ಕೊಡಗು: ಕೊಡಗು ಜಿಲ್ಲೆಗೆ ಪ್ರವಾಸ ಹೋಗುವವರಿಗೆ ಇದು ಖುಷಿಯ ಸುದ್ದಿ. ಏಕೆಂದರೆ ಕುಶಾಲನಗರ ತಾಲೂಕಿನ ವಿಶ್ವ ಪ್ರಸಿದ್ಧ ನಿಸರ್ಗಧಾಮಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ನಿಸರ್ಗಧಾಮದೊಳಗೆ ದಕ್ಷಿಣ ಆಫ್ರಿಕಾದ ಗಿಳಿಗಳ ಕಲರವ ಕೇಳಿಸುತ್ತಿವೆ. ಇಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ಪಕ್ಷಿ ಕೇಂದ್ರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಲಾಕ್ಡೌನ್ ವೇಳೆ ಇಲ್ಲಿ ಪಕ್ಷಿ ಕೇಂದ್ರದ ಕಾಮಗಾರಿ ನಡೆದಿದ್ದು ಇದೀಗ ಪಕ್ಷಿಗಳನ್ನು ತಂದು ಬಿಡಲಾಗಿದೆ. ಈ ಪಕ್ಷಿಗಳು ಸ್ವಭಾವತ ಮನುಷ್ಯರೊಂದಿಗೆ ಆತ್ಮೀಯವಾಗಿರುವುದು ಪ್ರವಾಸಿಗರ ಖುಷಿಗೆ ಕಾರಣವಾಗಿದೆ. ಪ್ರವಾಸಿಗರ ಕೈಯಿಗೆ ಕಾಳುಗಳನ್ನು ಹಾಕಿದರೆ ಸಾಕು ಈ ಪಕ್ಷಿಗಳು ಹಾರಿ ಬಂದು ಕೈಯಲ್ಲಿ ಕುಳಿತು ಯಾವುದೇ ಅಳುಕಿಲ್ಲದೆ ಆಹಾರ ಸೇವಿಸುತ್ತವೆ. ಕಾಡು ಪಕ್ಷಿಗಳು ಹೀಗೆ ಕೈ, ತಲೆ, ಹೆಗಲ ಮೇಲೆ ಕುಳಿತುಕೊಳ್ಳುವುದು ಅಂದರೆ ಪ್ರವಾಸಿಗರಿಗೆ ವಿಶೇಷ ಮುದ ನೀಡುತ್ತಿವೆ.
ಸದ್ಯ ಆಫ್ರಿಕಾದ ಮಕಾವ್ ತಳಿಯ ಮೂರು ಬಗೆಯ ಗಿಳಿಗಳು ಇಲ್ಲಿವೆ. ಅರಣ್ಯ ಇಲಾಖೆ ಖಾಸಗಿ ಸಹಯೋಗದಲ್ಲಿ ಈ ಪಕ್ಷಿ ಕೇಂದ್ರ ಸ್ಥಾಪನೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಕೇಂದ್ರವನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಹೊಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ದಸರಾ ರಜೆಯಲ್ಲಿ ಕೊಡಗಿಗೆ ಪ್ರವಾಸ ಆಗಮಿಸುತ್ತಿರುವವರಿಗೆ ಈ ಕೇಂದ್ರ ವಿಶೇಷ ಅನುಭವ ನೀಡುತ್ತಿದ್ದು ಎಲ್ಲರೂ ಖುಷಿಪಡುತ್ತಿದ್ದಾರೆ.

























Discussion about this post