರ್ಪಡೆಗೊಳಿಸುವ ಕಾರ್ಯವಾಗಬೇಕಿದೆ. ಬಿಜೆಪಿ ಬೆಂಬಲಿತ ೧೪೦೦ ಕ್ಕೂ ಗ್ರಾ.ಪಂ ಸದಸ್ಯರಿದ್ದು ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವ ವಿಶ್ವಾಸವಿದೆ ಎಂದರು.
ಮುಂದಿನ ಜನವರಿ ಅಥವಾ ಫೆಬ್ರವರಿ ಅಂತ್ಯದೊಳಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಘೋಷಣೆ ಸಾಧ್ಯತೆ ಮಾರ್ಚ್ ಒಳಗಾಗಿ ಚುನಾವಣೆ ಪ್ರಕ್ರಿಯೆ ಮುಗಿಸುವಂತೆ ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಗ್ರಾಮಾಂತರ ಮಂಡಲದ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಮಾತನಾಡಿ ನವೆಂಬರ್ ೧೮ ರಂದು ನಡೆಯುವ ಜನಸ್ವರಾಜ್ ಯಾತ್ರೆ ಜತೆಗೆ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳ ಪ್ರಚಾರ ಕೈಗೊಳ್ಳುವ ಮೂಲಕ ಬಿಜೆಪಿ ಬೆಂಬಲಿತ ಗ್ರಾಮಪಂಚಾಯಿತಿ ಸದಸ್ಯರನ್ನು ಹಾಗೂ ಬೂತ್ನ ಸದಸ್ಯರನ್ನು ಸಂಘಟಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಡಿಸೆಂಬರ್ ೬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ, ಡಿ.೨೫ ಕ್ಕೆ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವಿದ್ದು ಅಂದು ಜಿಲ್ಲೆಯ ಎಲ್ಲಾ ಬೂತ್ ಕೇಂದ್ರಗಳಲ್ಲಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲಾಗುತ್ತಿದ್ದ ದತ್ತಜಯಂತಿಯನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಭಾರಿ ಚೆನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೀಕನಹಳ್ಳಿ ಸೋಮಶೇಖರ್, ವಿಜಯ್ಕುಮಾರ್ ಗುಣಸಾಗರ, ಸಿಡಿಎ ಅಧ್ಯಕ್ಷ ಆನಂದ್, ಸೀತಾರಾಮ ಭರಣ್ಯ, ತೋಟದಹಳ್ಳಿ ಶಿವಕುಮಾರ್, ಪಿಳ್ಳೇನಹಳ್ಳಿ ರಮೇಶ್ ಸೇರಿದಂತೆ ಮತ್ತಿತರರು ಇದ್ದರು.
Discussion about this post